ಕಾರ್ಕಳ : ಕನ್ನಡ ಭಾಷಾ ವೈವಿಧ್ಯತೆ ಗೋಷ್ಠಿ

ಕಾರ್ಕಳ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ,ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಸಾಹಿತ್ಯ ಸಂಘ ಕಾರ್ಕಳ ಇವರ ಸಹಯೋಗದಲ್ಲಿ ಕನ್ನಡ ಭಾಷಾ ವೈವಿಧ್ಯತಾ ಗೋಷ್ಠಿಯ ಕುಂದಾಪ್ರ ಭಾಷೆ ಅರೆ ಭಾಷೆ ಹವ್ಯಕ ಭಾಷೆ ತ್ರಿವಳಿ ಭಾಷಾ ಮಾತು ಗಮ್ಮತ್ತು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಕಳ ರಂಗ ಸಂಸ್ಕೃತಿ ಅಧ್ಯಕ್ಷ ನಿತ್ಯಾನಂದ ಪೈ ಅವರು ನೆರವೇರಿಸಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಆಶಯ ನುಡಿಗಳನ್ನಾಡಿದರು.
ಬಳಿಕ ಕುಂದಾಪ್ರ ಭಾಷೆ ಅರೆಬಾಷೆ ಹವ್ಯಕ ಭಾಷೆಗಳ ಕುರಿತಂತೆ ಸಾಹಿತಿ ಹಿರಿಯ ಪತ್ರಕರ್ತ ಸಿದ್ಧಾಪುರ ವಾಸುದೇವ ಭಟ್ಟ, ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯ ಅರೆಭಾಷೆ ಅಧ್ಯಯನಕಾರ ಡಾ. ಪುರುಷೋತ್ತಮ, ಕಾರ್ಕಳ ತಾಲೂಕು ಹವ್ಯಕ ಸಭಾ ಕೋಶಾಧಿಕಾರಿ ಸಂಸ್ಕೃತಿ ಚಿಂತಕ ಗಣಪ್ಪಯ್ಯ ಇವರು ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಕಳ ಕಸಾಪ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ ಪದ್ಮನಾಭ ಗೌಡ, ಕಾರ್ಕಳ ತಾಲೂಕು ಒಕ್ಕಲಿಗ ಯಾನೆ ಗೌಡರ ಸೇವಾ ಸಂಘ ಕಾರ್ಕಳ ಅಧ್ಯಕ್ಷ ವಸಂತ ಸೇನ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ಗಣೇಶ್ ಜಾಲ್ಸೂರು ನಿರೂಪಿಸಿದರು. ಕಸಾಪ ಸದಸ್ಯೆ ಸುಲೋಚನಾ ವಂದಿಸಿದರು. ಶಾರ್ವರಿ ಶಾನುಭೋಗ ಪ್ರಾರ್ಥಿಸಿದರು. ಶಿವಸುಬ್ರಹ್ಮಣ್ಯ ಭಟ್ ಸಹಕರಿಸಿದರು.







