ಕಟ್ಬೆಲ್ತೂರು | ದಲಿತರ ಬೇಡಿಕೆಗಳಿಗೆ ಡಿಎಚ್ಎಸ್ ಹಕ್ಕೊತ್ತಾಯ

ಕುಂದಾಪುರ, ನ.22: ದಲಿತರ ವಸತಿ ಸಹಿತ ಇತರೆ ಹಕ್ಕುಗಳನ್ನು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಕಟ್ಬೆಲ್ತೂರು ಘಟಕದ ನೇತೃತ್ವದಲ್ಲಿ ಸ್ಥಳೀಯ ಗ್ರಾಪಂಗೆ ಮನವಿಯನ್ನು ಶುಕ್ರವಾರ ಅರ್ಪಿಸಲಾಯಿತು.
ದಲಿತರ ಬೇಡಿಕೆಗಳನ್ನು ಕಡೆಗಣಿಸಿದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಹಾಗೂ ಸಾಮಾಜಿಕ ಹೋರಾಟವನ್ನು ಡಿಎಚ್ಎಸ್ ಮೂಲಕ ಸಂಘಟಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಎಚ್ಚರಿಕೆ ನೀಡಿದರು. ಗ್ರಾಪಂ ಅಧ್ಯಕ್ಷೆ ವೈಶಾಲಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇಖಾ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ರಾಮ ಶೆಟ್ಟಿ ಹಾಗೂ ಸದಸ್ಯರಾದ ಶರತ್ ಕುಮಾರ್ ಶೆಟ್ಟಿ, ವಿಮಲಾ, ಅಶೋಕ ಬಳೆಗಾರ, ಶಾರದಾ, ದಲಿತ ಚಿಂತಕ ಶುಭಕರ, ಜಿಲ್ಲಾ ಕಾರ್ಯದರ್ಶಿ ರವಿ ವಿಎಂ, ಹಿರಿಯ ದಲಿತ ಮುಖಂಡರಾದ ಬಾಬು ಬಳ್ಕೂರ್, ಘಟಕದ ಸಂಚಾಲಕ ಸಹನಾ, ಮೊದಲಾದವರು ಉಪಸ್ಥಿತರಿದ್ದರು.
ಮುಳ್ಳಿಕಟ್ಟೆಯ ಹೊಸಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೊಭ ರಮೇಶ್ ಅವರನ್ನು ಜಿಲ್ಲಾ ನಾಯಕರಾದ ರವಿ ವಿ.ಎಂ. ಮತ್ತು ಬಾಬುಬಳ್ಕೂರು ಹಾಗೂ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಭೇಟಿ ಮಾಡಿ ಅಲ್ಲಿನ ನಿವಾಸಿ ಕೃಷ್ಣ ಅವರ ಮನೆಗೆ ಕೂಡಲೇ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿ ಕೊಡುವಂತೆ ವಿನಂತಿಸಿದರು. ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ಪಿಡಿಓ, ನಂತರದಲ್ಲಿ ಕೃಷ್ಣ ಅವರಿಗೆ ಸಂಬಂಧಪಟ್ಟ ದಾಖಲೆಯನ್ನು ಕೂಡಲೇ ಪಂಚಾಯತ್ ಒದಗಿಸುವಂತೆ ನಿರ್ದೇಶನ ನೀಡಲಾಯಿತು.





