ನ.15ರಿಂದ 19ರವರೆಗೆ ಖಾಕಿ ಕಾರ್ಟೂನ್ ಹಬ್ಬ
ಕುಂದಾಪುರ, ನ.12: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಸಹಭಾಗಿತ್ವದೊಂದಿಗೆ ‘ಖಾಕಿ ಕಾರ್ಟೂನ್ ಹಬ್ಬ’ ಕಾರ್ಯಕ್ರಮವನ್ನು ನ.15ರಿಂದ 19ರವರೆಗೆ ಕುಂದಾಪುರದ ರೋಟರಿ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ನ.15ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಕಾರಾಗೃಹ ಮತ್ತು ಸುಧಾರಣೆ ಪೊಲೀಸ್ ಮಹಾನಿರ್ದೇಶಕ ಬಿ.ದಯಾನಂದ್ ಉದ್ಘಾಟಿಸಲಿರುವರು. ವಿಶೇಷ ಅತಿಥಿಗಳಾಗಿ ನಿವೃತ್ತ ಡೆಪ್ಯೂಟಿ ಪೊಲೀಸ್ ಕಮಿಷನರ್ ಗಳಾದ ಜಿ.ಎ.ಬಾವಾ, ವಿನಯ್ ಗಾಂವ್ಕರ್, ಉಡುಪಿ ಎಸ್ಪಿ ಹರಿರಾಮ್ ಶಂಕರ್, ಪತ್ರಕರ್ತ ರಾಜೇಶ್ ಕೆ.ಸಿ. ಭಾಗವಹಿಸಲಿರುವರು.
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿರುವ ಆಯ್ದ 10 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 2 ಗಂಟೆಗೆ ಪೋಷಕರ ಮಕ್ಕಳಿಗಾಗಿ ಕಾರ್ಟೂನ್ ಸ್ಪರ್ಧೆಗಳು ಏರ್ಪಡಿಸಲಾಗಿವೆ. ಪೋಷಕರಿಗಾಗಿ ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ ಎಂಬ ಶೀರ್ಷಿಕೆಯಡಿ ಸಂವಾದ ಕಾರ್ಯಕ್ರಮ ನಡೆಯಲಿದೆ.
ನ.16ರಂದು ಬೆಳಿಗ್ಗೆ 10:30ರಿಂದ ಮಧ್ಯಾಹ್ನ 1ಗಂಟೆಯವರೆಗೆ, ಕಲಾಸಕ್ತ ಉಡುಪಿ ಜಿಲ್ಲಾ ಪೋಲಿಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ವ್ಯಂಗ್ಯ ಚಿತ್ರಕಾರರಾದ ಸತೀಶ್ ಆಚಾರ್ಯ ಅವರಿಂದ ವಿಶೇಷ ಕಾರ್ಟೂನ್ ವರ್ಕ್ಶಾಪ್ ನಡೆಯಲಿದೆ. ನ.17ರಿಂದ 19ರವರೆಗೆ ಕಾರ್ಟೂನ್ ಪ್ರದರ್ಶನ ಮತ್ತು ಲೈವ್ ಕ್ಯಾರಿಕೇಚರಿಂಗ್ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.







