ಉಡುಪಿ ಸರ್ವಿಸ್ ಬಸ್ನಿಲ್ದಾಣ ಸಮಸ್ಯೆಗೆ ಶಾಸಕರ ನಿರ್ಲಕ್ಷ್ಯ ಕಾರಣ : ಪ್ರಸಾದ್ರಾಜ್ ಕಾಂಚನ್

ಉಡುಪಿ : ಮಳೆಗಾಲದಲ್ಲಿ ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ನೀರು ಸೋರಿಕೆಯಾಗಿ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿರುವ ಕುರಿತು ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರಯಾಣಿಕರು ಮಳೆಯ ಸಂದರ್ಭದಲ್ಲಿ ಕೂರಲು ಸಾಧ್ಯವಾಗದೆ ಸಮಸ್ಯೆ ಅನುಭವಿಸುತ್ತಿರುವ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದರು ಮತ್ತು ಸರಕಾರದ ಹಂತದಲ್ಲಿ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ನಾನು ನಗರದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ವೇಳೆ ಇಲ್ಲಿನ ಅಂಗಡಿ ಮಾಲಕರು ಸಾರ್ವಜನಿಕರು ಇಲ್ಲಿನ ಸಮಸ್ಯೆಗಳ ಕುರಿತು ತಮ್ಮ ದೂರುಗಳನ್ನು ನೀಡಿದ್ದಾರೆ. ಈಗಾಗಲೇ ನಗರಸಭೆಯ ಆಯುಕ್ತರನ್ನು ಸಂಪರ್ಕಿಸಿ ಇಲ್ಲಿನ ಸಮಸ್ಯೆಗಳನ್ನು ಕೂಡಲೇ ಪರಿಹಾರ ಮಾಡುವಂತೆ ಕೋರಿದ್ದೇನೆ ಎಂದರು.
ಬಸ್ ನಿಲ್ದಾಣದಲ್ಲಿ ಬಸ್ಸುಗಳನ್ನು ಅನಗತ್ಯವಾಗಿ ಪಾರ್ಕ್ ಮಾಡಿ ಗ್ರಾಹಕರು ಅಂಗಡಿಗಳಿಗೆ ಬಾರದಂತೆ ತೊಂದರೆ ಉಂಟು ಮಾಡುತ್ತಿರುವ ಕುರಿತು ಕೂಡ ಅಂಗಡಿ ಮಾಲಕರು ದೂರು ನೀಡಿದ್ದಾರೆ. ಈ ಕುರಿತು ಕೂಡ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದೇವೆ. ಬಸ್ ನಿಲ್ದಾಣ ಅವ್ಯವಸ್ಥೆ ಕಂಡಾಗ ಉಡುಪಿ ಶಾಸಕರ ವೈಫಲ್ಯ ಎದ್ದು ಕಾಣುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಅವರು ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸರಿಯಲ್ಲ. ಶಾಸಕರು ಇನ್ನಾದರೂ ಈ ಬಗ್ಗೆ ನಿಗಾವಹಿಸಿ ಸಮಸ್ಯೆ ಪರಿಹರಿಸುವಂತೆ ಅವರ ಮನವಿ ಮಾಡಿದರು.






