ಉಡುಪಿ: ಆಶಾನಿಲಯದಲ್ಲಿ ಕುಮಾರಸ್ವಾಮಿ ಜನ್ಮದಿನಾಚರಣೆ

ಉಡುಪಿ, ಡಿ.16: ಉಡುಪಿ ಜಿಲ್ಲಾ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದ ವತಿಯಿಂದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ 64ನೇ ಹುಟ್ಟುಹಬ್ಬವನ್ನು ಶನಿವಾರ ಆಶಾ ನಿಲಯ ವಿಶೇಷ ಮಕ್ಕಳ ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕೇಕ್ ಕತ್ತರಿಸಿ ವಿಶೇಷ ಮಕ್ಕಳಿಗೆ ತಿನ್ನಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಪರೂಪದ ರಾಜಕಾರಣಿಯಾಗಿದ್ದು, ಗ್ರಾಮ ವಾಸ್ತವ್ಯ, ಜನತಾ ದರ್ಶನ, ರೈತರ ಸಾಲ ಮನ್ನಾ,ವಿಧವಾ ವೇತನ ಹೆಚ್ಚಳ, ಅಂಗವಿಕಲರ ವೇತನ ಹೆಚ್ಚಳದ ಮೂಲಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸಿದರು ಎಂದರು.
ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಇದ್ದು ವಿಶೇಷ ಮಕ್ಕಳಿಗೆ ಕ್ಷೀರ ಭಾಗ್ಯ ಇಲ್ಲದಿದ್ದಾಗ ಸಂಬಂಧಪಟ್ಟವರ ಮನವಿಯ ಮೇರೆಗೆ ಆ ಕ್ಷಣದಲ್ಲಿ ಇಡೀ ರಾಜ್ಯದ ವಿಶೇಷ ಮಕ್ಕಳ ಶಾಲೆಗೆ ಕ್ಷೀರ ಭಾಗ್ಯವನ್ನು ನೀಡಿದವರು ಕುಮಾರಸ್ವಾಮಿಯವರು ಎಂದು ಸ್ಮರಿಸಿದರು,ಈಗಲೂ ಈ ಯೋಜನೆ ವಿಶೇಷ ಮಕ್ಕಳಿಗೆ ಚಾಲ್ತಿಯಲ್ಲಿದೆ.
ಈ ಸಂದರ್ಭದಲ್ಲಿ ಪಕ್ಷ ಜಿಲ್ಲಾ ನಾಯಕರಾದ ವಾಸುದೇವ ರಾವ್, ಶಾಲಿನಿ ಶೆಟ್ಟಿ ಕೆಂಚನೂರು, ಜಯರಾಮ ಆಚಾರ್ಯ, ಜಯಕುಮಾರ ಪರ್ಕಳ, ಇಕ್ಬಾಲ್ ಅತ್ರಾಡಿ, ಶ್ರೀಕಾಂತ್ ಹೆಬ್ರಿ, ಸಂಜಯ್ ಕುಮಾರ್, ರಾಮರಾವ್, ವಿಶಾಲಾಕ್ಷಿ ಶೆಟ್ಟಿ , ರಂಗ ಎನ್ ಕೋಟ್ಯಾನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.







