ಕಾರ್ಕಳ| ವ್ಯಕ್ತಿಯ ಕೊಲೆ ಪ್ರಕರಣ: ಆರೋಪಿ ಪರೀಕ್ಷಿತ್ ಗೌಡ ಬಂಧನ

(ನವೀನ್ ಪೂಜಾರಿ - ಪರೀಕ್ಷಿತ್)
ಕಾರ್ಕಳ, ಆ.26: ಮಹಿಳೆಯ ಗೆಳೆತನದ ವಿಚಾರವಾಗಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಲ್ಪಾಡಿ ಎಂಬಲ್ಲಿ ಆ.26ರಂದು ನಸುಕಿನ ವೇಳೆ ನಡೆದಿದೆ.
ಮೃತರನ್ನು ಮಂಗಳೂರು ಮೂಲದ ನವೀನ್ ಪೂಜಾರಿ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಬೆಳ್ತಂಗಡಿ ತಾಲೂಕು ನಾಡ ನಿವಾಸಿ ಪರೀಕ್ಷಿತ್(44) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ಬೆಳಗಿನ ಜಾವ ನವೀನ್ ಪೂಜಾರಿ ಮೃತದೇಹವು ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದು, ಇವರು ಚೂರಿ ಇರಿತರಿಂದ ಗಾಯಗೊಂಡು ಮೃತಪಟ್ಟಿರುವುದು ಕಂಡುಬಂದಿದೆ. ತನಿಖೆ ಮುಂದುವರೆಸಿ, ಸಿಸಿಟಿವಿಗಳನ್ನು ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಅವರನ್ನು ಪರೀಕ್ಷಿತ್ ಎಂಬಾತ ಕೊಲೆ ಮಾಡಿರುವುದು ತಿಳಿದುಬಂದಿದೆ. ಅದರಂತೆ ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಆರೋಪಿ ಪರೀಕ್ಷಿತ್ ಮಂಗಳೂರಿನಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಈತ ತನ್ನ ಪತ್ನಿಯಿಂದ ವಿಚ್ಛೇದನೆ ಪಡೆದು ಕಾರ್ಕಳದ ದೂಪದಕಟ್ಟೆ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸ ಮಾಡಿ ಕೊಂಡಿದ್ದಾನೆ. ಅದೇ ರೀತಿ ನವೀನ್ ಪೂಜಾರಿ ಪತ್ನಿ ಮಕ್ಕಳು ಮಂಗಳೂರಿನಲ್ಲಿ ವಾಸವಾಗಿದ್ದು, ಈತ ಅವರಿಂದ ನಾಲ್ಕೈದು ವರ್ಷಗಳಿಂದ ದೂರು ಇದ್ದು ವಾಸ ಮಾಡಿಕೊಂಡಿದ್ದಾರೆ.
ಪರೀಕ್ಷಿತ್ಗೆ ಪರಿಚಯ ಇರುವ ಮಹಿಳೆ ಜೊತೆ ನವೀನ್ ಪೂಜಾರಿ ಮಾತನಾಡುತಿದ್ದರು ಮತ್ತು ಗೆಳೆತನವನ್ನು ಬೆಳೆಸಿ ಆತ್ಮೀಯರಾಗಿದ್ದರು. ಇದು ಪರೀಕ್ಷಿತ್ ಇಷ್ಟ ಇಲ್ಲವಾಗಿತ್ತು. ಈ ವಿಚಾರದಲ್ಲಿ ಇವರ ಮಧ್ಯೆ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ನವೀನ್ ಪೂಜಾರಿಯನ್ನು ಪರೀಕ್ಷಿತ್ ಕೊಲೆ ಮಾಡಿದ್ದಾನೆ ಎಂಬುದಾಗಿ ತನಿಖೆಯಿಂದ ತಿಳಿದು ಬಂದಿದೆ ಎಂದು ಎಸ್ಪಿ ಮಾಹಿತಿ ನೀಡಿದರು.







