ಕಾರ್ಕಳ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ: ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ
ಉಡುಪಿ: ಕಾರ್ಕಳ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ನಡೆಯುವ ಲಕ್ಷದೀಪೋತ್ಸವ ಪ್ರಯುಕ್ತ ನವೆಂಬರ್ 11ರವರೆಗೆ ಹಲವು ಕಾರ್ಯಕ್ರಮ ಗಳು ನಡೆಯಲಿರುವ ಹಿನ್ನೆಲೆಯಲ್ಲಿ ಕಾರ್ಕಳ ಮೂರು ಮಾರ್ಗ ಜಂಕ್ಷನ್ ನಿಂದ ಸ್ಟೇಟ್ ಬ್ಯಾಂಕ್ ಜಂಕ್ಷನ್ವರೆಗೆ ಈ ಕೆಳಗಿನಂತೆ ತಾತ್ಕಾಲಿಕ ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಆದೇಶ ಹೊರಡಿಸಿದ್ದಾರೆ.
ನ.10ರಂದು ಲಕ್ಷದೀಪೋತ್ಸವ, ವನಭೋಜನ ಉತ್ಸವ ಇರುವುದರಿಂದ ಅಂದು ಬೆಳಗ್ಗೆ 10ರಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಹಾಗೂ ನ. 11ರಂದು ಓಕುಳಿ ಹಾಗೂ ಪಲ್ಲಕ್ಕಿ ಉತ್ಸವ ಇರುವುದರಿಂದ ಅಂದು ಸಂಜೆ 4ಗಂಟೆಯಿಂದ ಮರುದಿನ ಬೆಳಗ್ಗೆ 4 ಗಂಟೆಯವರೆಗೆ ಘನವಾಹನಗಳು ಬಂಗ್ಲೆಗುಡ್ಡೆಯಿಂದ ಹಿರಿಯಂಗಡಿ, ಪುಲ್ಕೇರಿ ಮಾರ್ಗವಾಗಿ ಸಂಚರಿಸಬೇಕು.
ಬಸ್ಸುಗಳು ಕಾರ್ಕಳದಿಂದ ಜೋಡುರಸ್ತೆ ಕಡೆಗೆ ಹಾಗೂ ಜೋಡುರಸ್ತೆ ಯಿಂದ ಕಾರ್ಕಳ ಕಡೆಗೆ ಸಂಚರಿಸುವ ಬಸ್ಗಳು ತಾಲೂಕು ಜಂಕ್ಷನ್ನಿಂದ ಕಲ್ಲೊಟ್ಟೆ, ಮಾರ್ಕೇಟ್ ಮಾರ್ಗವಾಗಿ ಬಸ್ ನಿಲ್ದಾಣ ಪ್ರವೇಶಿಸಬೇಕು. ಸ್ಟೇಟ್ ಬ್ಯಾಂಕ್ ಜಂಕ್ಷನ್ನಿಂದ ಗಾಂಧಿ ಮೈದಾನವಾಗಿ ಕಾಮಧೇನು ಹೋಟೆಲ್ ಜಂಕ್ಷನ್ವರೆಗಿನ ಮಾರ್ಗದಲ್ಲಿ ದ್ವಿಚಕ್ರ ಹಾಗೂ ಲಘು ವಾಹನಗಳು ಸಂಚರಿಸಬೇಕು.
ಈ ಅಧಿಸೂಚನೆಯನ್ನು ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮ 1989ರ ನಿಯಮ 221 5(ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.







