ಮೀನುಗಾರರ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ ಆದೇಶ ಇಲ್ಲೇ ವಾಪಾಸು: ಸಚಿವ ಮಂಕಾಳ ವೈದ್ಯ
ಮಲ್ಪೆ ಫಿಶ್ ಟ್ರೇಡ್ ಸೆಂಟರ್ ಉದ್ಘಾಟನೆ

ಮಲ್ಪೆ: ಕಳೆದ ನಾಲ್ಕು ವರ್ಷಗಳಿಂದ ರಾಜ್ಯದ ಒಬ್ಬನೇ ಒಬ್ಬ ಮೀನುಗಾರನ ಕುಟುಂಬಕ್ಕೆ ಸಂಕಷ್ಟ ಪರಿಹಾರ ನಿಧಿಯಿಂದ ನೆರವು ನೀಡಲಾ ಗಿರಲಿಲ್ಲ. ಅಲ್ಲದೇ 9ಕೋಟಿ ರೂ. ಪರಿಹಾರ ವಿತರಣೆಗೆ ಬಾಕಿ ಇತ್ತು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಇದರಲ್ಲಿ 8 ಕೋಟಿ ರೂ.ಗಳನ್ನು ದುರಂತದಲ್ಲಿ ಅಸುನೀಗಿದ ಮೀನುಗಾರರ ಕುಟುಂಬಕ್ಕೆ ವಿತರಿಸಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡ ಜಲಸಾರಿಗೆ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ.
ಮಲ್ಪೆಯಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಸೌಕರ್ಯವುಳ್ಳ ಸುಸಜ್ಜಿತ ಮಲ್ಪೆ ಫಿಶ್ ಟ್ರೇಡ್ ಸೆಂಟರ್ನಲ್ಲಿ ಮೀನು ಮಾರುಕಟ್ಟೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮೀನುಗಾರರ ಸಂಕಷ್ಟ ಪರಿಹಾರ ನಿಧಿಯನ್ನು ನೀಡಲು ಈ ಸರಕಾರ ಕರ ರಹಿತ ಡೀಸೆಲ್ ಸಬ್ಸಿಡಿಯಲ್ಲಿ ಮೀನುಗಾರರ ಪಾಲಿನ ಲಿ.ಗೆ 71ಪೈಸೆ ಕಡಿತ ಮಾಡುವ ಬಗ್ಗೆ ಹೊರಡಿಸಿದ ಆದೇಶದ ವಿರುದ್ಧ ಶಾಸಕ ಯಶಪಾಲ್ ಸುವರ್ಣ ಸೇರಿದಂತೆ ಮೀನುಗಾರ ಮುಖಂಡರು ಮಾತನಾಡಿದ್ದರಿಂದ ಕೆರಳಿದ ಸಚಿವರು, ರಾಜ್ಯದ 80 ಲಕ್ಷ ಮೀನುಗಾರರ ಪ್ರತಿನಿಧಿಯಾಗಿ ಮೀನುಗಾರರ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ನಾನು ಮೀನುಗಾರರ ಹಿತಾಸಕ್ತಿಗೆ ವಿರುದ್ಧ ಕೆಲಸ ಮಾಡುತ್ತಿದ್ದೇನೆ ಎಂದು ತೋರಿಸಿದರೆ ಈಗಲೇ ಆ ಆದೇಶವನ್ನು ವಾಪಾಸು ಪಡೆಯುತ್ತೇನೆ ಎಂದರು.
