ಕಾರ್ಕಳ | ಮೊಬೈಲ್ ಕೊಡಿಸದಿದ್ದಕ್ಕೆ ಕಲ್ಲಿನ ಕೋರೆಗೆ ಹಾರಿ ಬಾಲಕ ಆತ್ಮಹತ್ಯೆ

ಕಾರ್ಕಳ, ನ.14: ಮನೆಯವರು ಹೊಸ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಕಲ್ಲುಕೋರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂದಳಿಕೆ ಗ್ರಾಮದ ಕೊಡ್ಸರಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ನಂದಳಿಕೆಯ ಸುರೇಖಾ ಎಂಬವರ ಮಗ ಸುಮಂತ ದೇವಾಡಿಗ(16) ಎಂದು ಗುರುತಿಸಲಾಗಿದೆ. ಸುಮಂತ ನಿಟ್ಟೆ ಕಾಲೇಜಿನಲ್ಲಿ ಮೊದಲನೇ ವರ್ಷದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ನ.12ರಂದು ಸಂಜೆ ಮನೆಯಲ್ಲಿ ತನ್ನ ತಾಯಿಯೊಂದಿಗೆ ಹೊಸ ಮೊಬೈಲ್ ತೆಗೆದುಕೊಡ ಬೇಕೆಂದು ಜಗಳ ಮಾಡಿ ಮನೆ ಬಿಟ್ಟು ಹೋಗಿ ನಾಪತ್ತೆಯಾಗಿದ್ದನು.
ಹುಡುಕಾಡಿದಾಗ ನ.13ರಂದು ಮಧ್ಯಾಹ್ನ ವೇಳೆ ಕೊಡ್ಸರಬೆಟ್ಟು ಕಲ್ಲಿನ ಕೋರೆಯ ನಿಂತ ನೀರಿನಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಮೊಬೈಲ್ ಕೊಡಿಸದ ಸಿಟ್ಟಿನಲ್ಲಿ ಆತ ಕಲ್ಲುಕೋರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







