ಮಣಿಪಾಲ| 12 ಗಂಟೆಯೊಳಗೆ ಮನೆ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು: ಬಾಲಕರು ಸಹಿತ ನಾಲ್ವರ ಬಂಧನ

ಮಣಿಪಾಲ: 80 ಬಡಗುಬೆಟ್ಟು ಗ್ರಾಮದ ಶಾಂತಿನಗರದ ಎಂಬಲ್ಲಿ ಹಾಡುಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸರು, 12ಗಂಟೆಯೊಳಗೆ ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ವಿಜಯಪುರ ಮೂಲದ ಉಡುಪಿ ಪುತ್ತೂರು ಹನುಮಂತ ನಗರ ನಿವಾಸಿ ಸಂತೋಷ ಯಾನೆ ಸಂತೋಷ ಪೊಲೆಷಿ(20), ಕೊಡವೂರು ಗ್ರಾಮದ ಕಲ್ಮಾಡಿಯ ಚಿರಂತನ್(21) ಹಾಗೂ ಇಬ್ಬರು ಬಾಲಕರು ಎಂದು ಗುರುತಿಸಲಾಗಿದೆ.
ಶಾಂತಿನಗರದ ಸಂಗೀತ ಮಡಿವಾಳ ಎಂಬವರ ಮನೆಗೆ ಮಾ.12ರಂದು ಬೆಳಗ್ಗೆ ಹೆಂಚು ತೆಗೆದು ಒಳ ಪ್ರವೇಶಿಸಿದ ಕಳ್ಳರು, ಕಪಾಟಿನಲ್ಲಿದ್ದ ಚಿನ್ನ, ಬೆಳ್ಳಿ, ಹಾಗೂ ನಗದನ್ನು ಕಳವುಗೈದಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ವಿಶೇಷ ಪೊಲೀಸ್ ತಂಡ, ಮಾ.13ರಂದು ಮಣಿಪಾಲದ ಸಿಂಬ್ರಾ ಸೇತುವೆ ಬಳಿ ಅನುಮಾಸ್ಪದವಾಗಿ ನಿಂತ ಇಬ್ಬರು ವ್ಯಕ್ತಿಗಳು ಹಾಗೂ ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ವಿಚಾರಿಸಿದೆ. ಆಗ ಅವರು ಶಾಂತಿನಗರದಲ್ಲಿ ನಡೆಸಿರುವ ಕಳ್ಳತನದ ಬಗ್ಗೆ ಒಪ್ಪಿಕೊಂಡಿದ್ದಾರೆನ್ನಲಾಗಿದೆ. ನಂತರ ಅವರಲ್ಲಿ ಕೃತ್ಯಕ್ಕೆ ಬಳಸಿದ ಸಾಮಗ್ರಿ ಹಾಗೂ 4,47,000 ರೂ. ಮೌಲ್ಯದ ಚಿನ್ನ ಬೆಳ್ಳಿ, ಆಭರಣ ಹಾಗೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ ಎಸ್ ನಾಯ್ಕ ಮಾರ್ಗದರ್ಶನದಂತೆ ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಕೆ. ನಿರ್ದೇಶನದಂತೆ ನಡೆಸಿದ ಕಾರ್ಯಾಚರಣೆಯಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್, ಎಸ್ಶೈ ತಿಮ್ಮೇಶ್ ಬಿ.ಎನ್., ಸಿಬ್ಬಂದಿ ವಿಶ್ವಜಿತ್ ಬೆಳ್ಳೆ, ಮಹಮ್ಮದ್ ಅಜ್ವಲ್ ಹೈಕಾಡಿ, ಚೇತನ್, ರವಿರಾಜ್, ಠಾಣಾ ತನಿಖಾ ಸಹಾಯಕ ಸುರೇಶ ಶೆಟ್ಟಿ, ಸುಕುಮಾರ ಶೆಟ್ಟಿ, ಜೀಪು ಚಾಲಕ ಸಲೀಂ, ಸತೀಶ, ಹಾಗೂ ಉಡುಪಿ ಸಿಡಿಆರ್ ವಿಭಾಗದ ದಿನೇಶ ಹಾಗೂ ನಿತೀನ್ ಪಾಲ್ಗೊಂಡಿದ್ದಾರೆ.







