"ವಾರಾಹಿ ಪಂಪ್ಡ್ ಸ್ಟೋರೇಜ್ ಪ್ಲಾಂಟ್ನಿಂದ ವಾರಾಹಿ ನೀರಾವರಿ, ಕುಡಿಯುವ ನೀರು ಯೋಜನೆಗಳಿಗೆ ತೊಂದರೆ ಇಲ್ಲ"
ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್

ಉಡುಪಿ, ಫೆ.6: ಬೈಂದೂರು ತಾಲೂಕು ಹೊಸಂಗಡಿ ಗ್ರಾಮದ ವಾರಾಹಿ ವಿದ್ಯುತ್ ಯೋಜನಾ ಪ್ರದೇಶದ ಸಮೀಪ 1,500ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗಾಗಿ ನಿರ್ಮಿಸಲು ಉದ್ದೇಶಿಸಿರುವ ವಾರಾಹಿ ಪಂಪ್ಡ್ ಸ್ಟೋರೇಜ್ ಪ್ಲಾಂಟ್ನಿಂದ ಈಗಿರುವ ವಾರಾಹಿ ನೀರಾವರಿಗಾಗಲೀ, ಕುಡಿಯುವ ನೀರಿನ ಯೋಜನೆಗಾಗಲೀ ಯಾವುದೇ ತೊಂದರೆ ಇರುವುದಿಲ್ಲ. ಎರಡೂ ಪ್ರತ್ಯೇಕ ಯೋಜನೆಗಳು ಎಂದು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟ ಪಡಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಕರೆಯಲಾದ ಮೆಸ್ಕಾಂ ಹಾಗೂ ಕೆ.ಪಿ.ಸಿ.ಟಿ.ಎಲ್ನ ಪ್ರಗತಿ ಪರೀಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸಚಿವರು ಎರಡು ದಿನಗಳ ಹಿಂದೆ ಹೊಸಂಗಡಿಯಲ್ಲಿ ಪ್ರಕಟಿಸಿದ ಈ ಯೋಜನೆಯ ಕುರಿತಂತೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕೇಳಿದ ಸಮಗ್ರ ಮಾಹಿತಿ ಹಾಗೂ ಜಿಲ್ಲೆಯ ಜೀವನದಿಯಂತಿರುವ ವಾರಾಹಿಯಿಂದ ಇಡೀ ಜಿಲ್ಲೆಗೆ ದೊರೆಯುವ ಕುಡಿಯುವ ನೀರಿಗೆ ಮತ್ತು ಈಗಾಗಲೇ ಇರುವ ವಾರಾಹಿ ನೀರಾವರಿ ಯೋಜನೆಗೆ ಇದರಿಂದ ತೊಂದರೆ ಎದುರಾಗುವ ಬಗ್ಗೆ ಸಂದೇಹ ವ್ಯಕ್ತಪಡಿಸಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಈಗಾಗಲೇ ವಾರಾಹಿ ಜಲವಿದ್ಯುತ್ ಯೋಜನೆಯಿಂದ 460 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದೀಗ ವಾರಾಹಿ ಪಂಪ್ಡ್ ಸ್ಟೋರೇಜ್ ಪ್ಲಾಂಟ್ಗಾಗಿ ಸಮೀಪದಲ್ಲೇ 0.3 ಟಿಎಂಸಿ ಸಾಮರ್ಥ್ಯದ ಚೆಚ್ಡ್ಯಾಮ್ನ್ನು ನಿರ್ಮಿಸಲಾ ಗುತ್ತದೆ. ಮಳೆಗಾಲದಲ್ಲಿ ವಾರಾಹಿ ನದಿಯಲ್ಲಿ ಬರುವ ನೀರಿನಿಂದ ಈ ಚೆಕ್ಡ್ಯಾಮ್ನ್ನು ಒಮ್ಮೆ ಭರ್ತಿ ಮಾಡಿದರೆ ನಂತರ ಅದೇ ನೀರನ್ನು ವರ್ಷಾನುಗಟ್ಟಲೆ ನಿರಂತರ ಮರುಬಳಕೆಯ ಮೂಲಕ 1500 ಮೆ.ವ್ಯಾ. ವಿದ್ಯುತ್ನ್ನು ಉತ್ಪಾದಿಸಲಾಗುತ್ತದೆ ಎಂದರು.
ಈ ಯೋಜನೆಗೂ ವಾರಾಹಿಯಲ್ಲಿ ಹರಿಯುವ ನದಿಗೂ ಯಾವುದೇ ಸಂಬಂಧವಿರುವುದಿಲ್ಲ. ಈಗಿರುವಂತೆ ವಾರಾಹಿ ಪವರ್ ಹೌಸ್ನಿಂದ ಹೊರ ಬರುವ ನೀರು ನದಿಯಲ್ಲಿ ನಿರಂತರವಾಗಿ ಹರಿಯುತ್ತಿರುತ್ತದೆ. ಹೀಗಾಗಿ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗೆ ಸಮಸ್ಯೆ ಇರುವುದಿಲ್ಲ ಎಂದ ಸಚಿವರು, ನಮ್ಮ ಯೋಜನೆಗಾಗಿ ಇಂಧನ ಖಾತೆಯು ತೆಹ್ರಿ ಹೈಡ್ರೊ ಡೆವಲಪ್ಮೆಂಟ್ ಕಾರ್ಪೋರೇಷನ್ (ಟಿಎಚ್ಡಿಸಿಎಲ್)ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ವಿವರಿಸಿದರು.
