ಬಿಹಾರದಲ್ಲಿ ಎನ್ಡಿಎಗೆ ಬಹುಮತ: ಉಡುಪಿ ಬಿಜೆಪಿಯಿಂದ ಸಂಭ್ರಮಾಚರಣೆ

ಉಡುಪಿ : ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಎನ್ಡಿಎ. ಒಕ್ಕೂಟದ ಭರ್ಜರಿ ಬಹುಮತದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಚೇರಿಯ ಬಳಿ ಸಂಭ್ರಮಾಚರಣೆ ನಡೆಸಲಾಯಿತು.
ಬಳಿಕ ಮಾತನಾಡಿದ ಕುತ್ಯಾರು ನವೀನ್ ಶೆಟ್ಟಿ, ಬಿಹಾರ ಚುನಾವಣೆಯ ಗೆಲವು ಪ್ರಜಾಪ್ರಭುತ್ವ ಗೆಲುವಿನ ಸಂಕೇತವಾಗಿದೆ. ಕಾಂಗ್ರೆಸ್ ಮತಗಳ್ಳತನ ಆರೋಪ ಹಾಗೂ ಸಂವಿಧಾನ ವಿರೋಧಿ ಯಾರೆಂಬುದನ್ನು ಬಿಹಾರ ಜನತೆ ಈ ಚುನಾವಣೆಯಲ್ಲಿ ತೋರಿಸಿದ್ದಾರೆ. ಅಲ್ಲಿ ದುಡಿದ ಕಾರ್ಯಕರ್ತರಿಗೆ ಅಭಿನಂದನೆಗಳು. ಬಿಹಾರ ಚುನಾವಣೆ ಫಲಿತಾಂಶ ಇಡೀ ದೇಶಕ್ಕೆ ಸ್ಪಷ್ಟ ಸಂದೇಶವಾಗಿದೆ. ಇನ್ನು ಮುಂದೆ ರಾಹುಲ್ ಗಾಂಧಿಯ ಸುಳ್ಳು ಪ್ರಚಾರ, ನಡಿಗೆಗಳು ನಡೆಯಲ್ಲ. ಅದು ಇಂದಿಗೆ ಅಂತ್ಯವಾಗಿದೆ ಎಂದು ಟೀಕಿಸಿದರು.
ಪಟಾಕಿ ಸಿಡಿದು ಸಂಭ್ರಮಿಸಿದ ಮುಖಂಡರು ಹಾಗೂ ಕಾರ್ಯಕರ್ತರು, ಬಳಿಕ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪ್ರಭಾಕರ ಪೂಜಾರಿ, ಕಪ್ಪೆಟ್ಟು ಪ್ರವೀಣ್ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ಬಿಲ್ಲಾಡಿ ಪೃಥ್ವಿರಾಜ್ ಶೆಟ್ಟಿ, ಸಂಧ್ಯಾ ರಮೇಶ್, ಸತ್ಯಾನಂದ ನಾಯಕ್, ಬಾಲಕೃಷ್ಣ ಶೆಟ್ಟಿ, ಸಲೀಂ ಅಂಬಾಗಿಲು, ದಿನೇಶ್ ಅಮೀನ್, ಅಂಬಲಪಾಡಿ ಶಿವ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.





