ಮಣಿಪಾಲ್ ಮ್ಯಾರಥಾನ್ಗೆ ಡಿಕೆಎಂಎಸ್-ಬಿಎಂಎಸ್ಟಿ ಸಹಭಾಗಿತ್ವ: ರಕ್ತ ಕ್ಯಾನ್ಸರ್ ಚಿಕಿತ್ಸೆಗೆ ಬ್ಲಡ್ ಸ್ಟೆಮ್ ಸೆಲ್ ದಾನದ ಬಗ್ಗೆ ಜಾಗೃತಿ

ಉಡುಪಿ, ಫೆ.9: ಕ್ಯಾನ್ಸರ್ ರೋಗದಲ್ಲೇ ಮಾರಕ ಎಂದು ಹೇಳಲಾಗುವ ರಕ್ತದ ಕ್ಯಾನ್ಸರ್ ಚಿಕಿತ್ಸೆಗಾಗಿ ಬ್ಲಡ್ ಸ್ಟೆಮ್ ಸೆಲ್ (ರಕ್ತದ ಕಾಂಡಕೋಶ ) ದಾನದ ಬಗ್ಗೆ ಮಣಿಪಾಲದಲ್ಲಿ ವಿಶೇಷತ: ವಿದ್ಯಾರ್ಥಿ ಸಮೂಹದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ಸ್ವಯಂಸೇವಾ ಸಂಸ್ಥೆ ಡಿಕೆಎಂಎಸ್ ಬಿಎಂಎಸ್ಟಿ ಫೌಂಡೇಶನ್ ಇಂಡಿಯಾ, ಮಾಹೆ ನೇತೃತ್ವದಲ್ಲಿ ನಡೆಯುವ ಮಣಿಪಾಲ್ ಮ್ಯಾರಥಾನ್-2024ರ ಜೊತೆಗೆ ಕೈಜೋಡಿಸಿದೆ.
ಮ್ಯಾರಥಾನ್ನಲ್ಲಿ ದೇಶ-ವಿದೇಶಗಳ ಹತ್ತು ಸಾವಿರಕ್ಕೂ ಅಧಿಕ ಮಂದಿ ಅಥ್ಲೀಟ್ಗಳು, ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಜೀವ ಉಳಿಸುವ ರಕ್ತಕಾಂಡ ಕೋಶದ ದಾನಿಗಳನ್ನು ಗರಿಷ್ಠ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುವ ಗುರಿಯನ್ನು ಸಂಸ್ಥೆಯು ಹೊಂದಿದೆ.
ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಶನ್ನ ಸಹಭಾಗಿತ್ವದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮಣಿಪಾಲ್ ಮ್ಯಾರಥಾನ್ ಆಯೋಜಿಸಿದೆ. ಮ್ಯಾರಥಾನ್ನ ಈ 6ನೇ ಆವೃತ್ತಿಗೆ ‘ವಿ ಆರ್ ವಿತ್ ಯು ಆಲ್ ದಿ ವೇ’ ಎಂಬ ಧ್ಯೇಯವಾಕ್ಯ ವನ್ನು ನೀಡಲಾಗಿದ್ದು, ರಕ್ತ ಕ್ಯಾನ್ಸರ್ನಂಥ ಮಾರಕ ರೋಗಗಳ ವಿರುದ್ಧ ಜಾಗೃತಿಯನ್ನು ಮೂಡಿಸುವ ಉದ್ದೇಶ ಹೊಂದಿದೆ.
ಈ ಹಿನ್ನೆಲೆಯಲ್ಲಿ ಮಾತನಾಡಿದ ಡಿಕೆಎಂಎಸ್ ಬಿಎಂಎಸ್ಟಿ ಫೌಂಡೇಶನ್ ಇಂಡಿಯಾದ ಸಿಇಒ ಪ್ಯಾಟ್ರಿಕ್ ಪೌಲ್, ಭಾರತ ದಲ್ಲಿ ಸ್ಟೆಮ್ ಸೆಲ್ ದಾನಿಗಳ ಕೊರತೆಯನ್ನು ಪರಿಹರಿಸುವ ಅಗತ್ಯವಿದೆ. ಭಾರತದಲ್ಲಿ ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಮಂದಿ ರಕ್ತದ ಕ್ಯಾನ್ಸರ್ ಅಥವಾ ತತ್ಸಂಬಂಧಿ ಕಾಯಿಲೆಗೆ ಗುರಿಯಾಗುತ್ತಿದ್ದಾರೆ. ಅವರಿಗೆ ಯಶಸ್ವಿಯಾಗಿ ರಕ್ತದ ಸ್ಟೆಮ್ ಸೆಲ್ ಕಸಿ ಮಾಡಿಸಿಕೊಳ್ಳಲು ಸರಿಯಾದ ಎಚ್ಎಲ್ಎ ಹೊಂದಾಣಿಕೆಯಾಗುವ ದಾನಿ ಬೇಕಾಗುತ್ತದೆ. ದುರಾದೃಷ್ಟವ ಶಾತ್, ಕೇವಲ ಶೇ 0.03ರಷ್ಟು ಭಾರತೀಯರು ಮಾತ್ರ ಈವರೆಗೆ ರಕ್ತ ಕಾಂಡಕೋಶದ ದಾನಿಗಳಾಗಿ ನೋಂದಣಿ ಮಾಡಿ ಕೊಂಡಿದ್ದಾರೆ ಎಂದರು.
