ಮುದರಂಗಡಿ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣ: ಸೂತ್ರಧಾರನ ಪತ್ತೆಗೆ ಉತ್ತರ ಭಾರತದಲ್ಲಿ ಶೋಧ; ಹಲವರ ವಿಚಾರಣೆ

ಉಡುಪಿ: ಮುದರಂಗಡಿ ಗ್ರಾಪಂ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದ ಸೂತ್ರಧಾರನ ಸುಳಿವು ಈಗಾಗಲೇ ಪೊಲೀಸರಿಗೆ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಉತ್ತರ ಭಾರತಕ್ಕೆ ತೆರಳಿ ಹಲವರನ್ನು ವಿಚಾರಣೆಗೆ ಒಳಪಡಿಸಿದೆ ಎಂದು ತಿಳಿದುಬಂದಿದೆ.
ಅದಾನಿ ಯುಪಿಸಿಎಲ್ ಕಾಮಗಾರಿಗೆ ಸಂಬಂಧಿಸಿದ ಹಣಕಾಸು ವಿಚಾರದಲ್ಲಿ ಡೇವಿಡ್ ಡಿಸೋಜ ಅವರನ್ನು ಸುಪಾರಿ ನೀಡಿ ಹತ್ಯೆ ನಡೆಸಿರುವುದರಿಂದ ಕಾಮಗಾರಿ ಗುತ್ತಿಗೆ ವಹಿಸಿರುವ ಉತ್ತರ ಭಾರತದ ಗುತ್ತಿಗೆದಾರನ ಬಂಧನಕ್ಕೆ ಎರಡು ಪೊಲೀಸ್ ತಂಡ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶಕ್ಕೆ ತೆರಳಿದೆ.
ಡೇವಿಡ್ ಡಿಸೋಜರ ಹತ್ಯೆಗೆ ಸುಪಾರಿ ನೀಡಿರುವ ಸೂತ್ರಧಾರನ ಬಗ್ಗೆ ಈಗಾಗಲೇ ಪೊಲೀಸರಿಗೆ ಸುಳಿವು ದೊರೆತಿದ್ದು, ಆ ನಿಟ್ಟಿನಲ್ಲಿ ಈಗಾಗಲೇ ಹರಿಯಾಣ ತಲುಪಿರುವ ತಂಡ ಆರೋಪಿಗಳಿಗಾಗಿ ವ್ಯಾಪಾಕ ಶೋಧ ಕಾರ್ಯ ನಡೆಸುತ್ತಿದೆ. ತಂಡ ಹರಿಯಾಣ, ಪಂಬಾಜ್ ರಾಜ್ಯಗಳಲ್ಲಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈವರೆಗೆ ಯಾರನ್ನು ಕೂಡ ಪೊಲೀಸರು ಬಂಧಿಸಿಲ್ಲ ಎಂದು ತಿಳಿದುಬಂದಿದೆ.
ಆ.7ರಂದು ಮದ್ಯಾಹ್ನ 3.45ರ ಸುಮಾರಿಗೆ ಮುದರಂಗಡಿಯಲ್ಲಿ ಡೇವಿಡ್ ಡಿಸೋಜರನ್ನು ಸುಫಾರಿ ಕಿಲ್ಲರ್ಗಳು ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಿದ್ದು, ಮಿಂಚಿನ ಕಾರ್ಯಾಚರಣೆಯಲ್ಲಿ ಪೊಲೀಸರು ಆರೋಪಿಗಳಾದ ಉತ್ತರಪ್ರದೇಶ ರಾಜು, ಉತ್ತರಖಾಂಡದ ಅಜಯ್ ರಸ್ತೋಗಿ ಮತ್ತು ಬಿಹಾರ ರಾಜ್ಯದ ಜಿಯಾಹುಲ್ ವಜೂಲ್ ಶೇಖ್ನನ್ನು ಬಂಧಿಸಿದ್ದರು. ಇದರಲ್ಲಿ ಪ್ರಮುಖ ಆರೋಪಿ ರಾಜು ಕಾಲಿಗೆ ಗುಂಡೇಟು ತಗಲಿದ್ದು, ಆತ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಬ್ಬರು ಆರೋಪಿಗಳು ಪೊಲೀಸ್ ಕಸ್ಟಡಿಗೆ?
ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳ ಪೈಕಿ ಅಜಯ್ ರಸ್ತೋಗಿ ಮತ್ತು ಜಿಯಾಹುಲ್ ವಜೂಲ್ ಶೇಖ್ನನ್ನು ಪ್ರಕರಣದ ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ನೇತೃತ್ವದಲ್ಲಿ ಶನಿವಾರ ರಾತ್ರಿ ವೇಳೆ ನ್ಯಾಯಾಧೀಶರ ನಿವಾಸ ಕಚೇರಿ ಮುಂದೆ ಹಾಜರುಪಡಿಸ ಲಾಯಿತು.
ಇಬ್ಬರು ಆರೋಪಿಗಳನ್ನು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಸೋಮವಾರ ಪೊಲೀಸರು ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು 15 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿ ಈ ಹತ್ಯೆಗೆ ಸ್ಥಳೀಯವಾಗಿ ಸಹಕರಿಸಿದವರನ್ನು ಪತ್ತೆ ಹಚ್ಚಲು ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಪೊಲೀಸರು ಕಾರ್ಯನ್ಮೋಖರಾಗಲಿದ್ದಾರೆ.
‘ಡೇವಿಡ್ ಡಿಸೋಜರ ಹತ್ಯೆ ಪ್ರಕರಣದ ತನಿಖೆ ಮುಂದುವರೆದಿದ್ದು, ನಮ್ಮ ತಂಡ ಈಗಾಗಲೇ ಉತ್ತರ ಭಾರತಕ್ಕೆ ತೆರಳಿ ತನಿಖೆ ನಡೆಸುತ್ತಿದೆ. ಈ ಸಂಬಂಧ ಈವರೆಗೂ ಯಾರನ್ನು ಕೂಡ ಬಂಧಿಸಿಲ್ಲ. ಈಗಾಗಲೇ ಬಂಧಿತರಾಗಿರುವ ಆರೋಪಿಗಳನ್ನು ಸೋಮವಾರ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದುʼ.
-ಹರಿರಾಂ ಶಂಕರ್, ಎಸ್ಪಿ ಉಡುಪಿ






