ಕಾರ್ಕಳದ ಗೊಮ್ಮಟನಿಗೆ 2027ರ ಫೆ.18ರಿಂದ ಮಹಾಮಜ್ಜನ: ಮಹಾಮಸ್ತಕಾಭಿಷೇಕ ಸಮಿತಿ

ಕಾರ್ಕಳ, ಎ.19: ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಮಹಸ್ತಕಾಭಿಷೇಕವು, ಕಾರ್ಕಳದ ಗೊಮ್ಮಟೇಶ್ವರ ಬೆಟ್ಟದ ಮೇಲಿರುವ ಏಕಶಿಲಾ ವಿಗ್ರಹ ಗೊಮ್ಮಟೇಶ್ವರನಿಗೆ (ಶ್ರೀಬಾಹುಬಲಿ ಸ್ವಾಮಿ ವಿಗ್ರಹ) 2027ರ ಫೆಬ್ರವರಿ ತಿಂಗಳ 18ರಿಂದ 28ರವರೆಗೆ ನಡೆಯಲಿದೆ ಎಂದು ಕಾರ್ಕಳ ಭಗವಾನ್ ಶ್ರೀಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ ಘೋಷಿಸಿದೆ.
ಕಾರ್ಕಳ ದಾನಶಾಲೆಯ ಭಗವಾನ್ ಶ್ರೀಬಾಹುಬಲಿ ಪ್ರವಚನ ಮಂದಿರ ದಲ್ಲಿ ಇಂದು ನಡೆದ ಸಮಾರಂಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರು ಕಾರ್ಕಳ ಶ್ರೀಜೈನಮಠದ ಸ್ವಸ್ತಿಶ್ರೀ ಲಲತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಈ ಘೋಷಣೆ ಮಾಡಿದರು.
ಇದಕ್ಕೆ ಮೊದಲು ಮಹಾಮಸ್ತಕಾಭಿಷೇಕ ಸಮಿತಿಯ ಕಚೇರಿಯನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಪ್ರತಿನಿಧಿಯಾಗಿ ಭಾಗವಹಿಸಿದ್ದ ಡಿ.ಹರ್ಷೇಂದ್ರ ಕುಮಾರ್, ಮೂಡಬಿದರೆಯ ಡಾ.ಮೋಹನ ಆಳ್ವ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ದಾನಶಾಲೆಯಲ್ಲಿ ಉದ್ಘಾಟಿಸಿದ್ದರು.
ಕಾರ್ಕಳದ ಗೊಮ್ಮಟನ ಮುಂದಿನ ಮಹಾಸ್ತಕಾಭಿಷೇಕದ ದಿನಾಂಕವನ್ನು ಘೋಷಿಸಿ ಮಾತನಾಡಿದ ಡಾ.ಎಂ.ಎನ್. ರಾಜೇಂದ್ರಕುಮಾರ್, ಮಸ್ತಕಾಭಿಷೇಕ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ. ಇದುನಾಡಿನ ಸಮಸ್ತ ಬಂಧುಗಳು ಜಾತಿ,ಮತ, ಧರ್ಮದ ಬೇಧವಿಲ್ಲದೆ ನಡೆಸುವ ಹಬ್ಬ. ಈ ಮೂಲಕ ನಾವು ಮಾತ್ರ ಬೆಳೆಯುವುದಲ್ಲ, ಸಮಾಜ ಕೂಡ ಬೆಳೆಯಬೇಕು ಎಂದರು.
ಮಹಾಮಸ್ತಕಾಭಿಷೇಕಕ್ಕೆ ಇನ್ನು 305 ದಿನಗಳು ಬಾಕಿ ಇವೆ. ಇದನ್ನು ನಾಡಿನ ಉತ್ಸವವಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಧರ್ಮಸ್ಥಳದ ಡಿ. ಹರ್ಷೇಂದ್ರಕುಮಾರ್, ನಮ್ಮ ಜೀವಿತಾ ವಧಿಯಲ್ಲಿ ವೇಣೂರು, ಧರ್ಮಸ್ಥಳ ಹಾಗೂ ಕಾರ್ಕಳದ ಗೋಮಟೇಶ್ವರನ ಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತಿರುವುದು ನಮ್ಮ ಸೌಭಾಗ್ಯ, ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಸಕಲ ಸಿದ್ಧತೆ ಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದರು.
ಕಾರ್ಕಳ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಮಹಾಮಸ್ತಕಾ ಭಿಷೇಕ ಧಾರ್ಮಿಕ ವಿಧಿ ವಿಧಾನದ ಜೊತೆಗೆ ಜಗತ್ತಿಗೆ ಒಳಿತಾಗಲಿ ಎನ್ನುವ ಮಹೋನ್ನತ ಉದ್ದೇಶವನ್ನೂ ಹೊಂದಿದೆ. ಈ ಪವಿತ್ರ ಕಾರ್ಯದ ಹಿಂದೆ ಭಾರತೀಯ ಸಂಸ್ಕೃತಿ, ಶ್ರದ್ದೆ, ಭಕ್ತಿಯ ಶಕ್ತಿಯ ಸಂದೇಶವಿದೆ. ಭಗವಾನ್ ಬಾಹುಬಲಿಯ ತ್ಯಾಗ ಮತ್ತು ವೈರಾಗ್ಯದ ಜೀವನ ನಮ್ಮ ಜೀವನಕ್ಕೆ ದಾರಿದೀಪವಾಗಲಿ ಎಂದು ಶುಭ ಹಾರೈಸಿದರು.
ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ, ಅದಾನಿ ಗ್ರೂಪ್ ಕರ್ನಾಟಕದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷರಾದ ಕಿಶೋರ್ ಅಳ್ವ, ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಕಾರ್ಯನಿರ್ವಾಹಕ ಟ್ರಸ್ಟಿ ಉದಯಕುಮಾರ್ ಶೆಟ್ಟಿ ಮುನಿಯಾಲು, ಮಾಜಿ ಸಚಿವ ಅಭಯಚಂದ್ರ ಜೈನ್ ಶುಭ ಹಾರೈಸಿ ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದರು.
ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಉಡುಪಿ ಎಎಸ್ಪಿ ಸುಧಾಕರ ನಾಯಕ್, ಸಮಿತಿಯ ಉಪಾಧ್ಯಕ್ಷ ಕೆ.ಪಿ.ಜಗದೀಶ್ ಅಧಿಕಾರಿ, ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್, ಎಸ್ಸಿ ಡಿಸಿಸಿ ಬ್ಯಾಂಕ್ನ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ಮಸ್ತಕಾಭಿಷೇಕ ಸಮಿತಿ ಪದಾಧಿಕಾರಿಗಳಾದ ಪ್ರಭಾತ್ ಕುಮಾರ್, ಅನಂತರಾಜ ಪೂವಣಿ, ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಕೆ.ಜಯಕೀರ್ತಿ ಕಡಂಬ, ಹೇಮಚಂದ್ರ ಜೈನ್, ಗುಣಪಾಲ ಕಡಂಬ, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗ್ಡೆ, ಭರತ್ ಕುಮಾರ ಜೈನ್, ಶೀತಲ್ ಜೈನ್, ಸುಭಾಶ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರವರ್ಮ ಜೈನ್, ಶಿಶುಪಾಲ ಜೈನ್, ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಮಂಗಳೂರು ಅತಿಥಿಗಳನ್ನು ಸ್ವಾಗತಿಸಿದರು. ಮೋಹನ್ ಪಡಿವಾಳ್ ವಂದಿಸಿ, ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.






