ಕುಂದಾಪುರ| ಅತ್ತಿಕೋಣೆಯಲ್ಲಿ ಕುಡಿಯುವ ನೀರಿಗೆ ತತ್ವಾರ; ಒಂದು ಕೊಡಪಾನ ನೀರು ತರಲು ದೋಣಿ ಅವಲಂಬನೆ

ಕುಂದಾಪುರ, ಎ.19: ಸೌಪರ್ಣಿಕಾ ನದಿಯ ತಟದಲ್ಲಿಯೇ ಇರುವ ಈ ಊರಿನಲ್ಲಿ ಕುಡಿಯುವ ನೀರಿಗೆ ತತ್ವಾರವಿದೆ. ಹಳೆಯ ಟ್ಯಾಂಕ್ ಸಮೀಪವೇ ಸುಮಾರು 22 ಲಕ್ಷ ರೂ. ಖರ್ಚು ಮಾಡಿ, ಹೊಸ ನೀರಿನ ಟ್ಯಾಂಕ್ ನಿರ್ಮಿಸಿದ್ದರೂ, ಇಲ್ಲಿನ ಜನರ ನೀರಿನ ಸಮಸ್ಯೆಗೆ ಮಾತ್ರ ಇನ್ನೂ ಮುಕ್ತಿ ದೊರಕಿಲ್ಲ. ಹಲವು ವರ್ಷಗಳಿಂದ ಕುಡಿಯುವ ನೀರಿಗಾಗಿ ಜನರು ಅನುಭವಿಸುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ. ಕುಡಿಯುವ ನೀರು ಸೇರಿದಂತೆ ದಿನಬಳಕೆಗಾಗಿ ನೀರನ್ನು ದೋಣಿ ಮೂಲಕ ಹೊಳೆ ದಾಟಿ ತರಬೇಕಾದ ಸ್ಥಿತಿ ಇಲ್ಲಿಯ ಜನರದ್ದಾಗಿದೆ. ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಡವು ಗ್ರಾಮದ ಅತ್ತಿಕೋಣೆ ಪರಿಸರದ ನಿವಾಸಿಗಳು ಎದುರಿಸುತ್ತಿರುವ ದಿನನಿತ್ಯದ ಬವಣೆಯಿದು.
ಅತ್ತಿಕೋಣೆ ಗ್ರಾಮದ ಪರಿಸರಕ್ಕೆ ಸುಮಾರು 20 ವರ್ಷಗಳ ಹಿಂದೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಕೆಗೆ 50 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲಾಗಿತ್ತು. ಆದರೂ ಪ್ರತಿ ಮಾರ್ಚ್, ಎಪ್ರಿಲ್, ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿತ್ತು. ಅದಕ್ಕಾಗಿ ಈ ವರ್ಷ ಪಂಚಾಯತ್ನಿಂದ 22.44 ಲಕ್ಷ ರೂ. ಖರ್ಚು ಮಾಡಿ, ಪಡುಕೋಣೆಯ ಸರಕಾರಿ ಶಾಲೆ ಬಳಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಹೊಸ ಟ್ಯಾಂಕ್ ನಿರ್ಮಿಸಲಾಗಿತ್ತು.
ಇತ್ತೀಚೆಗೆ ಉದ್ಘಾಟನೆಯಾದರೂ ಕೂಡ ಸಮೀಪದ ಮನೆಗಳಿಗೆ ಸಹ ಇದರಿಂದ ನೀರು ಪೂರೈಕೆಯಾಗುತ್ತಿಲ್ಲ. ಲಕ್ಷಾಂತರ ರೂ. ಖರ್ಚು ಮಾಡಿದರೂ ಅತ್ತಿಕೋಣೆ ಪರಿಸರಕ್ಕೆ ಕನಿಷ್ಠ 2 ದಿನಕ್ಕೊಮ್ಮೆ ನೀರು ಕೊಡಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ನಾಡ ಗ್ರಾಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸುತಿದ್ದಾರೆ.
