ಕುಂದಾಪುರ: ಕಾಳಾವರದಲ್ಲಿ ಚಲಿಸುತ್ತಿದ್ದ ಪಿಕಪ್ ಮೇಲೆ ಬಿದ್ದ ಮರ; ಚಾಲಕನಿಗೆ ಗಾಯ

ಕುಂದಾಪುರ: ಚಲಿಸುತ್ತಿದ್ದ ಪಿಕಪ್ ವಾಹನದ ಮೇಲೆ ಭಾರೀ ಗಾತ್ರದ ಮರವೊಂದು ಬಿದ್ದ ಪರಿಣಾಮ ಪಿಕಪ್ ವಾಹನ ಸಂಪೂರ್ಣ ಹಾನಿಗೀಡಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ಕಾಳವರ ಗ್ರಾಮದ ಕಟ್ಕೇರಿ ಶಾಲೆ ಸಮೀಪ ನಡೆದಿದೆ.
ಗಾಯಗೊಂಡು ಆಸ್ಪತ್ರೆಗೆ ಸೇರಿದ ಚಾಲಕನನ್ನು ಆನಗಳ್ಳಿಯ ನಿವಾಸಿ ಹರೀಶ್ ಎಂದು ಗುರುತಿಸಲಾಗಿದೆ.
ಚಾಲಕ ಹರೀಶ್ ತನ್ನ ಪತ್ನಿ ಮನೆಯಾದ ಸಳ್ವಾಡಿಯಿಂದ ಬೆಳಿಗ್ಗೆ ತಮ್ಮ ಪಿಕಪ್ ವಾಹನದಲ್ಲಿ ಮಲ್ಪೆಗೆ ಮೀನು ತರಲೆಂದು ಹೊರಟಿದ್ದರು ಎನ್ನಲಾಗಿದೆ. ಕಾಳಾವರ ಗ್ರಾಮದ ಕಟ್ಕೇರಿ ಎಂಬಲ್ಲಿ ಬರುತ್ತಿದ್ದಂತೆ ಚಲಿಸುತ್ತಿದ್ದ ಪಿಕಪ್ ವಾಹನದ ಮೇಲೆ ಬೃಹತ್ ಮರ ಅಡ್ಡಲಾಗಿ ಬಿದ್ದಿದೆ. ಪರಿಣಾಮ ಪಿಕ್ ಅಪ್ ವಾಹನದ ಮೇಲ್ಭಾಗ ನುಜ್ಜು ಗುಜ್ಜಾಗಿದೆ.
ತಕ್ಷಣವೇ ಸ್ಥಳೀಯರು ಸೇರಿ ರಸ್ತೆಗೆ ಬಿದ್ದ ಮರ ತೆರವುಗೊಳಿಸುವ ಪ್ರಕ್ರಿಯೆ ನಡೆಸಿದ್ದಾರೆ.
ಕಳೆದ ಮೂರು ದಿನಗಳಿಂದ ಕುಂದಾಪುರ ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಗಾಳಿಯೂ ಬೀಸುತ್ತಿದೆ. ಹವಾಮಾನ ಇಲಾಖೆಯ ವರದಿಯಂತೆ ಇಂದು ಶಾಲೆ, ಕಾಲೇಜುಗಳಿಗೆ ರಜೆ ಸಾರಲಾಗಿದೆ.
Next Story





