ಕುಂದಾಪುರ| 8 ಮಕ್ಕಳನ್ನು ಬಲಿ ಪಡೆದ ಭೀಕರ ರಸ್ತೆ ಅಪಘಾತ ಪ್ರಕರಣ: ಬಸ್ ಚಾಲಕನಿಗೆ ಜೈಲುಶಿಕ್ಷೆ, ದಂಡ

ಕುಂದಾಪುರ: ಇಲ್ಲಿನ ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ 66 ರ ನಡುವಿನ ಮುಳ್ಳಿಕಟ್ಟೆ ಸಮೀಪದ ಮೊವಾಡಿ ಕ್ರಾಸ್ ಬಳಿ ಡಾನ್ ಬಾಸ್ಕೋ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಖಾಸಗಿ ಬಸ್ ಢಿಕ್ಕಿಯಾಗಿ, 8 ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಧೀರ್ಘ 10 ವರ್ಷದ ಬಳಿಕ ಕುಂದಾಪುರದ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.
ಆರೋಪಿ ಬಸ್ ಚಾಲಕನಿಗೆ 1 ವರ್ಷ 17 ದಿನಗಳ ಸಾಧಾರಣ ಜೈಲು ಶಿಕ್ಷೆ ನೀಡಿ ಕುಂದಾಪುರದ ಮೂರನೇ ಹೆಚ್ಚುವರಿ ಎಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮಣಿಕಂಠ ಎಂ.ಎಸ್. ಅವರು, ಕಲಂ 279, 337, 338, 305 (ಎ) ರಡಿ ಆರೋಪಿ ಬಸ್ ಚಾಲಕ ಮಂಜುನಾಥ ತ್ರಾಸಿಗೆ ಜೈಲು ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಜೈಲು ಶಿಕ್ಷೆಯೊಂದಿಗೆ 12,500 ರೂ. ದಂಡ ಕೂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ : 2016ರ ಜೂ.21 ರಂದು ಬೆಳಗ್ಗೆ 9.25 ರ ಸುಮಾರಿಗೆ ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮ್ನಿ ಕಾರನ್ನು ಚಾಲಕ ಮಾರ್ಟಿನ್ ಸೆಬಾಸ್ಟಿನ್ ಅವರು ಹೆಮ್ಮಾಡಿ ಕಡೆಯಿಂದ ಚಲಾಯಿಸಿಕೊಂಡು ಬಂದು, ಮೊವಾಡಿ ಕ್ರಾಸ್ ಬಳಿ ಶಾಲೆಯ ರಸ್ತೆಯ ಕಡೆಗೆ ತಿರುಗಿಸುತ್ತಿದ್ದ ವೇಳೆ ಆರೋಪಿ ಮಂಜುನಾಥ (42) ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ವೇಗ ಹಾಗೂ ಅಜಾಗರೂಕತೆಯಿಂದ ಬಸ್ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದಿದ್ದು ಇದರಿಂದ ಬಸ್ಸಿನಲ್ಲಿದ್ದ ಶಾಲಾ ಮಕ್ಕಳಾದ ಅನನ್ಯ ಡಿಸಿಲ್ವಾ, ನಿಖಿತ್ ಡಿಸಿಲ್ವಾ, ರಾಯಸ್ಟನ್ ಲೋಬೋ, ಕ್ಲೇರಿಸಾ, ಅನ್ಸಿಟಾ ಓಲೇವಿರಾ, ಆಲ್ವಿಟಾ ಓಲೇವಿರಾ, ಬೆಲ್ವಿನ್ ಡಯಾಸ್ ಹಾಗೂ ಕೆಲಿಸ್ಟಾ ಅವರು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ಇವರೊಂದಿಗೆ ಇನ್ನು ಕೆಲ ಮಕ್ಕಳು ಗಂಭೀರ ಗಾಯಗೊಂಡಿದ್ದರು.
ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಬಳಿಕ ಸಿಪಿಐ ರಾಘವ ಎಸ್. ಪಡೀಲ್ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಉಮಾ ದಾಮೋದರ ನಾಯ್ಕ ಅವರು ವಾದ ಮಂಡಿಸಿದ್ದಾರೆ.
ಖಾಸಗಿ ಬಸ್ ಚಾಲಕನಾಗಿದ್ದ ಮಂಜುನಾಥ (42) ಈ ದುರ್ಘಟನೆ ನಡೆದ ಬಳಿಕ, ಕೆಲ ದಿನಗಳಲ್ಲಿ ಜಾಮೀನು ಪಡೆದು, ಬಿಡುಗಡೆಗೊಂಡಿದ್ದ. ಈ ಅಪಘಾತದ ಬಳಿಕ ಆತ ಚಾಲಕ ವೃತ್ತಿಯನ್ನು ತ್ಯಜಿಸಿ, ಊರಾದ ಹುಬ್ಬಳ್ಳಿಗೆ ತೆರಳಿ, ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ತೀರ್ಪು ಪ್ರಕಟಗೊಂಡ ಬಳಿಕ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶವಿದ್ದು, ಸಲ್ಲಿಸದಿದ್ದರೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.