ಅತ್ತಿಕೋಣೆ ಪರಿಸರದಲ್ಲಿ ಟ್ಯಾಂಕ್ ನಿರ್ಮಿಸುವ ಮೊದಲು ಗ್ರಾಮಸ್ಥರು ಸೌಪರ್ಣಿಕಾ ನದಿಯನ್ನು ದೋಣಿ ಮೂಲಕ ದಾಟಿ ತ್ರಾಸಿಯ ಖಾಸಗಿ ವ್ಯಕ್ತಿಯೊಬ್ಬರ ಬಾವಿಯಿಂದ ನೀರು ತರುತ್ತಿದ್ದರು. ಈಗ ಮತ್ತೆ 15 ದಿನದಿಂದ ಜನರ ಪರಿಸ್ಥಿತಿಯೂ ಅದೇ ಆಗಿದೆ. ಅತ್ತಿಕೋಣೆಯಿಂದ ದೋಣಿ ಮೂಲಕ ಹೊಳೆ ದಾಟಿ ತ್ರಾಸಿಗೆ ತೆರಳಿ ಅಲ್ಲಿಂದ ಕೊಡಪಾನ, ಬಕೆಟ್ಗಳಲ್ಲಿ ನೀರು ತುಂಬಿಸಿಕೊಂಡು, ಮತ್ತೆ ದೋಣಿಯಲ್ಲಿ ಹೊಳೆ ದಾಟಿ ಬರಬೇಕಾದ ಅನಿವಾರ್ಯತೆಯಿದೆ.
‘ಕುಡಿಯಲು ಒಂದು ಕೊಡಪಾನ ನೀರು ಬೇಕಾದರೂ ನದಿ ದಾಟಬೇಕಿದೆ. ಇಲ್ಲಿ ದಿನಕ್ಕೆ ಒಂದು ಕೊಡಪಾನ ನೀರು ಸಹ ಸಿಗುತ್ತಿಲ್ಲ. ಮೊಮ್ಮಗ ನೀರು ತಂದರೆ ಕುಡಿಯುವ ನೀರು ಸಿಗುತ್ತದೆ. ದೂರ ಹೋಗಿ ತರಲು ದೇಹದಲ್ಲಿ ಶಕ್ತಿಯಿಲ್ಲ ಎನ್ನುತ್ತಾರೆ ಹಿರಿಯ ಮಹಿಳೆ ಅಂತಿ ದೇವಾಡ್ತಿ
ನೀರಿಗೆ ಪರದಾಟ-ಚುನಾವಣಾ ಬಹಿಷ್ಕಾರದ ಎಚ್ಚರಿಕೆ!
ಅತ್ತಿಕೋಣೆ ಪ್ರದೇಶ ಸೌಪರ್ಣಿಕ ನದಿಯ ದಡದಲ್ಲಿದೆ. 70ಕ್ಕೂ ಅಧಿಕ ಮನೆಗಳಲ್ಲಿ ಇನ್ನೂರಕ್ಕೂ ಅಧಿಕ ಜನರಿದ್ದಾರೆ. ಶಾಲೆ-ಕಾಲೇಜಿಗೆ ತೆರಳುವ ಮಕ್ಕಳು, ಹಿರಿಯ ನಾಗರಿಕರು ಇಲ್ಲಿದ್ದಾರೆ. ಇಲ್ಲಿನ ಹೆಚ್ಚಿನ ಮನೆಗಳಲ್ಲಿ ಬಾವಿಯಿಲ್ಲ. ಇರುವ ಬಾವಿಗಳ ನೀರು ಉಪ್ಪಾಗಿದೆ. ಅದು ಒಗರಾಗಿದ್ದು ಕುಡಿಯಲು, ಅಡುಗೆ, ಸ್ನಾನಕ್ಕೂ ಬಳಸಲು ಸಾಧ್ಯವಿಲ್ಲ ವಾಗಿದೆ. ಒಂದೆಡೆ ಬಾವಿಯೂ ಇಲ್ಲ, ಇನ್ನೊಂದೆಡೆ ನಳ್ಳಿ ನೀರು ಇಲ್ಲದೇ ಇಲ್ಲಿನ ಜನರು ನೀರಿಗಾಗಿ ಪರದಾಟ ನಡೆಸುವಂತಾಗಿದೆ.
