ಮಲ್ಪೆ ಪ್ರತಿಭಟನೆಯಲ್ಲಿ ದುರುದ್ದೇಶಪೂರಿತ ಆರೋಪ ಖಂಡನೀಯ: ಸಹಬಾಳ್ವೆ

ಮಲ್ಪೆಯಲ್ಲಿ ನಡೆದ ಪ್ರತಿಭಟನಾ ಸಭೆ
ಉಡುಪಿ: ಮಲ್ಪೆ ಘಟನೆಗೆ ಸಂಬಂಧಿಸಿ ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನಾ ಸಭೆಯು ಬಿಜೆಪಿ ಪಕ್ಷದ ರಾಜಕೀಯ ಉದ್ದೇಶದ ವೇದಿಕೆಯಾಗಿ ಪರಿವರ್ತನೆಯಾಗಿರುವುದು ಮತ್ತು ಆ ಪಕ್ಷಕ್ಕೆ ಸೇರಿದ ರಾಜಕಾರಣಿಗಳು ಸಂವಿಧಾನವನ್ನು ಬುಡಮೇಲು ಮಾಡುವ ಕೃತ್ಯಗಳನ್ನು ಸಮರ್ಥಿಸಿ, ಇಡೀ ಮೀನುಗಾರ ಸಮುದಾಯವನ್ನು ತನ್ನ ದುರುದ್ದೇಶಕ್ಕೆ ಎಳೆದಿರುವುದು ಅಸಮರ್ಥನೀಯ. ಹಾಲಿ ಹಾಗೂ ಮಾಜಿ ಸಚಿವರು, ಶಾಸಕರು ಸಂವಿಧಾನಬದ್ಧವಾಗಿ ಅಧಿಕಾರ ಹೊಂದಿದವರಾಗಿದ್ದೂ ಸಂವಿಧಾನಿಕ ನಡಾವಳಿಗಳನ್ನು ಬುಡಮೇಲುಗೊಳಿಸುವ ಸಂದೇಶಗಳನ್ನು ಆ ವೇದಿಕೆಯಿಂದ ಭಿತ್ತರಿಸಿರುವುದು ಖಂಡನೀಯ ಎಂದು ಸಹಬಾಳ್ವೆ ಉಡುಪಿ ಟೀಕಿಸಿದೆ.
ಅದೇ ವೇದಿಕೆಯಲ್ಲಿ ಸಂವಿಧಾನಿಕ ನ್ಯಾಯವನ್ನು ಎತ್ತಿ ಹಿಡಿಯುವ ಮಾತುಗಳನ್ನು ಆಡಿದ ರಮೇಶ್ ಕಾಂಚನ್ ಮೇಲೆ ಆಕ್ರಮಣ ನಡೆಸುವ ಯತ್ನ ಹಾಗೂ ದಸಂಸ(ಅಂಬೇಡ್ಕರ್ ವಾದ)ದ ಮುಖಂಡರಾದ ಮಂಜುನಾಥ ಗಿಳಿಯಾರು, ಸುಂದರ್ ಮಾಸ್ತರ್ ಹಾಗು ಶ್ಯಾಮರಾಜ್ ಬಿರ್ತಿ ಮೇಲೆ ದುರುದ್ದೇಶ ಪೂರಿತ ಮಾಡಲಾದ ಆರೋಪವನ್ನು ಖಂಡಿಸುತ್ತೇವೆ.
ರಮೇಶ್ ಕಾಂಚನ್ ಹಾಗು ದ.ಸಂ.ಸ. (ಅಂಬೇಡ್ಕರ್ ವಾದ) ನಮ್ಮ ವೇದಿಕೆಯ ಸಹಭಾಗಿಗಳು. ಎಂಥ ಪ್ರತಿಕೂಲ ಸನ್ನಿವೇಶದಲ್ಲೂ ವೇದಿಕೆಯ ನ್ಯಾಯಬದ್ಧ ಆದರ್ಶವನ್ನು ಎತ್ತಿ ಹಿಡಿಯುವವರು ಮತ್ತು ನ್ಯಾಯ ಸಮಾನತೆಯ ಹೋರಾಟದಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲಲ್ಲು ಹಿಂಜರಿಯುವುದಿಲ್ಲ. ತೋಳ್ಬಲ, ಧನ ಬಲ, ಅಧಿಕಾರ ಮದಕ್ಕಿಂತ ನಮ್ಮೂರ ಶಾಂತಿ ಸೌಹಾರ್ದ ಕಾಪಾಡುವುದು ಸಂವಿಧಾನ ಬಲ. ಇದು ದುಡಿಯುವ ಮೀನುಗಾರ ಸಮುದಾಯಕ್ಕೂ ಅರ್ಥವಾಗಲಿ ಎಂದು ಸಹಬಾಳ್ವೆ ಪ್ರಧಾನ ಸಂಚಾಲಕ ಕೆ.ಫಣಿರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







