ಕಾನೂನಿನಡಿ ಸಕಾಲದಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡಿ: ಅಧಿಕಾರಿಗಳಿಗೆ ಉಪ ಲೋಕಾಯುಕ್ತರ ಸಲಹೆ

ಉಡುಪಿ, ಫೆ.3: ಸಾರ್ವಜನಿಕರು ತಮ್ಮ ಕೆಲಸ ಅಥವಾ ಸಮಸ್ಯೆಗಳ ಇತ್ಯರ್ಥಕ್ಕೆ ಸರಕಾರಿ ಕಛೇರಿಗಳಿಗೆ ಬಂದಾಗ ಸರ್ಕಾರಿ ನೌಕರರು ತಾಳ್ಮೆಯಿಂದ ಅದನ್ನು ಆಲಿಸಿ, ವಿಳಂಬವಿಲ್ಲದಂತೆ ಪ್ರಾಮಾಣಿಕವಾಗಿ ಕಾನೂನಿನ ಚೌಕಟ್ಟಿನ ಅಡಿ ಯಲ್ಲಿ ಅದನ್ನು ಮಾಡಿಕೊಡಬೇಕು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಕಿವಿಮಾತು ಹೇಳಿದ್ದಾರೆ.
ಇಂದು ಸಂಜೆ ಮಣಿಪಾಲದ ಜಿಲ್ಲಾ ಪಂಚಾಯತ್ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಜಿಲ್ಲಾ ಮತ್ತು ತಾಲೂಕು ಹಾಗೂ ಇತರೆ ಇಲಾಖೆ ಗಳ ಅಧಿಕಾರಿ ಗಳೊಂದಿಗೆ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪಾತ್ರ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡುತಿದ್ದರು.
ಪ್ರತಿಯೊಬ್ಬರು ಗೌರವಯುತವಾಗಿ ಬದುಕಬೇಕೆಂಬುದೇ ನಮ್ಮ ಸಂವಿಧಾನದ ಅಶೋತ್ತರವಾಗಿದೆ. ಇದನ್ನು ಮನಗಂಡು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸರಕಾರಿ ನೌಕರರು ಸಾರ್ವಜನಿಕ ಕರ್ತವ್ಯ ಗಳನ್ನು ನಿರ್ವಹಿಸಬೇಕು. ತಮ್ಮ ಕೆಲಸಗಳಿಗಾಗಿ ಕಚೇರಿಗೆ ಸಾರ್ವಜನಿಕರು ಬಂದಾಗ ನಿಯಾನುಸಾರ ಸಕಾಲದಲ್ಲಿ ಅವರ ಕೆಲಸಗಳನ್ನು ಮಾಡಿ ಕೊಡಬೇಕು ಎಂದರು.
ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಬಗೆಹರಿಕೊಳ್ಳಲು ಅರ್ಜಿ ಸಲ್ಲಿಸಿದಾಗ ಅವರಿಗೆ ಅಗತ್ಯವಿರುವ ಎಲ್ಲಾ ದಾಖಲೆ ಗಳನ್ನು ಒಮ್ಮೆಲೇ ಒದಗಿಸಲು ಸೂಚಿಸಬೇಕು. ಪದೇ ಪದೇ ಒಂದೊಂದೆ ದಾಖಲೆಗಳನ್ನು ಒದಗಿಸಲು ತಿಳಿಸಿದಾಗ ಅಧಿಕಾರಿಗಳ ಮೇಲೆ ಸಂದೇಹ ಪಟ್ಟು ಏನೋ ಉದ್ದೇಶದಿಂದ ಹೀಗೇ ಮಾಡುತ್ತಿದ್ದಾರೆ ಎಂದು ತಿಳಿದು ಲೋಕಾಯುಕ್ತರನ್ನು ಸಂಪರ್ಕಿಸಲು ಮುಂದಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಅಸ್ಪದ ನೀಡಬಾರದು ಎಂದರು.
