ಕಾಪು ಕಳ್ಳತನ ಪ್ರಕರಣ: ಆರೋಪಿಯಿಂದ 55 ಗ್ರಾಂ ಚಿನ್ನ ವಶ

ಉಡುಪಿ, ಜ.8: ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿ.4ರಂದು ಮಲ್ಲಾರು ಗ್ರಾಮದ ಕಾಪು ಮುಖ್ಯ ರಸ್ತೆಯಲ್ಲಿರುವ ರಾಘವೇಂದ್ರ ಕಿಣಿ ಎಂಬವರ ಮನೆಯಲ್ಲಿ ಕಳ್ಳತನ ನಡೆಸಿದ ಪ್ರಕರಣದಲ್ಲಿ ಆರೋಪಿ ಪಕೀರ್ಣಕಟ್ಟೆಯ ಉಮೇಶ ಬಳೆಗಾರ(47) ಎಂಬಾತನನ್ನು ಕಾಪು ಪೊಲೀಸರು ಜ.2ರಂದು ಬಂಧಿಸಿದ್ದರು.
ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಈತ ರಾಘವೇಂದ್ರ ಕಿಣಿ ಅವರ ಮನೆಯಲ್ಲಿ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ತಮಿಳುನಾಡು ರಾಜ್ಯದ ಮಧುರೈ ಎಂಬಲ್ಲಿ ಮಾರಾಟ ಮಾಡಿರುವುದಾಗಿ ತಪೊಪ್ಪಿ ಕೊಂಡಿದ್ದನು. ಕಾರ್ಕಳ ಪ್ರಭಾರ ಡಿವೈಎಸ್ಪಿ ಪ್ರಭು ಡಿ.ಟಿ. ನೇತೃತ್ವದಲ್ಲಿ ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕ ಅಝಮತ್ ಅಲಿ ತಂಡ ಕಾರ್ಯಾಚರಣೆ ನಡೆಸಿ, ಉಮೇಶ್ ಬಳೆಗಾರನನ್ನು ಕರೆದುಕೊಂಡು ತಮಿಳುನಾಡು ರಾಜ್ಯದ ಮಧುರೈ ಎಂಬಲ್ಲಿಗೆ ತೆರಳಿತು.
ಅಲ್ಲಿ ಆರೋಪಿಯು ಕಳವು ಮಾಡಿದ ಚಿನ್ನಾಭರಣಗಳನ್ನು ತೋರಿಸಿ ಕೊಟ್ಟಂತೆ ಪತ್ತೆ ಹಚ್ಚಿ 55 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ತಂಡ ವಶಪಡಿಸಿ ಕೊಂಡಿತು. ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಬೆರಳು ಮುದ್ರೆ ಘಟಕದ ತಜ್ಞೆ ಪೊಲೀಸ್ ನಿರೀಕ್ಷಕಿ ಎಲ್.ಮೋಹನ ಕುಮಾರಿ ಹಾಗೂ ಅವರ ಸಿಬ್ಬಂದಿ, ಕಾಪು ಪೊಲೀಸ್ ಠಾಣೆಯ ಎಸ್ಸೈ ಶುಭಕರ, ಪಡುಬಿದ್ರಿ ಪೊಲೀಸ್ ಠಾಣೆಯ ಎಸ್ಸೈ ಅನಿಲ್ ಕುಮಾರ ನಾಯ್ಕ್, ಎಎಸ್ಐ ರಾಜೇಶ್ ಪಿ, ಕಾರ್ಕಳ ಗ್ರಾಮಾಂತರ ಠಾಣಾ ಎಎಸ್ಐ ಪ್ರಕಾಶ್, ಶಿರ್ವ ಪೊಲೀಸ್ ಠಾಣಾ ಸಿಬ್ಬಂದಿ ಕಿಶೋರ್, ಕಾಪು ವೃತ್ತ ನಿರೀಕ್ಷಕರ ಕಚೇರಿಯ ಸಿಬ್ಬಂದಿ ರಿಯಾಜ್ ಅಹ್ಮದ್, ಶರಣಪ್ಪ, ಜೀವನ್ ಕುಮಾರ್, ದಿನೇಶ್ ಕುಮಾರ್, ಮಹಿಳಾ ಸಿಬ್ಬಂದಿ ಪಾವನಾಂಗಿ ಡಿ.ಎಚ್., ಕಾಪು ಪೊಲೀಸ್ ಠಾಣಾ ಸಿಬ್ಬಂದಿ ಮೋಹನ್ ಚಂದ್ರ, ರಾಘು, ಮತ್ತು ಕಾಪು ವೃತ್ತ ನಿರೀಕ್ಷಕರ ಜೀಪು ಚಾಲಕ ಜಗದೀಶ್ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ವಿಭಾಗದ ಸಿಬ್ಬಂದಿ ದಿನೇಶ್ ಮತ್ತು ನಿತಿನ್ ಭಾಗವಹಿಸಿದ್ದರು.







