ನಾರಾಯಣಗುರುಗಳು ಪರಿವರ್ತನೆಯ ಹರಿಕಾರ: ಶಾಸಕ ಕೊಡ್ಗಿ

ಕುಂದಾಪುರ: ನಾರಾಯಣ ಗುರುಗಳು ಸಮಾಜದ ಪರಿವರ್ತನೆಯ ಹರಿಕಾರ. ಶೋಷಿತರ ಪರವಾಗಿ ನಿಂತು ಅಸಮಾನತೆ ಹೋಗಲಾಡಿಸಿ ಸಮ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದ್ದು, ಅವರ ಆದರ್ಶಗಳನ್ನು ಎಲ್ಲರೂ ಪಾಲಿಸ ಬೇಕು ಎಂದು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಮಂಗಳವಾರ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜನ್ಮ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಮೇಲು-ಕೀಳು ವ್ಯವಸ್ಥೆ ತೊಡೆದುಹಾಕುವಲ್ಲಿ ನಾರಾಯಣ ಗುರುಗಳ ಹೋರಾಟ ಅಗ್ರಗಣ್ಯ. ಅವರ ತತ್ವ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಶಿಕ್ಷಣ ಹಾಗೂ ಸಂಘಟನೆಯಿಂದ ಸಮಾಜವನ್ನು ತಿದ್ದಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಗುರುಗಳು ನಮಗೆ ಪ್ರೇರಣೆ. ಭಾಷಣ-ಭಜನೆಯಿಂದ ಸಮಾಜ ಕಟ್ಟಲು ಸಾಧ್ಯವಿಲ್ಲ. ಬದಲಾಗಿ ಗುರುಗಳ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಕುಂದಾಪುರ ಸಹಾಯಕ ಕಮಿಷನರ್ ಕೆ.ಮಹೇಶ್ಚಂದ್ರ, ಸಮಾಜದ ಪ್ರಮುಖ ಉದಯ್ ಪೂಜಾರಿ ಬೆಳ್ವೆ ಮಾತನಾಡಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಕೆ.ಜಿ., ಮಹಿಳಾ ಘಟಕ ಅಧ್ಯಕ್ಷೆ ಗಿರಿಜಾ ಮಾಣಿಗೋಪಾಲ್, ಯುವಕ ಮಂಡಲ ಅಧ್ಯಕ್ಷ ಸಂದೇಶ್ ಪೂಜಾರಿ ಉಪಸ್ಥಿತರಿದ್ದರು. ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಸ್ವಾಗತಿಸಿ, ಉಪ ತಹಶೀಲ್ದಾರ್ ವಿನಯ್ ನಿರ್ವಹಿಸಿದರು. ಗಣೇಶ್ ಶೇಡಿಮನೆ ವಂದಿಸಿದರು.







