ಕೊಲ್ಲೂರು, ಕುಕ್ಕೆ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಮಾಸ್ಟರ್ ಪ್ಲ್ಯಾನ್ : ಸಚಿವ ರಾಮಲಿಂಗ ರೆಡ್ಡಿ

ಬೈಂದೂರು, ಜ.24: ಕೊಲ್ಲೂರು ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಚರ್ಚೆ ನಡೆದಿದ್ದು, ಮಾಸ್ಟರ್ ಪ್ಲ್ಯಾನ್ ರೂಪಿಸ ಲಾಗುತ್ತಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಬೈಂದೂರಿನಲ್ಲಿ ಶನಿವಾರ ನಡೆದ ಮೂರು ದಿನಗಳ ಕಾಲ ಬೈಂದೂರು ಉತ್ಸವ- 2026 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಗಳು ಮಹಿಳಾ ಸಬಲೀಕರಣ ಕೇಂದ್ರಿತವಾಗಿದೆ. ಇಂತಹ ಉತ್ಸವಗಳನ್ನು ಕನಿಷ್ಟ 2-3 ವರ್ಷಗಳಿಗೊಮ್ಮೆಯಾದರೂ ಆಯೋಜಿಸಿದಾಗ ಜನರಿಗೆ ಸರಕಾರದ ಕಾರ್ಯಕ್ರಮ ಗಳ ಅರಿವು ಆಗುವ ಜೊತೆಗೆ ಅದರ ಲಾಭ ಕೂಡಾ ದೊರೆಯುತ್ತದೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಇಂತಹ ಗ್ರಾಮೋತ್ಸವಗಳು ನಡೆದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮತ್ತು ಅವುಗಳಿಂದಾಗುವ ಪ್ರಯೋಜನಗಳ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ದೊರೆಯುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಡೆ ಮಾತನಾಡಿ, ಕಲೆ, ಸಾಂಸ್ಕ್ರತಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದಿ ಪಡೆದಿರುವ ಬೈಂದೂರಿನಲ್ಲಿ ಪೌರಾಣಿಕ ಹಿನ್ನೆಲೆಯುಳ್ಳ ಹಲವು ಧಾರ್ಮಿಕ ಕ್ಷೇತ್ರಗಳಿವೆ. ಹಿಂದೆ ಕುಗ್ರಾಮವಾಗಿದ್ದ ಬೈಂದೂರು ಇಂದು ಬೆಳೆದು ನಿಂತಿದೆ. ಗ್ರಾಮೋತ್ಸವ ದಿಂದ ಗ್ರಾಮಾಭಿವೃದ್ದಿಯ ಕಲ್ಪನೆ ಸಾಕಾರವಾಗಿದೆ ಎಂದು ತಿಳಿಸಿದರು.
ಗ್ರಾಮೋತ್ಸವಗಳು ಒಂದು ದಿನಕ್ಕೆ ಸೀಮಿತವಾಗದೆ ಶಾಶ್ವತ ಜ್ಯೋತಿಯಾಗಿ ಬೆಳಗಬೇಕು. ಸಮಾಜದಲ್ಲಿ ಸಂಸ್ಕಾರ ಮತ್ತು ಸಂಘಟನೆ ಬಹು ಮುಖ್ಯ. ಸರಕಾರದ ಕಾರ್ಯಕ್ರಮಗಳು ಜನರಿಗೆ ತಲುಪಲು ಗ್ರಾಮೋತ್ಸವಗಳು ಸಹಕಾರಿಯಾಗಿದ್ದು ಇದೊಂದು ನಿರಂತರ ಪ್ರಕ್ರಿಯೆಯಾಗಿ ಮುಂದುವರಿದು ಜನರ ಬದುಕು ಹಸನಾಗಬೇಕು ಎಂದರು.
ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ನಂಜುಡಪ್ಪ ವರದಿಯ ಪ್ರಕಾರ ಬೈಂದೂರು ಅತ್ಯಂತ ಹಿಂದುಳಿದ ತಾಲೂಕಾಗಿತ್ತು. ಬೈಂದೂರು ಉತ್ಸವದಂತಹ ಕಾರ್ಯಕ್ರಮಗಳು ತಾಲೂಕಿನ ಅಭಿವೃದ್ದಿಗೆ ಕಾರಣವಾಗಿವೆ. ಬೈಂದೂರಿನಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ರೈಲು, ರಸ್ತೆ, ಜಲಸಾರಿಗೆ ಸೇರಿದಂತೆ ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಗೊಳಿಸಿ ತಾಲೂಕಿನ ಪ್ರವಾಸೋದ್ಯಮಕ್ಕೆ ಬಲ ತುಂಬಿ ಪ್ರವಾಸಿಗರನ್ನು ಸೆಳೆಯಲು ಬೈಂದೂರು ಉತ್ಸವದಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಕಿರಣ ಕುಮಾರ್ ಕೊಡ್ಗಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಕೊಲ್ಲೂರು ದೇವಳದ ಪ್ರಧಾನ ಅರ್ಚಕರಾದ ಕೆ.ರಾಮಚಂದ್ರ ಅಡಿಗ, ಕೆ.ಎನ್.ಶ್ರೀಧರ ಅಡಿಗ, ಕೆ.ಎನ್.ಸುಬ್ರಹ್ಮಣ್ಯ ಅಡಿಗ, ಮುಖಂಡರಾದ ಅನಿತಾ ಆರ್.ಕೆ., ಅನೀಲ್ ಕುಮಾರ್ ಬಿ.ಸಿ. ಟ್ರಸ್ಟ್ ಧರ್ಮಸ್ಥಳ, ಉದ್ಯಮಿ ವೆಂಕಟೇಶ ಕಿಣಿ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಣುತ್ ಗಾಣಿಗ ಹಾಗೂ ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.







