ಮಾನವಿಕಶಾಸ್ತ್ರ ಅಧ್ಯಯನಕ್ಕೆ ಮನಸ್ಸು ವಿಸ್ತಾರಗೊಳ್ಳಬೇಕು: ಪ್ರೊ.ಶೆಟ್ಟಿ

ಕಾರ್ಕಳ, ಜು.19: ಮಾನವಿಕ ಶಾಸ್ತ್ರದ ವಿಷಯಗಳ ಅಧ್ಯಯನದಲ್ಲಿ ಜೀವಂತಿಕೆ ಇದೆ. ನಮ್ಮ ಕಲಿಕೆಯ ವಿಷಯಗಳು ನಮ್ಮ ನೆಲದಲ್ಲಿಯೇ ಹುಟ್ಟಿ ಬಂದ ವಿಷಯಗಳು. ಹಾಗಾಗಿ ವಿದ್ಯಾರ್ಥಿಗಳ ಅಧ್ಯಯನದಲ್ಲಿ ಆಸಕ್ತಿ ಮತ್ತು ಶ್ರೇಷ್ಠತೆಯನ್ನು ಕಾಣಬೇಕಾದರೆ ಸಮಾಜವನ್ನು ಕಣ್ಣು ತೆರೆದು ನೋಡುವ ಮನೋಭೂಮಿಕೆ ಬೆಳೆಸಿಕೊಳ್ಳಬೇಕು ಎಂದು ರಾಜ್ಯಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಹಾಗೂ ರಾಜಕೀಯ ವಿಶ್ಲೇಷಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಕಾರ್ಕಳದ ಶ್ರೀಭುವನೇಂದ್ರ ಪದವಿ ಪೂರ್ವ ಕಾಲೇಜಿನ ಮಾನವಿಕ ಶಾಸ್ತ್ರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಫೌಂಡೇಷನ್ ಕೋರ್ಸ್-23ನ್ನು ಉದ್ಘಾಟಿಸಿದ ಬಳಿಕ ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆಯುವ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಎಎಸ್, ಐಎಎಸ್ನಂತಹ ಪರೀಕ್ಷೆಗಳು ಕಲಾ ಅಧ್ಯಯನ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರವಾಗಿದ್ದು ಈ ಸಾಧನೆ ತಮದಾಗಿಸಲು ಇಚ್ಛಾ ಶಕ್ತಿ ಗುರಿ ಸಾಧನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ಪ್ರೊ. ರಮೇಶ್ ಎಸ್ಸಿ ಮಾತನಾಡಿ, ಕಳೆದ ಎರಡು ವರುಷ ಗಳಿಂದ ಕಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉನ್ನತ ಶಿಕ್ಷಣ ಉದ್ಯೋಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ನಿಟ್ಟಿನಲ್ಲಿ ಪಾಠದ ಜೊತೆಗೆ ನುರಿತ ತಜ್ಞರಿಂದ ತರಬೇತಿ ಉಪನ್ಯಾಸ ನೀಡುವ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದೇವೆ. ವಿದ್ಯಾರ್ಥಿಗಳು ಇದರ ಸದಪಯೋಗ ಪಡೆಯ ಬೇಕು ಎಂದರು.
ಫೌಂಡೇಶನ್ ಕೋರ್ಸ್ನ ಸಂಯೋಜಕಿ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಮಾಲಿನಿ ಜೈನ್ ಪ್ರಾಸ್ತಾವನೆಗೈದರು. ಕಲಾ ವಿಭಾಗದ ವಿದ್ಯಾರ್ಥಿ ಗಳಾದ ಡೊಮಿನಿಕ ಸುಹಾಸ್ ಸ್ವಾಗತಿಸಿ, ಸ್ವಾತಿ ಅತಿಥಿ ಪರಿಚಯ ನೀಡಿದರು. ನುಮಾ ಐಶಾ ವಂದಿಸಿ, ದೀಕ್ಷಿತ್ ಆರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.