ಗಮಕದ ಅಧ್ಯಯನದಿಂದ ಸಂಗೀತದ ಮೌಲ್ಯ ಹೆಚ್ಚುತ್ತದೆ: ಪ್ರೊ.ಎಂ. ಎಲ್. ಸಾಮಗ

ಉಡುಪಿ, ಜ.15: ಸಂಗೀತವನ್ನು ಕೇಳಿ ಪ್ರತಿಕ್ರಿಯಿಸದ ಜೀವಿ ಪ್ರಪಂಚದಲ್ಲಿ ಇಲ್ಲ. ಇಂತಹ ಸಂಗೀತದೊಂದಿಗೆ ಗಮಕ ವಾಚನ ಕಲೆಯನ್ನೂ ತನ್ನದಾಗಿಸಿಕೊಂಡಲ್ಲಿ ಆ ಸಂಗೀತದ ಮೌಲ್ಯ ಮತ್ತಷ್ಟು ಹೆಚ್ಚುತ್ತದೆ. ಅದಕ್ಕಾಗಿ ಸಂಗೀತ ಕಲಿಕಾ ವಿದ್ಯಾರ್ಥಿಗಳು ಗಮಕ ಕಲೆಯನ್ನೂ ಅಧ್ಯಯನ ಮಾಡುವಂತಾಗಬೇಕು ಎಂದು ಖ್ಯಾತ ಕಲಾವಿದರೂ, ಕಲಾ ವಿಮರ್ಶಕರೂ, ಉಡುಪಿ ತಾಲೂಕು ಗಮಕ ಕಲಾ ಪರಿಷತ್ತಿನ ಅಧ್ಯಕ್ಷರೂ ಆದ ಪ್ರೊ.ಎಂ. ಎಲ್. ಸಾಮಗ ಅಭಿಪ್ರಾಯ ಪಟ್ಟಿದ್ದಾರೆ.
ಉಡುಪಿ ಜಿಲ್ಲಾ ಮತ್ತು ತಾಲೂಕು ಗಮಕ ಕಲಾ ಪರಿಷತ್ತಿನ ಸಹಯೋಗ ದೊಂದಿಗೆ ಸ್ವರ ಸಾಮ್ರಾಟ್ ದಿ.ಅಭಿರಾಮ ಭರತ ವಂಶಿ ಸಾಂಸ್ಕೃತಿಕ ಪ್ರತಿಷ್ಠಾನವು ಉಡುಪಿ ಗುಂಡಿಬೈಲಿನ ಅಭಿರಾಮಧಾಮದಲ್ಲಿ ಆರಂಭಿಸು ತ್ತಿರುವ ಗಮಕ ವಾಚನ- ವ್ಯಾಖ್ಯಾನ ತರಬೇತಿ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಗಮಕ ಕಲಾ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು, ಸ್ವರ ಸಾಮ್ರಾಟ್ ದಿ.ಅಭಿರಾಮ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷ ಸುದರ್ಶನ್ ಪೆರ್ಲತ್ತಾಯ, ಉಡುಪಿ ತಾಲೂಕು ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿ ಪ್ರಪುಲ್ಲ ಜಿ ಭಟ್, ಕೋಶಾಧಿಕಾರಿ ಕೃಷ್ಣಕುಮಾರ್ ರಾವ್ ಮಟ್ಟು, ಕುಂದಾಪುರ ತಾಲೂಕು ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಸುಜಯೀಂದ್ರ ಹಂದೆ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಖ್ಯಾತ ಗಮಕಿ ಬಂಟ್ವಾಳದ ಮಂಜುಳಾ ಸುಬ್ರಹ್ಮಣ್ಯ ಪ್ರಥಮ ಕಲಿಕಾ ತರಗತಿಯನ್ನು ನಡೆಸಿಕೊಟ್ಟರು. ಸುಮಾರು 18ಕ್ಕೂ ಹೆಚ್ಚು ಕಲಾಸಕ್ತರು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡರು.







