ಉಡುಪಿ: ಸುರಿಯುವ ಮಳೆಯ ಮಧ್ಯ ಸಪ್ತೋತ್ಸವ ಆರಂಭ

ಉಡುಪಿ, ಜ.9: ಭಾರೀ ಗಾಳಿ ಹಾಗೂ ಸುರಿಯುವ ಮಳೆಯ ಮಧ್ಯೆಯೇ ಉಡುಪಿ ಶ್ರೀಕೃಷ್ಣ ಮಠದಲ್ಲಿ ದೇವರ ವಾರ್ಷಿಕ ಸಪ್ತೋತ್ಸವವು ಅಷ್ಟ ಮಠಾಧೀಶರ ಉಪಸ್ಥಿತಿಯಲ್ಲಿ ಇಂದು ಆರಂಭಗೊಂಡಿತು.
ಪರ್ಯಾಯ ಕೃಷ್ಣಾಪುರ ಮಠಾಧೀಶರ ನೇತೃತ್ವದಲ್ಲಿ ಪಲಿಮಾರು, ಪೇಜಾವರ, ಅದಮಾರು, ಶಿರೂರು, ಕಾಣಿಯೂರು ಮಠಾಧೀಶರು ಸುರಿಯುವ ಮಳೆಯ ನಡುವೆ ಒಲಿಕೊಡೆಯ ನೆರಳಿನಲ್ಲಿ ಉತ್ಸವದಲ್ಲಿ ಭಾಗವಹಿಸಿದರು.
ಇದಕ್ಕೆ ಮೊದಲು ಮಧ್ವ ಸರೋವರದಲ್ಲಿ ತೆಪ್ಪೋತ್ಸವವೂ ವೈಭವದಿಂದ ನಡೆಯಿತು. ಬಳಿಕ ದೇವರ ಮೂರ್ತಿಗಳನ್ನು ರಥ ಗಳಲ್ಲಿ ಕುಳ್ಳಿರಿಸಿ ರಥಬೀದಿಗೆ ಒಂದು ಸುತ್ತು ಬರಲಾಯಿತು. ಸಪ್ತೋತ್ಸವವು ಇಂದಿನಿಂದ ಜ.15ರವರೆಗೆ ನಡೆಯಲಿದೆ.
ಜ.14ರ ಮಕರ ಸಂಕ್ರಾಂತಿ ದಿನದಂದು ರಾತ್ರಿ ಮೂರು ತೇರುಗಳ ಉತ್ಸವ ನಡೆಯಲಿದೆ.ಮರುದಿನ ಜ.15ರಂದು ಹಗಲು ರಥೋತ್ಸವ ಹಾಗೂ ಚೂರ್ಣೋತ್ಸವ ನಡೆಯಲಿದೆ. ಈ ಎಲ್ಲಾ ದಿನಗಳಂದು ಬೆಳಗ್ಗೆ ಪಾರಾಯಣ, ತುಳಸಿ ಅರ್ಚನೆ, ಸಂಜೆ ಪ್ರವಚನಗಳು ನಡೆಯಲಿವೆ.
Next Story







