ಉಡುಪಿ| ಮಹೇಶ್ ಶೆಟ್ಟಿ ತಿಮರೋಡಿ ಎರಡು ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ: ಪೊಲೀಸರಿಂದ ವಿಚಾರಣೆ

ಉಡುಪಿ: ಮಹೇಶ ಶೆಟ್ಟಿ ತಿಮರೋಡಿ ಅವರನ್ನು ಎರಡು ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಆದೇಶ ನೀಡಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಬ್ರಹ್ಮಾವರ ಪೊಲೀಸರು ಅರ್ಜಿ ಸಲ್ಲಿಸಿದರು.
ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ನಾಗೇಶ್ ಒಂದು ಗಂಟೆ ಒಳಗೆ ತಿಮರೋಡಿ ಅವರನ್ನು ಕೋರ್ಟಿಗೆ ಹಾಜರುಪಡಿಸುವಂತೆ ಆದೇಶ ನೀಡಿದರು. ಅದರಂತೆ ಪೊಲೀಸರು ಹಿರಿಯಡ್ಕ ಜೈಲಿನಲ್ಲಿದ್ದ ತಿಮರೋಡಿ ಅವರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಮಧ್ಯಾಹ್ನ 1:30 ಸುಮಾರಿಗೆ ಕೋರ್ಟಿಗೆ ಹಾಜರು ಪಡಿಸಿದರು
ಬಳಿಕ ನ್ಯಾಯಾಧೀಶರು ತಿಮರೋಡಿ ಅವರನ್ನು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಿದ್ದು, ಇಂದು ಮಧ್ಯಾಹ್ನ 3:40ಕ್ಕೆ ಮತ್ತೆ ಕೋಟ್೯ ಗೆ ಹಾಜರುಪಡಿಸುವಂತೆ ಆದೇಶಿಸಿದರು. ಅದರಂತೆ ಕಸ್ಟಡಿಗೆ ಪಡೆದುಕೊಂಡ ಪೊಲೀಸರು, ವಿಚಾರಣೆಗಾಗಿ ತಿಮರೋಡಿ ಅವರನ್ನು ಕರೆದುಕೊಂಡು ಹೋದರು.





