ಉಡುಪಿ ನಗರಸಭೆಗೆ ಲೋಕಾಯುಕ್ತ ದಾಳಿ; ಕಡತಗಳ ಪರಿಶೀಲನೆ

ಉಡುಪಿ, ಜೂ.18: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಉಡುಪಿಯ ಲೋಕಾಯುಕ್ತ ಪೊಲೀಸರು ಗುರುವಾರ ಉಡುಪಿ ನಗರಸಭೆ ಕಚೇರಿಗೆ ದಾಳಿ ನಡೆಸಿ ವಿವಿಧ ವಿಭಾಗಗಳ ಕಡತಗಳ ಪರಿಶೀಲನೆ ನಡೆಸಿದರು.
ಜನನ-ಮರಣ ಪ್ರಮಾಣಪತ್ರ, ಕುಡಿಯುವ ನೀರಿನ ಸಂಪರ್ಕ ಮೊದಲಾದವುಗಳಿಗೆ ಸಲ್ಲಿಕೆಯಾಗಿದ್ದ ಸುಮಾರು 300ರಿಂದ 400ರಷ್ಟು ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗಿರುವುದು ಶೋಧದ ವೇಳೆ ಕಂಡು ಬಂದಿದೆ ಎಂದು ಉಡುಪಿ ಲೋಕಾಯುಕ್ತ ಡಿವೈಎಸ್ಪಿ ಹಾಲಮೂರ್ತಿ ರಾವ್ ತಿಳಿಸಿದ್ದಾರೆ.
ನಗರಸಭೆಯಲ್ಲಿ ಕೆಲವು ಕಡತಗಳನ್ನು ದೀರ್ಘಕಾಲದಿಂದ ವಿಲೇವಾರಿ ಮಾಡದೇ ಅನಗತ್ಯವಾಗಿ ಬಾಕಿ ಉಳಿಸಿ ಕೊಂಡಿದ್ದಾರೆ ಎಂಬ ಸಾರ್ವಜನಿಕ ರಿಂದ ಲೋಕಾಯುಕ್ತಕ್ಕೆ ದೂರುಗಳು ಸಲ್ಲಿಕೆಯಾಗಿವೆ. ಈ ದೂರುಗಳ ಹಿನ್ನೆಲೆ ಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಲೋಕಾಯುಕ್ತದ ಅನುಮೋದನೆ ಯೊಂದಿಗೆ ನಗರಸಭೆಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತಿದ್ದಾರೆ. ಕಡತಗಳ ಪರಿಶೀಲನೆ ನಾಳೆಯೂ ಮುಂದುವರಿಯಲಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಲೋಕಾಯುಕ್ತ ಎಸ್.ಪಿ. ದಿನೇಶ್ ಕುಮಾರ್ ಬಿ.ಪಿ. ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಮಂಗಳೂರು ಡಿವೈಎಸ್ಪಿ ಸುರೇಶ್, ಇನ್ಸ್ಪೆಕ್ಟರ್ಗಳಾದ ಮಂಜುನಾಥ್, ರಾಜೇಂದ್ರ ನಾಯಕ್, ಚಂದ್ರಶೇಖರ್ ಹಾಗೂ ಉಡುಪಿ ಮತ್ತು ಮಂಗಳೂರು ಕಚೇರಿಗಳ ಸಿಬ್ಬಂದಿ ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದರು.






