ಕಾರ್ಕಳ : ರೋಟರಿ ಕ್ಲಬ್ ವತಿಯಿಂದ ಇಂಜಿನಿಯರ್ಸ್ ಡೇ, ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಕಾರ್ಕಳ : ಭಾರತದಲ್ಲಿ ಪುರಾಣ ಕಾಲದಿಂದಲೂ ಪ್ರಜಾಪ್ರಭುತ್ವಕ್ಕೆ ಮನ್ನಣೆ ಇತ್ತು. ಬಸವಣ್ಣನವರ ಕಾಲದಲ್ಲಿಯೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಣಬಹುದು. ಪ್ರಜಾಪ್ರಭುತ್ವವು ಎಂದೂ ಸ್ವೇಚ್ಛೆ ಆಗಬಾರದು ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರೊಫೆಸರ್ ಡಾ. ಸುರೇಂದ್ರ ಶೆಟ್ಟಿ ಹೇಳಿದರು. ಅವರು ರೋಟರಿ ಕ್ಲಬ್ ಕಾರ್ಕಳ ವತಿಯಿಂದ ರೋಟರಿ ಬಾಲ ಭವನದಲ್ಲಿ ನಡೆದ ಇಂಜಿನಿಯರ್ಸ್ ಡೇ ಮತ್ತು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಇನ್ನೋರ್ವ ಮುಖ್ಯ ಅತಿಥಿ ಅದೇ ಸಂಸ್ಥೆಯ ಪ್ರೊಫೆಸರ್ ಡಾ. ರಾಧಾಕೃಷ್ಣ ಇಂಜಿನಿಯರ್ಸ್ ಡೇ ಹಾಗೂ ಸೈಬರ್ ಸೆಕ್ಯೂರಿಟಿ ಬಗ್ಗೆ ಮಾತನಾಡುತ್ತಾ ಇಂದಿನ ಡಿಜಿಟಲ್ ಯುಗದಲ್ಲಿ ಡಿಜಿಟಲೀಕರಣದ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ನೀಡಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು ಎಂದರು.
ಕ್ಲಬ್ಬಿನ ಸದಸ್ಯ ಇಂಜಿನಿಯರ್ಸ್ ಗಳನ್ನು ಗುರುತಿಸಿ ಗೌರವಿಸಲಾಯಿತು.ಇಬ್ಬರು ಅತಿಥಿಗಳನ್ನು ಕ್ಲಬ್ಬಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಎಲ್ಲರನ್ನು ಸ್ವಾಗತಿಸಿದರು. ವೃತ್ತಿ ಸೇವಾ ಚೇರ್ಮನ್ ಶೈಲೇಂದ್ರ ರಾವ್ ,ಮೇಜರ್ ಡೋನರ್ ತುಕಾರಾಂ ನಾಯಕ್, ಜಿಲ್ಲಾ ಮಾಜಿ ಗವರ್ನರ್ ಡಾ. ಭರತೇಶ ಆದಿರಾಜ್, ಜನಾರ್ದನ ಇ, ಮೋಹನ್ ಪಡಿವಾಳ್ ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.





