ಗಂಗೊಳ್ಳಿ ಕಳವು ಆರೋಪಿಗಳ ಹೆಚ್ಚಿನ ತನಿಖೆಗೆ ಆಗ್ರಹಿಸಿ ಮನವಿ

ಕುಂದಾಪುರ: ಗಂಗೊಳ್ಳಿ ಮ್ಯಾಂಗನೀಸ್ ರಸ್ತೆಯ ಅಂಗಡಿಯೊಂದರಿಂದ ಸೀಸ ಕದ್ದಿರುವ ಪ್ರಕರಣದ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ಗಂಗೊಳ್ಳಿಯ ಕರಾವಳಿ ಸಾಂಪ್ರದಾಯಿಕ ನಾಡ ದೋಣಿ ಮೀನು ಗಾರರ ಸಂಘದ ನಿಯೋಗ ಇಂದು ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತ್ರ ತೇಜ ಅವರಿಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಿತು.
ಗಂಗೊಳ್ಳಿ ಮ್ಯಾಂಗನೀಸ್ ರಸ್ತೆಯಲ್ಲಿನ ಅಂಗಡಿಯಿಂದ ಲಕ್ಷಾಂತರ ರೂ. ಮೌಲ್ಯದ ಸೀಸ ಕಳವು ಮಾಡಿರುವ ಆರೋಪಿಯು ಈ ಹಿಂದೆ ಹಲವಾರು ವರ್ಷಗಳಿಂದ ದೋಣಿ ಹಾಗೂ ಬೋಟುಗಳಲ್ಲಿರುವ ರಿಂಗ್, ಪೀಸ್, ಜಿಪಿಎಸ್ ಮತ್ತು ಇನ್ನಿತರ ಬೆಲೆ ಬಾಳುವ ಸ್ವತ್ತುಗಳನ್ನು ಕಳವು ಮಾಡಿರುವ ಮತ್ತು ಕದ್ದ ಸ್ವತ್ತುಗಳನ್ನು ಗುಜರಿ ಅಂಗಡಿಗಳಿಗೆ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಯನ್ನು ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ನಿಯೋಗ ಒತ್ತಾಯಿಸಿದೆ.
ಗಂಗೊಳ್ಳಿ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಯಶವಂತ ಗಂಗೊಳ್ಳಿ, ಗೌರವಾಧ್ಯಕ್ಷ ಗಣಪತಿ ಖಾರ್ವಿ, ಮೀನುಗಾರ ಮುಖಂಡ ರಮೇಶ ಕುಂದರ್, ಗಂಗೊಳ್ಳಿಯ ವಿವಿಧ ಮೀನುಗಾರ ಸಂಘಟನೆಯ ಪ್ರಮುಖರು, ಮೀನುಗಾರರು ಉಪಸ್ಥಿತರಿದ್ದರು.





