ಇಎಸ್ಐ ಆರೋಗ್ಯ ವಿಮೆ ವೇತನ ಮಿತಿ ಹೆಚ್ಚಿಸಲು ಸಂಸದ ಕೋಟರಿಂದ ಕೇಂದ್ರ ಕಾರ್ಮಿಕ ಸಚಿವರಿಗೆ ಮನವಿ

ಉಡುಪಿ: ಇಎಸ್ಐ ಆರೋಗ್ಯ ವಿಮೆ ವೇತನ ಮಿತಿಯನ್ನು 21,000ರೂ.ಗಳಿಂದ 30,000ರೂ.ಗಳಿಗೆ ಹೆಚ್ಚಿಸುವಂತೆ ಒತ್ತಾಯಿಸಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಕಾರ್ಮಿಕ ಸಚಿವ ಡಾ.ಮನ್ಸುಕ್ ಮಾಂಡವೀಯ ಅವರಿಗೆ ಮನವಿ ಅರ್ಪಿಸಿದರು.
ಕೇಂದ್ರ ಪ್ರಾಯೋಜಿತ ಇಎಸ್ಐ ಆರೋಗ್ಯ ವಿಮೆ ಇಪ್ಪತ್ತೊಂದು ಸಾವಿರದ ಒಳಗೆ ವೇತನ ಪಡೆಯುವ ಸಿಬ್ಬಂದಿಗಳಿಗೆ ಮಾತ್ರ ಸೀಮಿತ ವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಸರಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ವೇತನವನ್ನು ಪರಿಷ್ಕರಣೆ ಮಾಡಿರುವ ಹಿನ್ನೆಲೆಯಲ್ಲಿ ಬಹುತೇಕ ಮಂದಿ ಕಾರ್ಮಿಕರು ಹೆಚ್ಚಿನ ವೇತನ ಪಡೆಯುತ್ತಿದ್ದಾರೆ ಎಂದು ಕೋಟ ಮನವಿಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ ವೇತನದ ಮಿತಿಯನ್ನು ಇಪ್ಪತ್ತೊಂದು ಸಾವಿರದಿಂದ ಮೂವತ್ತು ಸಾವಿರಕ್ಕೆ ಏರಿಸಬೇಕೆಂದು ಕೋಟ ಶ್ರೀನಿವಾಸ್ ಪೂಜಾರಿ, ಡಾ.ಮನ್ಸುಕ್ ಮಾಂಡವೀಯರಿಗೆ ಸಲ್ಲಿಸಿದ ಲಿಖಿತ ಮನವಿಯಲ್ಲಿ ಒತ್ತಾಯಿಸಿದ್ದಾರೆ. ವೇತನ ಮಿತಿಯಲ್ಲಿ ಶೀಘ್ರವೇ ಪರಿಷ್ಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಸ್ಥಾಪಿಸಲುದ್ದೇಶಿಸಿರುವ ಪ್ರಸ್ತಾವಿತ 100 ಹಾಸಿಗೆಗಳ ಅತ್ಯಾಧುನಿಕ ಇಎಸ್ಐ ಆಸ್ಪತ್ರೆಯನ್ನು ಶೀಘ್ರವೇ ಪ್ರಾರಂಭಿಸಲು ಸಹ ಅವರು ಕೋರಿಕೆ ಸಲ್ಲಿಸಿದರು.
ಸಂಸದರ ಮನವಿ ಪರಿಶೀಲಿಸಿದ ಕೇಂದ್ರ ಸಚಿವರು, ಇ.ಎಸ್.ಐ ಮೊತ್ತ ಪರಿಷ್ಕರಣೆ ಹಾಗೂ ಬ್ರಹ್ಮಾವರದ ಆಸ್ಪತ್ರೆ ಬಗ್ಗೆ ಸದ್ಯದಲ್ಲೇ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದರು.







