ಉಡುಪಿಯಲ್ಲಿ ಜಮೀಯ್ಯತುಲ್ ಫಲಾಹ್ ಕೇಂದ್ರ ಕಚೇರಿ ಸಹಿತ ಹಾಸ್ಟೆಲ್ ಸ್ಥಾಪನೆ: ಶಾಹುಲ್ ಹಮೀದ್ ಕೆ.ಕೆ.

ಉಡುಪಿ: ಜಮೀಯ್ಯತುಲ್ ಫಲಾಹ್ ಮುಸ್ಲಿಮ್ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು, ಇದರಿಂದ ಇಂದು ಬಹಳಷ್ಟು ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಈ ಮೂಲಕ ಸಂಘಟನೆಯು ಸಮುದಾಯದಲ್ಲಿ ಶೈಕ್ಷಣಿಕ ಕಾಂತ್ರಿ ಮೂಡಿಸಿದೆ ಎಂದು ಜಮೀಯ್ಯತುಲ್ ಫಲಾಹ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ತಿಳಿಸಿದ್ದಾರೆ.
ಉಡುಪಿ ಕಿನ್ನಿಮುಲ್ಕಿಯ ಅಲ್ಫಾ ಟವರ್ಸ್ನಲ್ಲಿ ಜಮೀಯ್ಯತುಲ್ ಫಲಾಹ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ಉಡುಪಿ ತಾಲೂಕು ಘಟಕದ ನೂತನ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಂಗಳೂರಿನಂತೆ ಉಡುಪಿಯಲ್ಲೂ ಸಂಘಟನೆಯ ಕೇಂದ್ರ ಕಚೇರಿ ಹಾಗೂ ಹಾಸ್ಟೆಲ್ ಸ್ಥಾಪಿಸುವುದು ನಮ್ಮ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಆ ಹಿನ್ನೆಲೆಯಲ್ಲಿ ಈಗಾಗಲೇ ಉಡುಪಿಯಲ್ಲಿ 25 ಸೆಂಟ್ಸ್ ಜಾಗ ಖರೀದಿಸಲಾಗಿದೆ. ಮುಂದೆ ಕೇಂದ್ರ ಕಚೇರಿ ಸ್ಥಾಪನೆಗೆ ಚಾಲನೆ ನೀಡಲಾಗುವುದು ಎಂದರು.
ಅಲ್ ಫಲಾಹ್ ಟ್ರಸ್ಟ್ನ್ನು ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಸಮಾಜ ಸೇವಕ ಹಾಜಿ ಅಬ್ದುಲ್ಲಾ ಪರ್ಕಳ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಉಡುಪಿ ತಾಲೂಕು ಅಧ್ಯಕ್ಷ ಎಸ್.ಎಂ.ಇರ್ಷಾದ್ ಮಾತನಾಡಿದರು.
ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ರಿಯಾಝ್ ಅಹ್ಮದ್, ಇಂಜಿನಿಯರ್ ಮುಹಮ್ಮದ್ ಸಲೀಂ ಅಬ್ದುಲ್, ಜಮೀಯ್ಯತುಲ್ ಫಲಾಹ್ ಉಡುಪಿ ಘಟಕದ ಮಾಜಿ ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್, ಕಟ್ಟಡದ ಮಾಲಕ ಆಸೀಫ್ ಮುಹಮ್ಮದ್ ಶಬ್ಬೀರ್, ಉದ್ಯಮಿ ಸಯ್ಯದ್ ಫರೀದ್ ವಹಾಬ್, ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯ ದರ್ಶಿ ಕಾಸೀಂ ಬಾರಕೂರು ಉಪಸ್ಥಿತರಿದ್ದರು.
ಉಡುಪಿ ತಾಲೂಕು ಘಟಕದ ಅಧ್ಯಕ್ಷ ಸಮೀರ್ ಎಂ. ಸ್ವಾಗತಿಸಿದರು. ಕಾರ್ಯದರ್ಶಿ ನಾಸೀರ್ ಯಾಕೂಬ್ ವಂದಿಸಿದರು. ಫಾಝೀಲ್ ಕಾರ್ಯಕ್ರಮ ನಿರೂಪಿಸಿದರು.







