ಕನಕದಾಸರ ಆದರ್ಶ ಈ ನೆಲದಲ್ಲಿ ಇನ್ನೂ ಸಾಕಾರಗೊಂಡಿಲ್ಲ: ಡಾ.ಮಹಾಬಲೇಶ್ವರ ರಾವ್

ಉಡುಪಿ: ಕುಲಕ್ಕಿಂತ ಮಿಗಿಲಾದುದು ಭಕ್ತಿ, ಮಾನವೀಯತೆ ಎಂಬುದನ್ನು ಕನಕದಾಸರು ಪ್ರತಿಪಾದಿಸಿದರು. ಆದರೆ ಇಂದಿನ ವಿದ್ಯಾವಂತ ಸಮಾಜದಲ್ಲಿ ಜಾತೀಯತೆ ಕಡಿಮೆ ಆಗುವ ಬದಲು ಜಾತಿ ಜಾತಿಗಳ ಮಧ್ಯೆ ಫೈಪೋಟಿ ಹೆಚ್ಚಾಗುತ್ತಿದೆ. ಜಾತಿಯ ಹೆಸರಿನಲ್ಲಿ ಇನ್ನೊಂದು ಜಾತಿಯ ಬಗ್ಗೆ ಧ್ವೇಷ, ಅಸಹನೆ ಮೂಡಿಸಲಾಗುತ್ತಿದೆ. ಇದರಿಂದ ಈ ನೆಲದಲ್ಲಿ ಕನಕದಾಸರ ಆದರ್ಶವು ನಿಜವಾಗಿಯೂ ಸಕಾರಗೊಂಡಿಲ್ಲ ಎಂದು ಅನಿಸುತ್ತದೆ ಎಂದು ಹಿರಿಯ ಸಾಹಿತಿ ಡಾ.ಮಹಾಬಲೇಶ್ವರ ರಾವ್ ಹೇಳಿದ್ದಾರೆ.
ಉಡುಪಿ ಕನಕದಾಸ ಅಧ್ಯಯನ ಸಂಶೋಧನ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಶ್ರಯದಲ್ಲಿ ಶನಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಕನಕ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಉಡುಪಿ ಜನ ಕನಕನನ್ನು ಮರೆತೇ ಬಿಟ್ಟಿದ್ದಾರೆ. ಕನಕ ಬಗ್ಗೆ ಪ್ರೀತಿ ಇದಿದ್ದರೆ ಧಾರ್ಮಿಕ ಜೀವನದಲ್ಲಿ ಈ ರೀತಿಯ ಆಡಂಬರ ಇರುತ್ತಿರಲಿಲ್ಲ. ಧಾರ್ಮಿಕ ಕೇಂದ್ರಗಳು ಇಂದು ವ್ಯಾಪಾರೀ ಕೇಂದ್ರಗಳಾಗಿವೆ. ಆಡಂಬರವೇ ಪ್ರಧಾನವಾಗಿ ಆಧ್ಯಾತ್ಮಿಕ ಸಂಪೂರ್ಣ ಸೊರಗಿ ಹೋಗಿದೆ. ದೇವಾಲಯಗಳ ವಿಚಾರದಲ್ಲಿ ಕಟ್ಟುಕಥೆಗಳು, ಸ್ಥಳ ಪೂರಾಣಗಳದ್ದೇ ಪ್ರಾಬಲ್ಯ ಹೆಚ್ಚಾಗುತ್ತಿದೆ. ಅದಕ್ಕೆ ಬದಲಾಗಿ ಯುವಜನ ಐತಿಹಾಸಿಕದ ಬಗ್ಗೆ ಹೆಚ್ಚು ಗಮನಕೊಡಬೇಕು ಎಂದು ಅವರು ತಿಳಿಸಿದರು.
‘ದಾಸ ಪರಂಪರೆಯ ಅನನ್ಯ ಚೇತನ ಕನಕದಾಸರು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಮಂಗಳೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಆರ್. ನರಸಿಂಹಮೂರ್ತಿ ಮಾತನಾಡಿ, 570 ವರ್ಷಗಳ ಹಿಂದೆ ಮನುಷ್ಯರಿಗೆ ಬೇಕಾದ ನೀತಿ ಮಾರ್ಗವನ್ನು ಪ್ರತಿಪಾದಿಸಿ, ಜೀವನದ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ಲೋಕದ ಜನರ ಕಲ್ಯಾಣಾರ್ಥವಾಗಿ ಊರು ಸುತ್ತಿ ಜೀವನ ನಡೆಸಿದ ಕನಕದಾಸರು ಇಂದಿಗೂ ಅತ್ಯಂತ ಪ್ರಸ್ತುತ ಹಾಗೂ ಶ್ರೇಷ್ಟ ಎನಿಸಿ ಕೊಳ್ಳುತ್ತಿದ್ದಾರೆ ಎಂದರು.
ಐದು ಶತಮಾನಗಳ ಕಾಲ ನಾನಾ ರೀತಿ ಸಂವಾದ, ಚರ್ಚೆಗಳಿಗೆ ಗ್ರಾಸವಾಗಿರುವ ಅವರು, ಸುಧೀರ್ಘ ಜೀವನವನ್ನು ಅರ್ಥಪೂರ್ಣವಾಗಿ ನಡೆಸಿ ಮಾದರಿಯಾಗಿರುವ ಕನಕರನ್ನು ಸ್ಮರಿಸುವುದು ಇಂದಿನ ಅಗತ್ಯ. ಅವರ ಕಾರ್ಯವನ್ನು ಮತ್ತೊಮ್ಮೆ ಪುನರ್ ಪರಿಶೀಲನೆ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಕನಕದಾಸರು ಕೀರ್ತನೆ ಮಾತ್ರವಲ್ಲದೆ ಸಾಹಿತ್ಯ ಕೃತಿಗಳನ್ನು ಮತ್ತು ಕಾವ್ಯಗಳನ್ನು ರಚಿಸಿದ್ದರು. ಕನಕದಾಸರು ಕೀರ್ತನೆಗಳನ್ನು ಶಾಸ್ತ್ರೀಯ ಸಂಗೀತ, ಕಾವ್ಯಕ್ಕೆ ಒಗ್ಗುವ ಹಾಗೆ ರಚಿಸಿರುವುದು ವಿಶೇಷ. ಆ ಮೂಲಕ ಕನಕರ ಕೀರ್ತನೆಗಳಲ್ಲಿ ಕಾವ್ಯಗಳನ್ನು ಕಾಣಬಹುದಾಗಿದೆ. ಅಂತಹ ವಿಶಿಷ್ಟವಾದ ಕವಿ ಎಂದು ಅವರು ಹೇಳಿದರು.
ಎಂಜಿಎಂ ಕಾಲೇಜಿನ ಗಾಂಧಿಯನ್ ಸೆಂಟರ್ ಮುಖ್ಯಸ್ಥ ವಿನೀತ್ ರಾವ್ ಮಾತನಾಡಿದರು. ಈ ಸಂದರ್ಭದಲ್ಲಿ ಕನಕ ಕೀರ್ತನೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಉಡುಪಿ ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಸಹ ಸಂಶೋಧಕ ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನಾ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಂದ ಕನಕ ಕೀರ್ತನೆ ನಡೆಯಿತು.