ಅಧಿಕಾರಿಗಳಿಗೆ ಸೂಚನೆ: ಮೆಸ್ಕಾಂ ಇಲಾಖೆ ಅಧಿಕಾರಿಗಳು ಸಾರ್ವಜನಿಕ ರೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಸತತ ಸಂಪರ್ಕದಲ್ಲಿ ಇದ್ದಲ್ಲಿ ಮಾತ್ರ ಸಾರ್ವಜನಿಕರ ವಿದ್ಯುತ್ ಸಂಪರ್ಕದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ. ಸಾರ್ವಜನಿಕರು, ರೈತರು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ವಾದಾಗ ಮೆಸ್ಕಾಂ ಇಲಾಖೆಯನ್ನು ಸಂಪರ್ಕಿಸುತ್ತಾರೆ. ಇಲಾಖೆಯಿಂದ ಶೀಘ್ರವೇ ಸಮಸ್ಯೆ ಪರಿಹಾರವಾಗದಿದ್ದಾಗ ಜನಪ್ರತಿನಿಧಿಗಳನ್ನು ಸಂಪರ್ಕಿಸಿ, ದುರಸ್ಥಿ ಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಅಧಿಕಾರಿಗಳು ಈ ಇಬ್ಬರ ಜೊತೆ ನೇರವಾಗಿ ಸಂಪರ್ಕದಲ್ಲಿದ್ದಾಗ ಮಾತ್ರ ಸಾರ್ವಜನಿಕರಿಗೆ ಎದುರಾ ಗುವ ವಿದ್ಯುಚ್ಛಕ್ತಿ ಸಮಸ್ಯೆ ಬಗ್ಗೆ ತಿಳಿದುಕೊಳ್ಳಲು ಹಾಗೂ ಬಗೆಹರಿಸಲು ಸಾಧ್ಯ. ಇದಕ್ಕೆ ಅಧಿಕಾರಿಗಳು ಹೆಚ್ಚು ಒತ್ತು ನೀಡಬೇಕು ಎಂದರು.
ವಿದ್ಯುತ್ ಕೊರತೆ ಇಲ್ಲ: ರಾಜ್ಯದಲ್ಲಿ ಪ್ರಸ್ತುತ ವಿದ್ಯುತ್ ಕೊರತೆ ಇಲ್ಲ. ವಾಣಿಜ್ಯ ಉದ್ದೇಶವೂ ಸೇರಿದಂತೆ ಕೈಗಾರಿಕಾ ಪ್ರದೇಶಗಳಿಗೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ದುರಸ್ಥಿ, ನಿರ್ವಹಣೆಯ ಸಂದರ್ಭಗಳಲ್ಲಿ ಮಾತ್ರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಇದಕ್ಕೂ ಮೆಸ್ಕಾಂ ಪತ್ರಿಕೆಗಳಲ್ಲಿ ಪೂರ್ವ ಪ್ರಕಟಣೆ ನೀಡುತ್ತಿದೆ ಎಂದು ಅವರು ತಿಳಿಸಿದರು.
ನಮ್ಮ ಸರಕಾರ ಅಧಿಕಾರಿಕ್ಕೆ ಬಂದ ಸಂದರ್ಭದಲ್ಲಿ ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ ಇದ್ದ ತೊಡಕಿನ ಹಿನ್ನಲೆಯಲ್ಲಿ ವಿದ್ಯುತ್ ಕೊರತೆ ಕಾಣಿಸಿಕೊಂಡಿತ್ತು. ಆದರೆ ರಾಜ್ಯ ಸರಕಾರ ತಕ್ಷಣ ಕಾರ್ಯೋನ್ಮುಖವಾಗಿ ಪಂಜಾಬ್, ಹಿಮಾಚಲ ಪ್ರದೇಶ ಹಾಗೂ ಉತ್ತರ ಪ್ರದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡು ಹಾಗೂ ಖಾಸಗಿ ವಿದ್ಯುತ್ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಕೊರತೆಯನ್ನು ನೀಗಿಸಲಾಗಿತ್ತು ಎಂದರು.
