ಕೊಲ್ಲೂರು: ಜಡ್ಕಲ್ 'ಗ್ರೀನ್ ಲಗೂನ್ ರಿಟ್ರೀಟ್' ರೆಸಾರ್ಟ್ ಉದ್ಘಾಟನೆ

ಕುಂದಾಪುರ, ಮೇ 30: ಯುನಿಟಿ ಗ್ರೂಪ್ ವತಿಯಿಂದ ಕೊಲ್ಲೂರು ಸಮೀಪದ ಜಡ್ಕಲ್ ಕಾನ್ಕಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ‘ಗ್ರೀನ್ ಲಗೂನ್ ರಿಟ್ರೀಟ್’ ರೆಸಾರ್ಟ್ ಶನಿವಾರ ಶುಭಾರಂಭಗೊಂಡಿತು.
ಯುನಿಟಿ ಗ್ರೂಪ್ ಆಡಳಿತ ನಿರ್ದೇಶಕ ಉಸ್ಮಾನ್ ಹಂಗಳೂರು ಇದಿನಬ್ಬರ ತಂದೆ ಇದಿನಬ್ಬ ನೂತನ ರೆಸಾರ್ಟ್ ಉದ್ಘಾಟಿಸಿದರು.
ರೆಸಾರ್ಟ್ ಮುಖ್ಯದ್ವಾರವನ್ನು ಉದ್ಘಾಟಿಸಿದ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಧಾರ್ಮಿಕ ಶ್ರದ್ಧಾ ಕೇಂದ್ರವಾದ ಕೊಲ್ಲೂರು ಸಮೀಪದಲ್ಲಿ ಸುಸಜ್ಜಿತ ‘ಗ್ರೀನ್ ಲಗೂನ್ ರಿಟ್ರೀಟ್’ ರೆಸಾರ್ಟ್ ಉದ್ಘಾಟನೆಗೊಂಡಿದೆ. ಕೊಡಚಾದ್ರಿ ಸಹಿತ ಇತರೆಡೆಗೆ ಬರುವ ಪ್ರವಾಸಿಗರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
ಉಸ್ಮಾನ್ ಹಂಗಳೂರು ವಿದ್ಯಾಭ್ಯಾಸದ ಬಳಿಕ ವಿದೇಶಕ್ಕೆ ತೆರಳಿ ಉದ್ಯಮ ಸ್ಥಾಪಿಸಿ ಪೇಟೆಂಟ್ ಪಡೆದಿರುವುದು ನಿಜಕ್ಕೂ ಸಾಧನೆ. ಹಲವಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಇದೀಗ ಪ್ರಕೃತಿದತ್ತ ಸುಂದರ ಪರಿಸರದಲ್ಲಿ ಯುನಿಟಿ ಗ್ರೂಪ್ ನಿರ್ಮಿಸಿರುವ ಗ್ರೀನ್ ಲಗೂನ್ ರೆಸಾರ್ಟ್ ಅಂತರ್ರಾಷ್ಟ್ರ ಮಟ್ಟದ ಮನ್ನಣೆ ಗಳಿಸಲಿ ಎಂದು ಗಫೂರ್ ಶುಭಹಾರೈಸಿದರು.
ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಬಾಬು ಶೆಟ್ಟಿ ಮಾತನಾಡಿ, ಪ್ರವಾಸೋದ್ಯಮ ಕೇಂದ್ರವಾಗಿ ಉಡುಪಿ ಜಿಲ್ಲೆ ಮುಂದೆ ಸಾಗುತ್ತಿದ್ದು, ರೆಸಾರ್ಟ್ಗಳ ನಿರ್ಮಾಣ ಇಂದಿನ ಅನಿವಾರ್ಯ. ಪವಿತ್ರ ಕೊಲ್ಲೂರು ಕ್ಷೇತ್ರಕ್ಕೆ ದಕ್ಷಿಣ ಭಾರತ ಸಹಿತ ದೇಶ ವಿದೇಶಗಳಿಂದ ಅತಿಥಿಗಳು ಆಗಮಿಸು ತ್ತಾರೆ. ಒಂದಷ್ಟು ಜನದಟ್ಟಣೆಯ ಸಮಯದಲ್ಲಿ ದೇವಸ್ಥಾನದ ಸಮೀಪದ ಎಲ್ಲಾ ತಂಗುವ ಸ್ಥಳಗಳಿಲ್ಲದೆ ಜನರು ಪರದಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜಡ್ಕಲ್ನ ಸುಂದರ ಪ್ರದೇಶದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಗ್ರೀನ್ ಲಗೂನ್ ರೆಸಾರ್ಟ್ ಪ್ರವಾಸಿಗರಿಗೆ ಸಹಕಾರಿಯಾಗಲಿದೆ ಎಂದರು.