ಸರಕಾರಿ ನೌಕರರು ಕೆ.ಸಿ.ಎಸ್.ಆರ್ ಕಾಯ್ದೆಯ ಅರಿವು ಹೊಂದಿದ ರೀತಿಯಲ್ಲಿಯೇ ಲೋಕಾಯುಕ್ತ ಕಾನೂನಿನ ಬಗ್ಗೆ ಅರಿ ವನ್ನು ಹೊಂದುವುದು ಅತ್ಯವಶ್ಯಕವಾಗಿದೆ. ಲೋಕಾಯುಕ್ತ ಪ್ರಕರಣಗಳು ನ್ಯಾಯಾಲಯದ ಪ್ರಕರಣ ದಂತೆ ನಡೆಯುತ್ತವೆ. ಆರೋಪಗಳಿಗೆ ಉತ್ತರಿಸಲು ಸ್ವಾಭಾವಿಕ ನ್ಯಾಯ ಒದಗಿಲಾಗುವುದು ಎಂದರು.
ಸರಕಾರಿ ನೌಕರರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುವಾಗ ಸ್ವಜನ ಪಕ್ಷಪಾತತೆ, ತಾರತಮ್ಯ, ದುರ್ನಡತೆ ತೋರದೆ ಯಾವುದೇ ಪ್ರಭಾವಕ್ಕೆ ಒಳಗಾಗದೆ ಆತ್ಮಸೈರ್ಯದಿಂದ ಕಾನೂನಿನ ಅಡಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಲೋಕಾಯುಕ್ತ ಪ್ರಕರಣಗಳು ಸರಕಾರಿ ನೌಕರರ ಮೇಲೆ ದಾಖಲಾದಾಗ ನಡೆಯುವ ಪ್ರಕ್ರಿಯೆಗಳ ಬಗ್ಗೆ ಸವಿಸ್ತಾರವಾಗಿ ಉದಾಹರಣೆಗಳೊಂದಿಗೆ ವಿವರಿಸಿ ಮಾಹಿತಿ ನೀಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಾಂತವೀರ ಶಿವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಲೋಕಾಯುಕ್ತ ಪ್ರಕರಣಗಳು ನಮ್ಮ ನ್ಯಾಯಾಲಯದಲ್ಲಿ ಅತ್ಯಂತ ಕಡಿಮೆ ಇವೆ. ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಶೂನ್ಯವಾಗಬೇಕು. ಎಲ್ಲಾ ಸರಕಾರಿ ನೌಕರರು ನಿಷ್ಠೆಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ, ಸರ್ಕಾರಿ ನೌಕರರಿಗೆ ಸಾರ್ವಜನಿಕ ಜವಾಬ್ದಾರಿ ಇದ್ದು ಇದನ್ನು ಅರಿತು ಕರ್ತವ್ಯ ನಿರ್ವಹಿಸಬೇಕು. ಯಾವುದೇ ರೀತಿಯ ಲೋಪಕ್ಕೆ ಅವಕಾಶ ನೀಡಬಾರದು ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಲೋಕಾಯುಕ್ತ ಮಂಗಳೂರು ವಿಭಾಗದ ಅಧೀಕ್ಷಕ ಸಿ.ಎ ಸೈಮನ್,ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ, ರಾಜ್ಯ ಲೋಕಾಯುಕ್ತ ಉಪನಿಬಂಧಕ ಎಂ.ವಿ. ಚೆನ್ನಕೇಶವ ರೆಡ್ಡಿ, ಕರ್ನಾಟಕ ಲೋಕಾಯುಕ್ತ ಉಪನಿಬಂಧಕ ರಂಗೇಗೌಡ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್, ಕುಂದಾಪುರ ಡಿಸಿಎಫ್ ಗಣಪತಿ, ಕಾರ್ಕಳ ವನ್ಯಜೀವಿ ವಿಭಾಗದ ಡಿಸಿಎಫ್ ಶಿವರಾಮ್ ಬಾಬು, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ. ಎಸ್ ಸ್ವಾಗತಿಸಿದರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು.







