‘ಸಬ್ ರಿಜಿಸ್ಟ್ರಾರ್ ಕಚೇರಿ, ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ’
ಉಪಲೋಕಾಯುಕ್ತರ ಸಂವಾದ ಕಾರ್ಯಕ್ರಮದಲ್ಲಿ ವಕೀಲರ ಆರೋಪ

ಉಡುಪಿ, ಫೆ.5: ‘ಉಡುಪಿ ಉಪನೋಂದಾವಣೆ ಕಚೇರಿ, ನಗರಾಭಿವೃದ್ಧಿ ಪ್ರಾಧಿಕಾರ, ತಾಲೂಕು ಕಚೇರಿಗಳಲ್ಲಿ ಭ್ರಷ್ಟಾ ಚಾರ ತಾಂಡವಾಡುತ್ತಿದೆ. ಉಪ ನೋಂದಾವಣೆ ಕಚೇರಿಗೆ ಸಂಜೆ ಹೋದರೆ ಲಂಚದ ಲಕ್ಷಾಂತರ ರೂ. ಹಣವನ್ನು ರೆಡ್ಹ್ಯಾಂಡ್ ಆಗಿ ಹಿಡಿಯಬಹುದು...’
ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಘಟಕ ಮತ್ತು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕೋರ್ಟ್ ಸಂಕೀರ್ಣದಲ್ಲಿ ಸೋಮವಾರ ಆಯೋಜಿಸಲಾದ ಕರ್ನಾಟಕ ಉಪಲೋಕಾ ಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿಂದ ಸಾರ್ವಜನಿಕ ಆಡಳಿತ ಮತ್ತು ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರದ ಕುರಿತ ವಕೀಲರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕೇಳಿಬಂದ ಆರೋಪಗಳಿವು.
ಉಡುಪಿ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿರುವ ಭ್ರಷ್ಟಾಚಾರದಿಂದ ಉತ್ತಮ ಸಾರ್ವಜನಿಕ ಸೇವೆಗೆ ಧಕ್ಕೆ ಆಗುತ್ತಿದೆ. ಇದಕ್ಕೆ ಪೂರ್ಣ ವಿರಾಮ ಹಾಕಲು ಲೋಕಾಯುಕ್ತ ಸಂಸ್ಥೆ ಕ್ರಮ ತೆಗೆದುಕೊಳ್ಳಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ರೋನಾಲ್ಡ್ ಪ್ರವೀಣ್ ಕುಮಾರ್ ಮನವಿ ಮಾಡಿದರು.
ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲು ಹೋದರೆ, ನೀವೇ ಟ್ರ್ಯಾಪ್ ಮಾಡಿ, ವಿಡಿಯೋ ಮಾಡಿ ಕೊಡಿ ಎಂದು ಹೇಳುತ್ತಾರೆ. ಆದರೆ ಈಗಿನ ಅಧಿಕಾರಿಗಳು ಯಾವ ಟ್ರ್ಯಾಪ್ ಸಿಗದ ರೀತಿಯಲ್ಲಿ ತಪ್ಪಿಸಿಕೊಳ್ಳುತ್ತಾರೆ. ಅವರು ಲಂಚ ಸ್ವೀಕಾರ ಮಾಡುವುದನ್ನು ಸಾಬೀತು ಪಡಿಸಲು ಸಾಧ್ಯವಿಲ್ಲ ಎಂದು ವಕೀಲ ಶ್ರೀನಿವಾಸ ಉಪಾಧ್ಯಾಯ ದೂರಿದರು.