ಕರ ರಹಿತ ಡೀಸೆಲ್ನಲ್ಲಿ ಮೀನುಗಾರರ ಪಾಲು 27 ಪೈಸೆ ಹಿಂದಿನಿಂದಲೂ ಕಡಿತಗೊಳ್ಳುತ್ತಿತ್ತು. ಅದನ್ನು 71 ಪೈಸೆಗೆ ಹೆಚ್ಚಿಸಿದ್ದೇನೆ. ಆದರೆ ಇದಕ್ಕೆ ಬದಲಿ ಯಾಗಿ ಸರಕಾರ ಈವರೆಗೆ ನೀಡುತಿದ್ದ ತೆರಿಗೆ ರಹಿತ ಡೀಸೆಲ್ ಸಬ್ಸಿಡಿಯ ಅನುದಾನವನ್ನು 175 ಕೋಟಿ ರೂ.ನಿಂದ 250 ಕೋಟಿ ರೂ.ಗೆ ಹೆಚ್ಚಿಸಲು ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಿದ್ದೆ. ಈಗ ಹೆಚ್ಚಿಸಿರುವ 75 ಕೋಟಿ ರೂ.ಗಳಲ್ಲಿ 5 ಕೋಟಿ ರೂ.ಮಾತ್ರ ಮೀನುಗಾರರು ನೀಡುತ್ತಿರುವ ಪಾಲು. 70 ಕೋಟಿ ರೂ.ವನ್ನು ಸರಕಾರ ಹೆಚ್ಚು ನೀಡಿದಂತಾಗಿದೆ. ಆದರೆ ಅದು ಸಂಪೂರ್ಣವಾಗಿ ಹೋಗುವುದು ಬಡ ಮೀನುಗಾರರ ಕುಟುಂಬಕ್ಕೆ. ಇದರಲ್ಲಿ ನಯಾಪೈಸೆ ದುರುಪಯೋಗವಾದಂತೆ ನೋಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಬೋಟ್ ದುರಂತಕ್ಕೆ 90 ಲಕ್ಷ ರೂ.ಪರಿಹಾರ: ಕಳೆದ ನಾಲ್ಕು ವರ್ಷಗಳಿಂದ ದುರಂತದಲ್ಲಿ ಮಡಿದ ಮೀನುಗಾರರ ಕುಟುಂಬಕ್ಕೆ ಸಿಗದ ತಲಾ ಆರು ಲಕ್ಷ ರೂ. ಪರಿಹಾರವನ್ನು ನಾವು ಸಂಕಷ್ಟ ಪರಿಹಾರ ನಿಧಿಯ ಮೂಲಕ ಮತ್ತೆ ನೀಡುತಿದ್ದೇವೆ. ದುರಂತದಲ್ಲಿ ದೋಣಿ ನಾಶವಾದರೆ 5 ಲಕ್ಷ ರೂ. ಹಾಗೂ ಬೋಟು ಹಾನಿಗೊಳಗಾದರೆ ತಲಾ 10 ಲಕ್ಷರೂ.ಗಳನ್ನು ನೀಡುತಿದ್ದೇವೆ. ಇಷ್ಟೆಲ್ಲಾ ಮೀನುಗಾರರಿಗಾಗಿ ಮಾಡಿದರೆ, ನಮ್ಮ ವಿರುದ್ಧ ಧರಣಿ, ಮುಷ್ಕರದ ಬೆದರಿಕೆ ಹಾಕುತ್ತೀರಲ್ಲಾ ಎಂದು ಕಿಡಿಯಾದರು.
ಬೈಂದೂರಿನಲ್ಲಿ ನಡೆದ ದೋಣಿ ದುರಂತದಲ್ಲಿ ಹಾನಿಗೊಳಗಾದ ಬೋಟುಗಳಿಗೆ ತಲಾ 10 ಲಕ್ಷ ರೂ.ನಂತೆ 90 ಲಕ್ಷ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದ್ದೇವೆ. ಸಿಆರ್ಝಡ್ ಕಾಯ್ದೆಯನ್ನು ಸಡಿಲಗೊಳಿಸುವ ನಮ್ಮ ಪ್ರಯತ್ನ ಸಫಲವಾದರೆ ರಾಜ್ಯದ 320ಕಿ.ಮೀ. ಕರಾವಳಿ ತೀರದಲ್ಲಿ ಇಲಾಖೆ ಬಳಿ ಖರ್ಚಾಗದೇ ಉಳಿದಿರುವ 1800 ಕೋಟಿ ರೂ.ಗಳ ಕಾಮಗಾರಿ ಮಾಡಲು ಸಾಧ್ಯವಾಗಲಿದೆ. ಇದರಿಂದ ಮೀನುಗಾರರಿಗೆ ಹೆಚ್ಚಿನ ಲಾಭವಾಗಲಿದೆ ಎಂದರು.
