ವಾಹನಗಳ ಸುಗಮ ಸಂಚಾರಕ್ಕೆ ಡಿಜಿಟಲ್ ಟ್ರಾಫಿಕ್ ವ್ಯವಸ್ಥೆ: ಪರ್ಯಾಯ ಮಹೋತ್ಸವಕ್ಕೆ ಉಡುಪಿ ಪೊಲೀಸ್ ಇಲಾಖೆಯಿಂದ ಹೊಸ ಪ್ರಯೋಗ

ಉಡುಪಿ: ಈ ಬಾರಿಯ ಪರ್ಯಾಯ ಮಹೋತ್ಸವದ ಸಂದರ್ಭ ದಲ್ಲಿ ಉಡುಪಿ ನಗರದಲ್ಲಿ ಸುಗಮ ಸಂಚಾರ ಹಾಗೂ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಡಿಜಿಟಲ್ ಟ್ರಾಫಿಕ್ ಮತ್ತು ವೆಹಿಕಲ್ ಪಾರ್ಕಿಂಗ್ ಮೆನೇಜ್ಮೆಂಟ್ ವ್ಯವಸ್ಥೆ ಯನ್ನು ಪರಿಚಯಿಸುತ್ತಿದೆ.
ಈ ವ್ಯವಸ್ಥೆಯಂತೆ ಪರ್ಯಾಯ ಮಹೋತ್ಸವಕ್ಕಾಗಿ ಉಡುಪಿ ನಗರಕ್ಕೆ ಆಗಮಿಸಲಿರುವ ಭಕ್ತರ ಅನುಕೂಲಕ್ಕಾಗಿ ನಗರದ 25 ಕಡೆಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ಗಳನ್ನು ಅಳವಡಿಸಲಾಗುತ್ತಿದೆ. ಇದನ್ನು ಸ್ಕ್ಯಾನ್ ಮಾಡುವುದ ರಿಂದ ಭಕ್ತರು ಶ್ರೀಕೃಷ್ಣ ಮಠಕ್ಕೆ ತಲುಪುವ ವಿವರಗಳು ಹಾಗೂ ಪಾರ್ಕಿಂಗ್ ಸ್ಥಳದ ಮಾಹಿತಿಗಳನ್ನು ಪಡೆಯಬಹುದಾಗಿದೆ.
ಉಡುಪಿ ನಗರಕ್ಕೆ ಆಗಮಿಸುವ ಹೊರರಾಜ್ಯ ಹಾಗೂ ಜಿಲ್ಲೆಗಳ ಭಕ್ತರು ಸರಿಯಾದ ಮಾಹಿತಿ ಇಲ್ಲದೆ ನಗರದ ಒಳ ರಸ್ತೆಯಲ್ಲಿ ಆಗಮಿಸಿ ಟ್ರಾಫಿಕ್ ಸಮಸ್ಯೆಗೆ ಕಾರಣರಾಗುತ್ತಿದ್ದಾರೆ. ಇದನ್ನು ತಡೆಯಲು ಈ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಅಳವಡಿಸಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ ಹೊರರಾಜ್ಯ ಹಾಗೂ ಜಿಲ್ಲೆಗಳ ಭಕ್ತರು ನಿಗ ದಿತ ಪ್ರದೇಶಕ್ಕೆ ಸುಲಭವಾಗಿ ತಲುಪಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಪೊಲೀಸ್ ಕಣ್ಗಾವಲು: ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠದ ರಥಬೀದಿ ಹಾಗೂ ನಗರದ ಸುತ್ತಮುತ್ತ ಕಣ್ಗಾವಲು ಇರಿಸಲು ಉಡುಪಿ, ದ.ಕ., ಚಿಕ್ಕಮಗಳೂರು, ಉತ್ತರಕನ್ನಡ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಜಿಲ್ಲೆಯ 4 ಮಂದಿ ಹಾಗೂ ಹೊರಜಿಲ್ಲೆಯ 5 ಮಂದಿ ಡಿವೈಎಸ್ಪಿಗಳು, ಜಿಲ್ಲೆಯ 10 ಹಾಗೂ ಹೊರಜಿಲ್ಲೆಯ 12 ಮಂದಿ ಪೊಲೀಸ್ ನಿರೀಕ್ಷಕರು, ಜಿಲ್ಲೆಯ 40 ಹಾಗೂ ಹೊರಜಿಲ್ಲೆಯ 25 ಮಂದಿ ಉಪನಿರೀಕ್ಷಕರು, ಜಿಲ್ಲೆಯ 550 ಹಾಗೂ ಹೊರಜಿಲ್ಲೆಯ 400 ಮಂದಿ ಸಿಬಂದಿ, ಎರಡು ಕೆಎಸ್ಆರ್ಪಿ, 10 ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಗಳನ್ನು ನಿಯೋಜಿಸಲಾಗುತ್ತಿದೆ.