ಸೋಲಾರ್, ಗಾಳಿ ವಿದ್ಯುತ್ಗೆ ಆದ್ಯತೆ: ಸದ್ಯ ರಾಜ್ಯ ಸರಕಾರ ಸೋಲಾರ್ (ಸೌರ ವಿದ್ಯುತ್) ಮತ್ತು ಗಾಳಿಯಿಂದ (ವಿಂಡ್ ಪವರ್) ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಟಿಎಚ್ಡಿಸಿಎಲ್ನೊಂದಿಗಿನ ಒಪ್ಪಂದವೂ ಇದಕ್ಕೆ ಪೂರಕ ವಾಗಿದೆ. ಸದ್ಯ ಬೆಂಗಳೂರಿನ ಡೀಸೆಲ್ ಚಾಲಿತ ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರವನ್ನು ಗ್ಯಾಸ್ ಬಳಕೆ ಮಾಡಿಕೊಂಡು ಉತ್ಪಾದಿಸುವ ರೀತಿಯಲ್ಲಿ ಮರು ನಿರ್ಮಾಣಗೊಳ್ಳುತ್ತಿದೆ. ಮಂಗಳೂರಿನಲ್ಲಿ ಹಸಿರು ಇಂಧನವಾದ ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ಪೈಲೆಟ್ ಯೋಜನೆ ಸಿದ್ಧಗೊಳ್ಳುತ್ತಿದೆ ಎಂದರು.
ಕ್ರಮದ ಎಚ್ಚರಿಕೆ: ಜಿಲ್ಲೆಯಲ್ಲಿ ಟ್ರಾನ್ಸ್ಫಾರ್ಮರ್ಗಳು ಹಾಳಾದಾಗ ಅವುಗಳನ್ನು 72 ಗಂಟೆಯ ಒಳಗಾಗಿ ಬದಲಾವಣೆಗೆ ಕ್ರಮಕೈಗೊಳ್ಳಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಇದಕ್ಕೆ ಅಗತ್ಯವಿರುವ ಟ್ರಾನ್ಸ್ಫಾರ್ಮ್ಗಳ ಬ್ಯಾಂಕ್ಗಳನ್ನು ಸಹ ದಾಸ್ತಾನು ಇಟ್ಟುಕೊಳ್ಳಲು ತಿಳಿಸಲಾಗಿದೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಇನ್ನು ಮುಂದೆ ಸಂಬಂಧಿತ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಳೆಗಾಲಕ್ಕೂ ಮುನ್ನವೇ ವಿದ್ಯುತ್ಚ್ಛಕ್ತಿ ಸರಬರಾಜಿಗೆ ತೊಂದರೆ ಉಂಟು ಮಾಡುವ ಮರಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ, ಅರಣ್ಯ ಇಲಾಖೆ, ಹಾಗೂ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ತೆರವುಗೊಳಿಸಲು ಮುಂದಾಗಬೇಕು ಎಂದರು.
ರಾಜ್ಯದಲ್ಲಿ 6000ಕ್ಕೂ ಹೆಚ್ಚು ಲೈನ್ಮೆನ್ಗಳ ಕೊರತೆ ಇದೆ. ಈ ಜಿಲ್ಲೆಯಲ್ಲಿಯೂ ಶೇ.42 ಕ್ಕಿಂತ ಹೆಚ್ಚು ಕೊರತೆ ಇರು ವುದು ಗಮನಕ್ಕೆ ಬಂದಿದೆ. ಮುಂದಿನ ಎರಡು ತಿಂಗಳೊಳಗಾಗಿ 3000 ಲೈನ್ಮೆನ್ ಹುದ್ದೆಗಳನ್ನು ಆಯಾ ಜಿಲ್ಲೆಗಳಲ್ಲೇ ತುಂಬಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ಜಿಲ್ಲೆಗೆ ಅಗತ್ಯವಿರುವ ಲೈನ್ಮ್ಯಾನ್ಗಳನ್ನು ನೀಡಲು ಸಾಧ್ಯವಾ ಗುತ್ತದೆ ಎಂದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಈ ತಿಂಗಳಿಂದ ಎಸೆಸೆಲ್ಸಿ ಹಾಗೂ ಪಿಯುಸಿ ಪಬ್ಲಿಕ್ ಪರೀಕ್ಷೆಗಳು ಪ್ರಾರಂಭ ಗೊಳ್ಳುತಿದ್ದು, ಈ ವೇಳೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಹುಣೆಮಕ್ಸಿ ಹಾಗೂ ತೆಕ್ಕಟ್ಟೆಯಲ್ಲಿ ಹೊಸ ಉಪವಿಭಾಗ ಪ್ರಾರಂಭಿ ಸುವಂತೆ, ಹಾಲಾಡಿ ಭಾಗದಲ್ಲಿ ನಿರಂತರವಾಗಿರುವ ಲೋವೋಲ್ಟೇಜ್ನ ಸಮಸ್ಯೆ ಬಗೆಹರಿಸುವಂತೆ ತಿಂಗಳಾದರೂ ಹಾಳಾದ ಟ್ರಾನ್ಸ್ಫಾರ್ಮ್ರ್ಗಳನ್ನು ಬದಲಿಸದ ಬಗ್ಗೆ ಸಚಿವರ ಗಮನ ಸೆಳೆದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕೆ.ಪಿ.ಟಿ.ಸಿಎಲ್ ವ್ಯಪಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮೆಸ್ಕಾಂ ಮತ್ತು ಕೆಪಿಟಿಸಿಎಲ್ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