ಭಾರತೀಯ ಮೂಲದ ರೋಗಿಗಳು ಮತ್ತು ದಾನಿಗಳಿಗೆ ವಿಶಿಷ್ಟವಾದ ಎಚ್ಎಲ್ಎ (ಹ್ಯೂಮನ್ ಲ್ಯೂಕೊಸೈಟ್ ಆಂಟಿಜೆನ್) ಇದೆ. ಇದು ಜಾಗತಿಕ ಡೇಟಾಬೇಸ್ನಲ್ಲಿ ಹೆಚ್ಚಾಗಿ ಸಿಗುವುದಿಲ್ಲ. ಹೀಗಾಗಿ ಸೂಕ್ತವಾದ ದಾನಿಗಳನ್ನು ಹುಡುಕಬೇಕಾಗಿದೆ. ಭಾರತ ಯುವ ದೇಶವಾಗಿದ್ದು, ರಕ್ತದ ಕಾಂಡಕೋಶ ದಾನದ ಬಗ್ಗೆ ವಿದ್ಯಾರ್ಥಿಗಳ ಮೂಲಕ ಜಾಗೃತಿ ಮೂಡಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದು ಪ್ಯಾಟ್ರಿಕ್ ಪೌಲ್ ಹೇಳಿದರು.
ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ, ಈ ಬಾರಿಯ ಮಣಿಪಾಲ್ ಮ್ಯಾರಥಾನ್ಗೆ ಡಿಕೆಎಂಎಸ್-ಬಿಎಂಎಸ್ಟಿ ಫೌಂಡೇಶನ್ ಇಂಡಿಯಾ ಕೈಜೋಡಿಸಿದೆ. ಇದರಲ್ಲಿ ರಕ್ತದ ಕಾಂಡಕೋಶದ ದಾನದ ಬಗ್ಗೆ, ರಕ್ತದ ಕ್ಯಾನ್ಸರ್ ಮತ್ತು ತತ್ಸಂಬಂಧಿತ ತಲಸ್ಸೇಮಿಯಾ ಇತ್ಯಾದಿ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಡಲಿದ್ದೇವೆ ಎಂದರು.
ಮ್ಯಾರಥಾನ್ನಲ್ಲಿ ಪಾಲ್ಗೊಳ್ಳುವ ಯುವ ಅಥ್ಲೀಟ್ಗಳು, ವಿದ್ಯಾರ್ಥಿಗಳು ಸಂಭವನೀಯ ರಕ್ತಕಾಂಡ ಕೋಶದ ದಾನಿಗಳಾಗಿ ನೋಂದಣಿ ಮಾಡಿಕೊಳ್ಳ ಬಹುದು ಎಂಬ ಆಶಯ ನಮ್ಮದಾಗಿದೆ ಎಂದು ಹೇಳಿದರು.
ದಾನಿಯ ಅನುಭವ ಕಥನ: ರೋಗಿಗಳನ್ನು ರಕ್ಷಿಸಲು ತನ್ನ ರಕ್ತದ ಕಾಂಡಕೋಶಗಳನ್ನು ದಾನ ಮಾಡಿರುವ ದಾನಿ ಮತ್ತು ಉಡುಪಿಯ ಮಾರ್ಕೆಟಿಂಗ್ ಉದ್ಯೋಗಿ ಅಕ್ಷಯ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡು ‘ರಕ್ತದ ಕಾಂಡಕೋಶ ದಾನದ ಬಗ್ಗೆ ಕೆಲವು ಮಿಥ್ಯೆಗಳಿವೆ. ಈ ಪ್ರಕ್ರಿಯೆಯಲ್ಲಿ ದವಡೆಯ ಸ್ವಾಬ್ ಮಾದರಿಗಳನ್ನು ನೀಡುವ ಸರಳ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ದಾನಿಯಾಗಿ ನೋಂದಣಿ ಮಾಡಿಕೊಂಡರೆ ಸಾಕು. ಹೊಸ ತಲೆಮಾರು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟು, ಜೀವಗಳನ್ನು ಉಳಿಸುವ ಭರವಸೆಯ ಆಶಾಕಿರಣವಾಗಿ ದಾನವನ್ನು ಪ್ರೋತ್ಸಾಹಿಸ ಬೇಕಾದ ಅಗತ್ಯವಿದೆ. ರಕ್ತದ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಇದು ಆರೋಗ್ಯಕರ ಹೆಜ್ಜೆಯಾಗಲಿದೆ.’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಹೆಯ ಪ್ರೊಉಪಕುಲಪತಿ ಡಾ.ಶರತ್ ರಾವ್, ಡಾ.ನಾರಾಯಣ್ ಸಭಾಹಿತ್, ಡಾ.ಎನ್ ಎಂ ಶರ್ಮ, ರಿಜಿಸ್ಟ್ರಾರ್ ಡಾ. ಗಿರಿಧರ್ ಕಿಣಿ, ಡಿಕೆಎಂಎಸ್ ಬಿಎಂಎಸ್ಟಿ ಫೌಂಡೇಶನ್ ಇಂಡಿಯಾದ ಆರೋಹಿ ತ್ರಿಪಾಠಿ ಹಾಗೂ ಇತರರು ಉಪಸ್ಥಿತರಿದ್ದರು.