ತಾಲೂಕು ಕಚೇರಿಯಲ್ಲಿ ಭೂಪರಿವರ್ತನೆಗಾಗಿ ಲಂಚ ಸ್ವೀಕರಿಸಲಾಗುತ್ತದೆ. ಸಂಜೆ ಐದು ಗಂಟೆಗೆ ಉಪನೋಂದಾಣಿ ಕಚೇರಿಗೆ ದಾಳಿ ಮಾಡಿದರೆ ದಿನಕ್ಕೆ 5ಲಕ್ಷ ರೂ.ವರೆಗೆ ಲಂಚದ ಹಣ ಸಿಗುತ್ತದೆ. ಇದನ್ನು ತಡೆಯದಿದ್ದರೆ ಈ ವೈರಸ್ ಇಡೀ ಸಮಾಜಕ್ಕೆ ವಿಸ್ತರಿಸುತ್ತದೆ ಎಂದು ವಕೀಲ ಶ್ರೀಧರ್ ಭಟ್ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪಲೋಕಾಯುಕ್ತರು, ‘ನಾನು ಅಧಿಕಾರ ಸ್ವೀಕಾರ ಮಾಡಿ 23 ತಿಂಗಳಾಗಿವೆ. ನನಗೆ ಈ ಬಗ್ಗೆ ಯಾವುದೇ ದೂರು ಬಂದಿಲ್ಲ. ಯಾವುದೇ ದೂರುಗಳಿದ್ದರೆ ನನ್ನ ಕಚೇರಿಗೆ ಬಂದು ನೀಡಿ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಲಂಚ ತೆಗೆದುಕೊಳ್ಳುವವರನ್ನು ನಮಗೆ ಹಿಡಿದು ಕೊಡಿ. ಇಲ್ಲವೇ ನೀವೇ ಟ್ರ್ಯಾಪ್ ಮಾಡಿ ಅಥವಾ ಸರಕಾರದ ಗಮನಕ್ಕೆ ತನ್ನಿ ಎಂದು ತಿಳಿಸಿದರು.
ವಕೀಲ ವೃತ್ತಿ ಎಲ್ಲಕ್ಕಿಂತ ವಿಭಿನ್ನ
ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಉಪಲೋಕಾ ಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಮಾತ ನಾಡಿ, ಈ ದೇಶಕ್ಕೆ ಸ್ವಾತಂತ್ರ್ಯ ದೊರೆಯುವಲ್ಲಿ ವಕೀಲರ ಪಾತ್ರವೇ ಹೆಚ್ಚು. ವಕೀಲ ವೃತ್ತಿ ಎಲ್ಲ ವೃತ್ತಿಗಿಂತಲೂ ವಿಭಿನ್ನವಾ ದುದು. ವಕೀಲರು ಇಡೀ ಸಮಾಜಕ್ಕೆ ಅತೀ ಅವಶ್ಯಕವಾಗಿ ಬೇಕಾದ ಸಮುದಾಯವಾಗಿದೆ. ಯಾವುದೇ ಕಾನೂನು ರಚನೆಯಾಗುವ ಸಂದರ್ಭದಲ್ಲಿ ವಕೀಲರ ಪಾತ್ರ ಅತೀ ಮುಖ್ಯವಾಗಿ ಇರುತ್ತದೆ ಎಂದರು.
ಸರಕಾರ ಅಭಿವೃದ್ಧಿ ಯೋಜನೆಗಳು ಸಮಾಜದ ಜನಸಾಮಾನ್ಯರಿಗೆ ತಲುಪದೇ ಇದ್ದಾಗ ಅದನ್ನು ತಲುಪಿಸುವ ಜವಾಬ್ದಾ ರಿಯು ನ್ಯಾಯಾಂಗ ಹಾಗೂ ವಕೀಲರ ಮೇಲೆ ಇರುತ್ತದೆ. ವಕೀಲರು ತಮ್ಮ ಜ್ಞಾನವನ್ನು ಕೇವಲ ಕಾನೂನು ವಿಶ್ಲೇಷಣೆ ಮಾತ್ರವಲ್ಲದೆ ಸಮಾಜದ ಬೆಳವಣಿಗೆಗೂ ಬಳಸಿಕೊಳ್ಳಬೇಕು. ಆ ಮೂಲಕ ಸಮಾಜ ಅಭಿವೃದ್ಧಿಯಲ್ಲಿ ಭಾಗಿಗಳಾಗಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪವಹಿಸಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ರಾಜ್ಯ ಲೋಕಾಯುಕ್ತ ವಿಚಾರಣೆಗಳ ಉಪ ನಿಬಂಧಕ ಎಂ.ವಿ. ಚೆನ್ನಕೇಶವ ರೆಡ್ಡಿ, ಲೋಕಾಯುಕ್ತ ವಿಚಾರಣೆ ಉಪನಿಬಂಧಕ ರಂಗೇಗೌಡ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್ ಉಪಸ್ಥಿತರಿದ್ದರು.
ವಕೀಲರ ಸಂಘದ ಅಧ್ಯಕ್ಷ ರೋನಾಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು. ವಕೀಲೆ ಸಹನಾ ಸೂಡ ಕಾರ್ಯಕ್ರಮ ನಿರೂಪಿಸಿದರು.







