ಕುಂದಾಪುರ: ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿ ಆತ್ಮಹತ್ಯೆ

ಕುಂದಾಪುರ, ಜು.9: ಅಂಗನವಾಡಿ ಸಹಾಯಕಿಯೊಬ್ಬರು ಅಂಗನವಾಡಿ ಕೇಂದ್ರದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಂಪು ಎಂಬಲ್ಲಿ ಜು.8ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ನಾಗೂರು ಗ್ರಾಮದ ಅಶ್ವಿನಿ(29) ಎಂದು ಗುರುತಿಸಲಾಗಿದೆ. ಇವರು ಕಳೆದ 3 ವರ್ಷಗಳಿಂದ ನೆಂಪು ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಇವರು ಬೆಳಿಗ್ಗೆ ಅಂಗನವಾಡಿ ಕೆಲಸಕ್ಕೆ ಬಂದಿದ್ದು, ಮಧ್ಯಾಹ್ನ 3.50ರ ಸುಮಾರಿಗೆ ಅಂಗನವಾಡಿ ಟೀಚರ್ ಸರೋಜ ಎಂಬವರು ಅಶ್ವಿನಿ ಬಳಿ ಅಂಗನವಾಡಿಗೆ ಬೀಗ ಹಾಕಿ ಮನೆಗೆ ಹೋಗುವಂತೆ ತಿಳಿಸಿದ್ದರು.
ಬಳಿಕ ಅಂಗನವಾಡಿಯಲ್ಲಿ ಅಶ್ವಿನಿ ಒಬ್ಬರೇ ಇದ್ದು, ಅಂಗನವಾಡಿ ಟೀಚರ್ ಅಂಗನವಾಡಿಯಲ್ಲಿ ಬಿಟ್ಟು ಹೋಗಿದ್ದ ತನ್ನ ಮಗುವಿನ ಆಟಿಕೆ ಸಾಮಾನು ತರಲು ಸಂಜೆ 5.30ರ ಸುಮಾರಿಗೆ ವಾಪಾಸ್ಸು ಬಂದು ನೋಡಿದಾಗ ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ವೈಯಕ್ತಿಕ ಕಾರಣಗಳಿಂದ ಮನನೊಂದ ಅಶ್ವಿನಿ ಅಂಗನವಾಡಿ ಕೇಂದ್ರದ ಅಡುಗೆ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.






