ನೇಜಾರು ಹತ್ಯೆ ಪ್ರಕರಣ | ಹಸೀನಾರ ಸಹೋದರರಿಂದ ಸಾಕ್ಷ್ಯ: ವಿಚಾರಣೆ, ಪಾಟಿಸವಾಲು

ಪ್ರವೀಣ್ ಅರುಣ್ ಚೌಗಲೆ
ಉಡುಪಿ, ನ.14: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಮತ್ತೆ ಇಬ್ಬರು ಸಾಕ್ಷಿಗಳ ಮುಖ್ಯ ವಿಚಾರಣೆ ಹಾಗೂ ಪಾಟಿ ಸವಾಲು ಇಂದು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಡೆಯಿತು.
ಮೃತ ಹಸಿನಾರ ಅಣ್ಣ, ದೂರುದಾರೆ ಐಫಾ, ಕೊಲೆ ನಡೆದಾಗ ಮೊದಲು ಕರೆ ಮಾಡಿದ ತಿಳಿಸಿದ ನೇಜಾರಿನ ಅಶ್ಫಾಕ್ ಹಾಗೂ ಮೃತರ ಮನೆಯ ಸಮೀಪದಲ್ಲೇ ಇರುವ ದೂರುದಾರೆ ಐಫಾ ಅವರ ತಂದೆ, ಮೃತರ ಹಿರಿಯ ಸಹೋದರ ಆಯುಬ್ ಹುಸೇನ್ ಅವರನ್ನು ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವಾ ಸಾಕ್ಷಿಗಳ ಮುಖ್ಯ ವಿಚಾರಣೆಗೆ ಒಳಪಡಿಸಿದರು. ಬಳಿಕ ಆರೋಪಿ ಪರ ವಕೀಲ ರಾಜು ಪೂಜಾರಿ ಅವರಿಬ್ಬರು ಸಾಕ್ಷಿಗಳನ್ನು ಪಾಟಿಸವಾಲಿಗೆ ಒಳಪಡಿಸಿದರು.
ಈ ದಿನದಂದು ಒಟ್ಟು ನಾಲ್ಕು ಮಂದಿ ಸಾಕ್ಷಿಗಳ ವಿಚಾರಣೆಗೆ ಸಮನ್ಸ್ ಕಳುಹಿಸಲಾಗಿತ್ತು. ಆದರೆ ಉಳಿದ ಇಬ್ಬರು ಸಾಕ್ಷಿಗಳ ಸಾಕ್ಷ್ಯ ಪುನಾರವರ್ತನೆ ಆಗುವುದರಿಂದ ಅಭಿಯೋಜನೆ ಅವರನ್ನು ಕೈಬಿಟ್ಟಿತ್ತು. ಈ ಸಂದರ್ಭದಲ್ಲಿ ಆರೋಪಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು.
ಆ.15ರಂದು ಮೃತರ ಕುಟುಂಬದ ಯಜಮಾನ ನೂರ್ ಮುಹಮ್ಮದ್ ಹಾಗೂ ಅವರ ಮಗ ಅಸದ್ ಸೇರಿದಂತೆ ನಾಲ್ವರ ಸಾಕ್ಷ್ಯ ವಿಚಾರಣೆಯು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.





