ಮಲ್ಪೆ| ಮೀನು ವ್ಯಾಪಾರಿಯ ಸುಲಿಗೆ ಪ್ರಕರಣ: ಓರ್ವ ಆರೋಪಿ ಸೆರೆ

ಮಲ್ಪೆ, ಫೆ.21: ಮಲ್ಪೆ ಬಂದರಿನಲ್ಲಿ ಮೀನು ವ್ಯಾಪಾರಿಯೊಬ್ಬರ ಮುಖಕ್ಕೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ, ಚಿನ್ನದ ಸರ ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ಮೂಲದ ಪ್ರಸ್ತುತ ಮಲ್ಪೆ ಕೊಳ ಬಾಡಿಗೆಮನೆ ನಿವಾಸಿ ಮುತ್ತಣ್ಣ(20) ಬಂಧಿತ ಆರೋಪಿ. ಈತನಿಂದ ಸುಲಿಗೆ ಮಾಡಿದ 37.570 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಫೆ.20ರಂದು ಬೆಳಗಿನ ಜಾವ ಮಲ್ಪೆ ಬಂದರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮೀನು ವ್ಯಾಪಾರಿ ದಯಾನಂದ ಕುಂದರ್ ಅವರಲ್ಲಿ ಮೀನಿನ ಬಗ್ಗೆ ವಿಚಾರಿಸುವ ನೆಪದಲ್ಲಿ ಹತ್ತಿರ ಬಂದು, ಮುಖಕ್ಕೆ ಖಾರದ ಪುಡಿಯಲ್ಲಿ ಎರಚಿದನು. ನಂತರ ಅಲ್ಲಿದ್ದ ಇಬ್ಬರು ಅಪರಿಚಿತರು ಒಟ್ಟು ಸೇರಿ ದಯಾನಂದ ಕುಂದರ್ ಅವರಿಗೆ ಚಾಕು ತೋರಿಸಿ, ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕೊಡುವಂತೆ ಕೇಳಿದರು.
ಸರ ಕೊಡಲು ನಿರಾಕರಿಸಿದಕ್ಕೆ ಆರೋಪಿ ಮುತ್ತಣ್ಣ ಮತ್ತು ಇಬ್ಬರು ಅಪರಿಚಿತರು ಸೇರಿ ದಯಾನಂದ ಕುಂದರ್ ಅವರ ಮುಖಕ್ಕೆ ಮತ್ತು ಬೆನ್ನಿಗೆ ಕೈಯಿಂದ ಹಲ್ಲೆ ಮಾಡಿ 6 ಲಕ್ಷ ರೂ. ಮೌಲ್ಯದ ಸುಮಾರು 6 ಪವನ್ ಚಿನ್ನದ ಸರವನ್ನು ಸುಲಿಗೆ ಮಾಡಿದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಮತ್ತು ಮಲ್ಪೆ ವೃತ್ತ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಮಾರ್ಗದರ್ಶನದಲ್ಲಿ, ಮಲ್ಪೆ ಪೊಲೀಸ್ ಉಪನಿರೀಕ್ಷಕ ಈರಣ್ಣ ಶಿರಗುಂಪಿ ನೇತೃತ್ವದಲ್ಲಿ ನಡೆಸಿದ್ದು, ಮಲ್ಪೆ ಎಸ್ಸೈ ಹುಸೇನ್ ಸಾಬ್ ಚಪ್ಪರಕರ್, ಸಿಬ್ಬಂದಿ ಆದರ್ಶ, ಬಸವರಾಜ ಹೈದ್ರಿ ಆರೋಪಿಯನ್ನು ಫೆ.20ರಂದು ರಾತ್ರಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.






