ಕುವೆಂಪು ‘ವಿಶ್ವ ಪ್ರಜ್ಞೆ’ ಕೇವಲ ಬರಹವಲ್ಲ; ನಮ್ಮ ಭಾವ ಮತ್ತು ಬದುಕು: ಡಾ.ಯೋಗೀಶ್ ಕೈರೋಡಿ

ಉಡುಪಿ, ಡಿ.30: ಕುವೆಂಪು ನಿಸರ್ಗದಲ್ಲಿ ದೇವರನ್ನೂ, ಸ್ವರ್ಗವನ್ನು ಕಂಡವರು. ಲೌಕಿಕ ಬದುಕಿನ ಅನುಭವದೊಳಗೆ ಅಧ್ಯಾತ್ಮವನ್ನು ಕಂಡವರು. ಜಾತೀಯತೆ, ಧಾರ್ಮಿಕ ಆಂಧಶ್ರದ್ದೆ, ಜಾಗತಿಕ ಬದುಕಿನ ಮಹಾಯುದ್ಧದ ಕಾಲಘಟ್ಟ ದಲ್ಲಿ ಬದುಕಿದ ರಸಋಷಿ ಪ್ರಸ್ತುತ ಕಾಲಕ್ಕೆ ಅನ್ವಯಿಸುವ ವಿಶ್ವ ಮಾನವ ಸಂದೇಶವನ್ನು ಜಾಗತಿಕವಾಗಿ ಬಿತ್ತರಿಸಿ ದವರು ಎಂದು ಮೂಡಬಿದರೆ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಯೋಗೀಶ್ ಕೈರೋಡಿ ಅಭಿಪ್ರಾಯ ಪಟ್ಟಿದ್ದಾರೆ.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಆಶ್ರಯದಲ್ಲಿ, ಐಕ್ಯೂಎಸಿ ಘಟಕದ ಸಹಯೋಗದಲ್ಲಿ ರಸಋಷಿ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು.
ಜಗತ್ತು ಒಂದೇ ಎನ್ನವುದು ಆರ್ಥಿಕತೆಯ, ಅನ್ನದ ಪರಿಭಾಷೆಯಾದರೆ, ಕುವೆಂಪು ಕಟ್ಟಿದ ವಿಶ್ವಮಾನವ ಪರಿಕಲ್ಪನೆ ಭಾವನಾತ್ಮಕವಾಗಿದ್ದು, ಸರ್ವಕಾಲಕ್ಕೂ ಪ್ರಸ್ತುತವೆನಿಸಿದೆ. ಕುವೆಂಪು ಅವರ ಸಾಹಿತ್ಯವನ್ನು ಕೇವಲ ಓದಿದರೆ ಮಾತ್ರ ಸಾಲದ. ಅದು ನಮ್ಮ ಭಾವ ಮತ್ತು ಬದುಕಿನಲ್ಲಿ ಸ್ಥಿರವಾಗಿ ನಿಲ್ಲಬೇಕು ಎಂದು ಡಾ.ಯೋಗೀಶ್ ಕೈರೋಡಿ ತಿಳಿಸಿದರು.
ಕುವೆಂಪು ಅವರ ಕುರಿತಂತೆ ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ಸುಶ್ಮಿತಾ ಶೆಟ್ಟಿ , ಶ್ರೀಕೃಷ್ಣ ಜಿ.ಜಿ. ಹಾಗೂ ಪ್ರವೀಣ ಮಾತನಾಡಿದರು.ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿಲಾಯಿತು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಲಹೆಗಾರರಾದ ಡಾ. ಶ್ರೀಧರ್ ಭಟ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಸಂದೇಶ್ ಎಂ.ವಿ, ದತ್ತ ಕುಮಾರ್, ಉಪನ್ಯಾಸಕರಾದ ಅರ್ಚನಾ, ಭವ್ಯ, ಶಾಲಿನಿ, ರಾಜೇಂದ್ರ, ಡಾ.ಮಹೇಶ್ ಕುಮಾರ್ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ ಗಾಂವಕರ್ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ರಾದ ರತ್ನಮಾಲಾ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಶ್ಮಿತಾಶೆಟ್ಟಿ ವಂದಿಸಿದರು. ಭಾರತಿ ಕಾರ್ಯಕ್ರಮ ನಿರೂಪಿಸಿದರು.







