ಉಡುಪಿ: ವಿಕಲಚೇತನರಿಗೆ ಕೌಶಲ್ಯಾಧಾರಿತ ತರಬೇತಿ

ಉಡುಪಿ, ಡಿ.11: ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಮತ್ತು ದಿ ಅಸೋಸಿಯೇಷನ್ ಆಫ್ ಪೀಪಲ್ ವಿದ್ ಡಿಸೆಬಿಲಿಟಿ (ಎಪಿಡಿ) ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಕಲಚೇತನರಿಗೆ ಕೌಶಲ್ಯಾಧಾರಿತ ತರಬೇತಿ ಮತ್ತು ಉದ್ಯೋಗ ಪೂರ್ವ ಮಾಹಿತಿ ಶಿಬಿರದ ಸಮಾರೋಪ ಸಮಾರಂಭ ಇಂದು ಬ್ರಹ್ಮಗಿರಿಯ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೆಡ್ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಮಾತನಾಡಿ, ರೆಡ್ಕ್ರಾಸ್ ಸಂಸ್ಥೆ ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯುದ್ಧದ ಸಂದರ್ಭ, ಪ್ರಾಕೃತಿಕ ವಿಕೋಪ ಸೇರಿದಂತೆ ಇನ್ನಿತರ ತುರ್ತು ಸಂದರ್ಭದಲ್ಲಿ ನೆರವಿಗೆ ಧಾವಿಸುತ್ತದೆ. ರೆಡ್ಕ್ರಾಸ್ ಸಂಸ್ಥೆಯು ವಿಕಲಚೇತನರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ತಯಾರಿಸಿ, ವಿತರಿಸುತ್ತಿದ್ದು, ವಿಕಲಚೇತನರ ಶ್ರೇಯೋಭಿವೃದ್ಧಿಗೆ ಸ್ಪಂದಿಸುವುದು ಸಂಸ್ಥೆಯ ಆದ್ಯ ಕರ್ತವ್ಯವಾಗಿದೆ ಎಂದರು.
ವಿಕಲಚೇತನರು ಸರಕಾರದಿಂದ ನೀಡಲಾಗುವ ಸೌಲಭ್ಯಗಳ ಮಾಹಿತಿ ಪಡೆದು ಅವುಗಳ ಸದುಪಯೋಗ ಪಡಿಸಿಕೊಳ್ಳ ಬೇಕು. ಅವರಿಗೆ ಅನುಕಂಪ ತೋರದೇ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ ಮಾತನಾಡಿ, ಅಂಗವಿಕಲರು ಮನೆಯೊಳಗೆ ಸೀಮಿತವಾಗಿರದೇ, ಎಲ್ಲಾ ಕ್ಷೇತ್ರಗಳಲ್ಲಿಯೂ ತೊಡಗಿಸಿ ಕೊಳ್ಳಬೇಕು. ಇಲಾಖೆ ಹಾಗೂ ಸಂಘ-ಸಂಸ್ಥೆಗಳ ವತಿಯಿಂದ ನೀಡಲಾಗುವ ತರಬೇತಿಗಳ ಸದುಪಯೋಗವನ್ನು ಪಡೆದುಕೊಂಡು ತಮ್ಮ ಜೀವನವನ್ನು ತಾವು ನಡೆಸಲು ಮುಂದಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಿಡಿಡಬ್ಲ್ಯೂಓ ನಿವೃತ್ತ ಅಧಿಕಾರಿ ನಿರಂಜನ್ ಭಟ್ ಮಾತನಾಡಿ, ವಿಕಲಚೇತನರು ಅಂಗಕಲತೆಯ ಬಗ್ಗೆ ಕೀಳರಿಮೆ ಹೊಂದದೇ ತಮ್ಮ ವಾಸ್ತವ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ನಾವು ಅಂಗವಿಕಲರು ಎಂಬುದನ್ನು ಮನಸ್ಸಿನಿಂದ ತೊರೆದು, ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡು ಅವಕಾಶ ಗಳನ್ನು ಸದ್ಬಳಕೆ ಮಾಡಿ ಕೊಳ್ಳಬೇಕು. ಎಪಿಡಿ ಸಂಸ್ಥೆಯು ವಿಕಲಚೇತನರನ್ನು ಮಾನಸಿಕವಾಗಿ ಸದೃಢರನ್ನಾಗಿ ಮಾಡಿ, ಅವರುಗಳ ಬದುಕನ್ನು ರೂಪಿಸಲು ನೆರವಾಗುತ್ತಿದ್ದು, ತರಬೇತಿ ಪಡೆದ ಶಿಬಿರಾರ್ಥಿಗಳು ಸ್ವಾವಲಂಭಿಗಳಾಗಿ ಜೀವನ ರೂಪಿಸಿಕೊಳ್ಳಬೇಕು ಎಂದರು.
ಎಪಿಡಿ ಸಂಸ್ಥೆಯ ಜಿಲ್ಲಾ ಯೋಜನಾ ಸಂಯೋಜಕ ಹರೀಶ್ ಶೆಟ್ಟಿ ಪ್ರಾಸಾವ್ತಿಕವಾಗಿ ಮಾತನಾಡಿ, ಇಲಾಖೆ ಮತ್ತು ಸಂಸ್ಥೆಯ ಸಹಯೋಗದಲ್ಲಿ ನಡೆದ ಉದ್ಯೋಗ ಪೂರ್ವ ತರಬೇತಿಯ ಶಿಬಿರಾರ್ಥಿಗಳು ಯೋಜನೆಯ ಸಂಪೂರ್ಣ ಸದುಪಯೋಗ ಪಡೆದುಕೊಂಡು ಭವಿಷ್ಯದಲ್ಲಿ ಉದ್ಯೋಗಾ ಕಾಂಕ್ಷಿಗಳಾಗಿ ಸ್ವಾವಲಂಭಿ ಜೀವನ ನಡೆಸಲು ಈ ತರಬೇತಿಯು ಉತ್ತಮ ವೇದಿಕೆಯಾಗಿದೆ. ತರಬೇತಿ ಪಡೆದ ಫಲಾನುಭಗಳಿಗೆ ಸ್ಥಳೀಯ ಮಟ್ಟದಲ್ಲಿ ಖಾಲಿ ಇರುವ ಕ್ಷೇತ್ರಗಳಲ್ಲಿ ಉದ್ಯೋಗ ದೊರಕಿಸಿಕೊಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪದಕವನ್ನು ವಿತರಿಸಲಾಯಿತು. ಎಪಿಡಿ ಸಂಸ್ಥೆಯ ನೇಮಕಾತಿ ಅಧಿಕಾರಿ ಶ್ರೀಧರ್, ಶಿಬಿರಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ತರಬೇತುದಾರರಾದ ಸುನೀತಾ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