ಚುನಾವಣೆ ಸಂದರ್ಭ ಮತ ಕೇಳಲು ಬರುವ ವಿವಿಧ ಪಕ್ಷದವರು ತಾವು ಗೆದ್ದ ಬಳಿಕ ಇತ್ತ ಕಡೆ ಸುಳಿಯಲ್ಲ. ನಮ್ಮ ಕಷ್ಟದ ಬಗ್ಗೆ ಸ್ಪಂದಿಸುವುದಿಲ್ಲ. ಬಹುಕಾಲದ ನಮ್ಮ ಕುಡಿಯುವ ನೀರಿನ ಸಮಸ್ಯೆ ಸಹಿತ ಮೂಲ ಸೌಕರ್ಯ ಗಳನ್ನು ಪೂರೈಸದೇ ಇದ್ದಲ್ಲಿ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸು ವುದಾಗಿ ಇಲ್ಲಿನ ನಿವಾಸಿಗಳ ಪರವಾಗಿ ಸ್ಥಳೀಯ ನಿವಾಸಿ ಮಂಜುನಾಥ ದೇವಾಡಿಗ ತಿಳಿಸಿದ್ದಾರೆ.
‘ಹಳೆ ಟ್ಯಾಂಕ್ ಇದ್ದಾಗಲೂ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇತ್ತು. ಈಗ ಅದಕ್ಕಿಂತ ದೊಡ್ಡದಾದ ಹೊಸ ಟ್ಯಾಂಕ್ ನಿರ್ಮಾಣವಾದರೂ ನೀರಿನ ಸಮಸ್ಯೆ ನೀಗಿಲ್ಲ. ಕಳೆದ ಹಲವು ದಶಕಗಳಿಂದಲೂ ನಮ್ಮೂರಿನ ಜನ ಇದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಟ್ಯಾಂಕ್ ನಿರ್ಮಾಣಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿದರೂ ನಳ್ಳಿಯಲ್ಲಿ ಒಂದು ಹನಿ ನೀರು ಬಂದಿಲ್ಲ. ಜನರ ಸಂಕಷ್ಟವನ್ನು ಆಳುವ ಜನಪ್ರತಿನಿಧಿಗಳು ಅರಿಯಬೇಕು. ತುರ್ತಾಗಿ ಟ್ಯಾಂಕರ್ ಮೂಲಕ ವಾದರೂ ನೀರು ಸರಬರಾಜು ಮಾಡಲು ಕ್ರಮವಹಿಸಬೇಕು.
-ಟೋನ್ ಡಿಸೋಜಾ ಅತ್ತಿಕೋಣೆ, ಸ್ಥಳೀಯ ನಿವಾಸಿ.
‘ನೀರು ತರಲು ದೋಣಿ ಬೇಕು. ದೋಣಿಯಲ್ಲಿ ಹೊಳೆದಾಟಿ ನಿತ್ಯ ಬಳಕೆಗೆ ಬೇಕಾದಷ್ಟು ನೀರು ತರುವುದು ಅಸಾಧ್ಯ. ವರ್ಷಂಪ್ರತಿ ನೀರಿನ ಸಮಸ್ಯೆ ಕಾಡುತ್ತಿದ್ದರೂ ಸ್ಥಳೀಯಾಡಳಿತದ ಸ್ಪಂದನೆಯಿಲ್ಲ. ಬಾವಿ ತೋಡಿದರೂ, ಕೊಳವೆ ಬಾವಿಯಲ್ಲೂ ಉಪ್ಪು ನೀರು ಬರುತ್ತದೆ. ಉಪ್ಪು ನೀರು ಕುಡಿಯುವುದು ಅನಿವಾರ್ಯವಾಗಿದೆ. ಅನಾರೋಗ್ಯ ಪೀಡಿತರ ಸಮಸ್ಯೆ ಹೇಳತೀರದಾಗಿದೆ. ಜನಪ್ರತಿನಿಧಿಗಳು ಕಷ್ಟ ಕೇಳಲ್ಲ. ಮನೆಗೆ ಅಳವಡಿಸಿದ ನಳ್ಳಿಯಲ್ಲಿ ನೀರು ಬರಲ್ಲ. ನಿತ್ಯ ಬಳಕೆಗೆ, ಕುಡಿಯಲು ನೀರಿಲ್ಲ. ಬೇಸಿಗೆಯಲ್ಲಿ ಅಗತ್ಯವಾಗಿ ನೀರು ಪೂರೈಕೆಗೆ ಕ್ರಮವಹಿಸಬೇಕು.
-ಪ್ರೇಮಾ, ಕ್ಲಾರಾ ಒಲಿವೇರಾ, ಮರಿಯಾ ಡಿಸೋಜಾ (ಸ್ಥಳೀಯ ನಿವಾಸಿಗಳು)