ದುಡಿದ ಒಂದು ಭಾಗವನ್ನು ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿ ಹಣ ವಿನಿಯೋಗಿಸುವ ಮೂಲಕ ಉಸ್ಮಾನ್ ಹಂಗಳೂರು ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿದ್ದಾರೆ. ಜಡ್ಕಲ್ ಮುಂದಿನ ದಿನದಲ್ಲಿ ಪ್ರವಾಸಿ ಕೇಂದ್ರವಾಗಿ ಬೆಳೆಯಲಿ ಎಂದವರು ಹಾರೈಸಿದರು.
ಜಡ್ಕಲ್ ಸೈಂಟ್ ಜಾರ್ಜ್ ಫೊರೋನಾ ಚರ್ಚ್ ಪಾರಿಶ್ ಫ್ರೀಸ್ಟ್ ರೆ.ಫಾ.ಜೋಸೆಫ್ ಮಾತನಾಡಿ, ಈ ಗ್ರೀನ್ ಲಗೂನ್ ರೆಸಾರ್ಟ್ ಅಂತರ್ರಾಷ್ಟ್ರ ಗುಣಮಟ್ಟದಲ್ಲಿ ನಿರ್ಮಾಣವಾಗಿದೆ. ಎಲ್ಲ ವ್ಯವಸ್ಥೆಗಳನ್ನು ಒಳಗೊಂಡಿರುವ ಈ ರೆಸಾರ್ಟ್ ವಿಶ್ರಾಂತಿಯ ಜೊತೆಗೆ ಜೀವನದ ಒತ್ತಡ ಕಳೆಯಲು ಸಹಕಾರಿ ಎಂದರು.
ಅನಿವಾಸಿ ಉದ್ಯಮಿಯಾಗಿದ್ದು ತಮ್ಮ ಹುಟ್ಟೂರಿನಲ್ಲೂ ಉದ್ಯಮ ಸ್ಥಾಪಿಸಿ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸುವುದರ ಜೊತೆಗೆ ದೇಶಕ್ಕೆ ಕೊಡುಗೆ ನೀಡುವ ಉಸ್ಮಾನ್ ಹಂಗಳೂರು ಅವರ ಇರಾದೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಶುಭ ಹಾರೈಸಿದರು.
ಕಾಂಗ್ರೆಸ್ ಮುಖಂಡ ಚಿತ್ತರಂಜನ್ ಶೆಟ್ಟಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ಹುಸೇನ್ ಬ್ಯಾರಿ, ಪ್ರಮುಖರಾದ ಎಂ.ಎಚ್.ಕುಂಞಿ ಮತ್ತಿತರರು ಉಪಸ್ಥಿತರಿದ್ದರು.
ಝೈನುಲ್ ಆಬಿದೀನ್ ಕಿರಾಅತ್ ಪಠಿಸಿದರು. ಗ್ರಾಂಡ್ ಈವೆಂಟ್ಸ್ ಕುಂದಾಪುರ ಸಂಯೋಜನೆಯಲ್ಲಿ ಪ್ರಣೂತ್ ಗಾಣಿಗ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.
ಜನರಿಗೆ ಉದ್ಯೋಗಾವಕಾಶ ನನ್ನ ಮುಖ್ಯ ಉದ್ದೇಶ: ಉಸ್ಮಾನ್ ಹಂಗಳೂರು
ವ್ಯವಹಾರದಲ್ಲಿ ಲಾಭ-ನಷ್ಟ ಇರುತ್ತದೆ. ಈ ಸಂಸ್ಥೆ ನನ್ನ ಕನಸು. ಹಣ ಮಾಡುವ ಉದ್ದೇಶಕ್ಕಿಂತ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು ನನ್ನ ಮುಖ್ಯ ಉದ್ದೇಶ ಎಂದು ಯುನಿಟಿ ಗ್ರೂಪ್ ಆಡಳಿತ ನಿರ್ದೇಶಕ ಉಸ್ಮಾನ್ ಹಂಗಳೂರು ಇದಿನಬ್ಬ ತಿಳಿಸಿದರು.