ಕೇಂದ್ರದಿಂದ ಸೀಮೆಎಣ್ಣೆ ಇಲ್ಲ: ಕಳೆದ ಎರಡು ವರ್ಷಗಳಿಂದ ಕೇಂದ್ರ ಸರಕಾರ ಒಂದು ಲೀ. ಸೀಮೆಎಣ್ಣೆ ಬಿಡುಗಡೆ ಮಾಡುತ್ತಿಲ್ಲ. ಅಲ್ಲದೇ ನಾಡದೋಣಿಗಳಿಗೆ ನೀಡುವ ಸಬ್ಸಿಡಿ ಸೀಮೆಎಣ್ಣೆ ಲೀ.35 ರೂ.ಇದ್ದ ದರವನ್ನು ಕೇಂದ್ರ ಸರಕಾರ 55ರೂ.ಗೇರಿಸಿದೆ. ಆದರೂ ರಾಜ್ಯ ಸರಕಾರ 55ರೂ.ಗೆ ಸೀಮೆಎಣ್ಣೆ ಖರೀದಿಸಿ ನಾಡದೋಣಿಗಳಿಗೆ ಸಬ್ಸಿಡಿ ದರದಲ್ಲಿ ವಿತರಿಸುತ್ತದೆ. ಕಳೆದ ಐದು ವರ್ಷಗಳಿಂದ ಸೀಮೆಎಣ್ಣೆಯನ್ನೇ ಬಿಡುಗಡೆ ಮಾಡದ ಕೇಂದ್ರ ಸರಕಾರದ ಸ್ಥಳೀಯ ಬಿಜೆಪಿ ನಾಯಕರು ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುತ್ತಾರೆ ಎಂದರು.
ಮೀನುಗಾರರ ಪರವಾಗಿ ಕೆಲಸ ಮಾಡುವ ಸರಕಾರ ನಮ್ಮದು. ಸುಳ್ಳು ಹೇಳುವುದು ‘ಅವರ’ ಜಾಯಮಾನ. ನಾವು ನುಡಿದಂತೆ ನಡೆಯುತ್ತೇವೆ. ಗ್ಯಾರಂಟಿ ವಿಷಯದಲ್ಲೂ ಇದು ಸತ್ಯ. ಮೀನುಗಾರರ ಹಿತಾಸಕ್ತಿಗಳನ್ನು ರಕ್ಷಿಸುವ ವಿಷಯ ದಲ್ಲೂ ಇದು ಸತ್ಯ ಎಂದರು.
ಸಮಾರಂಭದಲ್ಲಿ ಮಲ್ಪೆಯ ಸಮಸ್ತ ಮೀನುಗಾರರ ಪರವಾಗಿ ಮೀನುಗಾರಿಕಾ ಸಚಿವ ಮಂಕಾಳ ವೈದ್ಯರನ್ನು ಸನ್ಮಾನಿ ಸಲಾಯಿತು. ಅಲ್ಲದೇ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಮೂರು ಕುಟುಂಬಗಳಿಗೆ ಪರಿಹಾರದ ಚೆಕ್ನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನ ಡಾ.ಜಿ. ಶಂಕರ್ ಮಲ್ಪೆ ಮೀನು ವ್ಯಾಪಾರ ಸಮುಚ್ಛಯ ವನ್ನು ಉದ್ಘಾಟಿಸಿದರು. ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಹೈದರಾಬಾದ್ನ ನೇಶನಲ್ ಫಿಶರೀಸ್ ಡೆವಲಪ್ಮೆಂಟ್ ಬೋರ್ಡ್ನ ಸಿಇಓ ಡಾ.ಎಲ್.ನರಸಿಂಹ ಮೂರ್ತಿ, ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ.ಸುವರ್ಣ, ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್, ಕಾಂಗ್ರೆಸ್ ನಾಯಕ ಪ್ರಸಾದ್ರಾಜ್ ಕಾಂಚನ್, ನಗರಸಭಾ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಉಪಸ್ಥಿತರಿದ್ದರು.
"ನಮ್ಮ ಸರಕಾರ ಮೀನುಗಾರರ ಪರವಾಗಿದೆ. ಯಾವುದೇ ಸಮಯ, ಸಂದರ್ಭದಲ್ಲಿ ನಾವು ಮೀನುಗಾರರ ಪರವಾಗಿಯೇ ನಿಲ್ಲುತ್ತೇವೆ. ನಿಮ್ಮೆಲ್ಲಾ ಯೋಜನೆಗಳನ್ನು ವಿಳಂಬವಿಲ್ಲದೇ ಮಾಡಿಕೊಡುತ್ತೇವೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ".
-ಮಂಕಾಳ ಎಸ್. ವೈದ್ಯ, ರಾಜ್ಯ ಮೀನುಗಾರಿಕೆ ಸಚಿವ







