ಕಾರ್ಕಳ | ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕರ ಭೇಟಿ

ಕಾರ್ಕಳ, ನ.18: ಮಿಯ್ಯಾರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ಸುನಿಲ್ ಕುಮಾರ್ ಇಂದು ಬೆಳಿಗ್ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪ್ರಸಕ್ತ ವಿದ್ಯಮಾನ ಕುರಿತು ಪರಿಶೀಲನೆ ನಡೆಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಕರಾದ ಮದರಸ ಎಸ್.ಮಕಾಂದರ, ಶಾಲೆಯ ವಿದ್ಯಾರ್ಥಿಗಳಿಗೆ ಬಸ್ಕಿ ಹೊಡೆಸುವುದು ಇತರ ದೈಹಿಕ ಶಿಕ್ಷೆಗಳನ್ನು ನೀಡುವುದು ಸೇರಿದಂತೆ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಶಾಸಕರು ಶಾಲೆಗೆ ಭೇಟಿ ನೀಡಿ ಸಭೆ ನಡೆಸಿದರು
ಮೊರಾರ್ಜಿ ವಸತಿ ಶಾಲೆಯು ಉತ್ತಮ ಹಾಗೂ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಇದೀಗ ಇಂತಹ ಶಿಕ್ಷಕರ ದುರ್ವರ್ತನೆಯಿಂದಾಗಿ ಶಾಲೆಯ ಉತ್ತಮ ವಾತವರಣ ಕೆಡಿಸಿದಂತಾಗಿದೆ. ಈ ರೀತಿಯ ಘಟನೆಗಳು ನಮ್ಮ ಕಾರ್ಕಳದಲ್ಲಿ ನಡೆದಿರುವುದು ಅತ್ಯಂತ ಖಂಡನೀಯ. ಇಂತಹ ಘಟನೆ ಸಮಾಜದ ನಡುವೆ ಒಡಕು ಸೃಷ್ಠಿಸಲು ಕುಮ್ಮಕ್ಕು ನೀಡಿದಂತಾಗುತ್ತದೆ. ಆದ ಕಾರಣ ಇಂತಹ ಶಿಕ್ಷಕರ ವಿರುದ್ದ ಸೂಕ್ತ ಶಿಕ್ಷೆ ಆಗುವಂತೆ ಹಾಗೂ ಈ ರೀತಿಯ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂಬ ಶಾಸಕರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಕಳ ತಹಶೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರು ಶಾಲೆಯ ಶಿಕ್ಷಕ ವರ್ಗ, ಅಧಿಕಾರಿಗಳು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.







