ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ನರೇಂದ್ರ ಕುಮಾರ್ ಕೋಟ ಆಯ್ಕೆ

ನರೇಂದ್ರ ಕುಮಾರ್ ಕೋಟ
ಉಡುಪಿ: ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ, ನರೇಂದ್ರ ಕುಮಾರ್ ಕೋಟ ಆಯ್ಕೆಯಾಗಿದ್ದಾರೆ.
ಸಾಲಿಗ್ರಾಮ ಚಿತ್ರಪಾಡಿ ನಿವಾಸಿ ನರೇಂದ್ರ ಕುಮಾರ್, ಕಳೆದ 24 ವರ್ಷ ಗಳಿಂದ ವಿವೇಕ ವಿದ್ಯಾಸಂಸ್ಥೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂಎ ಬಿಎಡ್ ಪದವೀಧರರಾಗಿರುವ ಇವರು, ಬರವಣಿಗೆ, ನಿರ್ದೇಶನ, ನಿರೂಪಣೆ, ತರಬೇತಿ ನೀಡುವಿಕೆ, ಧ್ವನಿ ನೀಡುವಿಕೆ, ಗಾಯನ, ಟಿವಿ ಕಾರ್ಯಕ್ರಮ ನಿರ್ವಹಣೆ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡಿದ್ದಾರೆ.
ಇವರ 200ಕ್ಕೂ ಅಧಿಕ ಕವನಗಳು, 23 ಕಥೆಗಳು, 150 ಲೇಖನಗಳು, 16 ವಿಶೇಷ ಲೇಖನಗಳು, ನೂರಾರು ಪತ್ರಿಕಾ ಅಂಕಣಗಳು ಪ್ರಕಟಗೊಂಡಿವೆ. ಮಕ್ಕಳ ಹಸ್ತಪತ್ರಿಕೆ ಎಂಬ ವಿಶೇಷ ಪ್ರಬಂಧ ಸಂಕಲವನ್ನು ಹುಟ್ಟು ಹಾಕಿದ ಇವರು ಕಾರಂತ ಹುಟ್ಟೂರು ಪ್ರತಿಷ್ಠಾನ ಸೇರಿದಂತೆ 20ಕ್ಕೂ ಹೆಚ್ಚು ಸ್ವಯಂ ಸೇವಾ ಸಂಘಟನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ನಿರ್ಮಾಣದ ಸುಗಂ ಕನ್ನಡ ಚಲನ ಚಿತ್ರ ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ ಹಾಗೂ ಕುದ್ರು, ಬಾಲು, ಮತ್ತೆ ಗಾಂ, ವಿವೇಕ ರಶ್ಮಿ ಮುಂತಾದ ಮಕ್ಕಳ ಕಿರುಚಿತ್ರಗಳು ಮೆಚ್ಚುಗೆ ಗಳಿಸಿದೆ. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಮಟ್ಟದ ಸಾಧಕ ಶಿಕ್ಷಕ ಪ್ರಶಸ್ತಿ, ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದು, ಇವರ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ವಿಶ್ವ ದಾಖಲೆ ಬರೆದಿದೆ.
ಸೆ.5ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.