ಶ್ರೀಕೃಷ್ಣ ಮಠ ಸಹಿತ ರಥಬೀದಿಯ ಒಟ್ಟು 9 ಗೇಟ್ಗಳಲ್ಲಿ ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ ಅಳವಡಿಸಲಾಗುತ್ತದೆ. ನಗರದ 65 ಕಡೆಗಳಲ್ಲಿ ಹೆಚ್ಚುವರಿ ಯಾಗಿ ಸಿಸಿಟಿವಿ ಅಳವಡಿಕೆ ಮಾಡುವಂತೆ ಪೊಲೀಸ್ ಇಲಾಖೆಯು ಪರ್ಯಾಯ ಸ್ವಾಗತ ಸಮಿತಿಗೆ ಈಗಾಗಲೇ ಸೂಚನೆ ನೀಡಿದೆ. ಖಾಸಗಿಯಾಗಿ ಡ್ರೋನ್ ಕೆಮರಾ ಕಣ್ಗಾವಲು ಇರಿಸುವ ಬಗ್ಗೆಯೂ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಕ್ಯಾನ್ ಮಾಡಿದರೆ ಏನೇನು ಸಿಗುತ್ತೆ?
ನಗರದಲ್ಲಿ ಅಳವಡಿಸಲಾದ ಸ್ಕ್ಯಾನರ್ಗಳನ್ನು ತಮ್ಮ ಮೊಬೈಲ್ಗಳಲ್ಲಿ ಸ್ಕ್ಯಾನ್ ಮಾಡಿದಾಗ ಪರ್ಯಾಯ ಮಹೋತ್ಸವ ಸಂಬಂಧ ಈಗಾಗಲೇ ನಿಗದಿಪಡಿಸಿದ ವಿವಿಐಪಿ ಪಾರ್ಕಿಂಗ್, ವಿಐಪಿ ಪಾರ್ಕಿಂಗ್, ಕಾರು, ದ್ವಿಚಕ್ರ ವಾಹನ ಪಾರ್ಕಿಂಗ್ ಮಾಹಿತಿಗಳು ಫೋಟೋ ಸಮೇತ ದೊರೆಯಲಿದೆ.
ಅದೇ ರೀತಿ ನಗರದಲ್ಲಿನ ಪರ್ಯಾಯ ಮೆರವಣಿಗೆ ಮಾರ್ಗ, ಪೊಲೀಸ್ ಔಟ್ಪೋಸ್ಟ್, ಪೊಲೀಸ್ ಹೆಲ್ಪ್ಲೈನ್, ಪ್ರಾಥ ಮಿಕ ಆರೋಗ್ಯ ಕೇಂದ್ರಗಳು, ಮೊಬೈಲ್ ಟಾಯ್ಲೆಟ್ಗಳು, ಸಾರ್ವಜನಿಕರಿಗೆ ಕಳ್ಳರ ಬಗ್ಗೆ ಎಚ್ಚರಿಕೆ ಕೊಡುವ ಪೊಲೀಸ್ ನೋಟೀಸ್ ಅಳವಡಿಸಿರುವ ಸ್ಥಳಗಳು, ಬ್ಯಾರಿಕೇಡ್ ಅಳವಡಿಸಿರುವ ಸ್ಥಳಗಳ ಸಂಪೂರ್ಣ ಮಾಹಿತಿ ಈ ವ್ಯವಸ್ಥೆಯಿಂದ ಪಡೆಯಬಹುದಾಗಿದೆ.
‘ಉಡುಪಿ ಪೊಲೀಸ್ ಇಲಾಖೆಯು ಡಿಜಿಟಲ್ ಟ್ರಾಫಿಕ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದು, ಪರ್ಯಾಯ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಸಾಕಷ್ಟು ಅನುಕೂಲವಾಗಲಿದೆ. ಮುಂದೆ ಇದನ್ನು ಇತರ ಸಮಾವೇಶಗಳ ಸಂದರ್ಭದಲ್ಲೂ ಬಳಸಿ ಕೊಳ್ಳಬಹುದಾಗಿದೆ. ಇದಕ್ಕೆ ಸಾರ್ವಜನಿಕರ ಪ್ರತಿಕ್ರಿಯೆ ಹಾಗೂ ಲೋಪದೋಷಗಳನ್ನು ಸರಿಪಡಿಸಿಕೊಂಡು ಈ ವ್ಯವಸ್ಥೆ ಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು’
-ಡಾ.ಕೆ.ಅರುಣ್, ಉಡುಪಿ ಎಸ್ಪಿ