18-55 ವಯೋಮಿತಿಯ ದಾನಿಗಳಿಗೆ ನೊಂದಣಿಗೆ ಅವಕಾಶ
ಭಾರತದಲ್ಲಿ ಪ್ರತಿ ಐದು ನಿಮಿಷಕ್ಕೊಬ್ಬನಲ್ಲಿ ರಕ್ತದ ಕ್ಯಾನ್ಸರ್ ಅಥವಾ ತಲಸ್ಸೇಮಿಯಾ ಅಥವಾ ಅಪ್ಲಾಸ್ಟಿಕ್ ಅನೀಮಿಯಾ ದಂತಹ ರಕ್ತದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ವರದಿಯಾಗಿದೆ. ಇವರಲ್ಲಿ ಬಹು ಪಾಲು ಮಂದಿ ಮಕ್ಕಳು ಮತ್ತು ಯುವಕರು. ರಕ್ತದ ಕಾಂಡಕೋಶದ ಕಸಿಯಿಂದಲೇ ಚೇತರಿಸಿಕೊಳ್ಳುವ ಅವಕಾಶ ಇವರಿಗೆ ಇದೆ. ಆದರೆ ಯಶಸ್ವಿಯಾಗಿ ಕಸಿ ಮಾಡಿಸಿಕೊಳ್ಳಲು ರೋಗಿಗೆ ಎಚ್ಎಲ್ಎ (ಹ್ಯೂಮನ್ ಲ್ಯೂಕೊಸೈಟ್ ಆಂಟಿಜೆನ್) ಹೋಲುವ ದಾನಿಯನ್ನು ಹುಡು ಕುವ ಅಗತ್ಯವಿರುತ್ತದೆ.
ಬಹುತೇಕ ಸಮಯದಲ್ಲಿ ಹೆಚ್ಚಿನ ರೋಗಿಗಳಿಗೆ ಸರಿಯಾದ ದಾನಿ ಸಿಗದೇ ಇರುವುದರಿಂದ ಕಸಿ ಮಾಡಲು ಸಾಧ್ಯವಾಗು ವುದಿಲ್ಲ. ತುಂಬಾ ಕಡಿಮೆ ಸಂಖ್ಯೆಯ ಬ್ಲಡ್ ಸ್ಟೆಮ್ ಸೆಲ್ ದಾನಿಗಳು ನೋಂದಣಿ ಮಾಡಿಕೊಂಡಿ ರುವುದರಿಂದ ಹೋಲಿಕೆ ಯಾಗುವ ದಾನಿಯನ್ನು ಹುಡುಕುವುದು ತುಂಬಾ ಕಷ್ಟ. ಹೀಗಾಗಿ, ಹೆಚ್ಚು ಹೆಚ್ಚು ಭಾರತೀಯರು ಈ ದಾನಕ್ಕೆ ನೋಂದಣಿ ಮಾಡಿಕೊಳ್ಳಬೇಕಿದೆ.
ರಕ್ತದ ಕಾಂಡಕೋಶದ ದಾನಿಯಾಗಿ ನೋಂದಣಿ ಮಾಡಿಕೊಳ್ಳಲು ದಾನಿಗಳು 18ರಿಂದ 55 ವರ್ಷಗಳೊಳಗಿನ ಆರೋಗ್ಯ ವಂತ ಭಾರತೀಯ ವಯಸ್ಕನಾಗಿರಬೇಕು. ಒಂದು ಒಪ್ಪಿಗೆ ಅರ್ಜಿಯನ್ನು ಭರ್ತಿ ಮಾಡಬೇಕು ಮತ್ತು ಅಂಗಾಂಶದ ಕೋಶಗಳನ್ನು ಸಂಗ್ರಹಿಸಲು ನಿಮ್ಮ ದವಡೆಯ ಒಳಗಿನ ಸ್ವಾಬ್ ಸಂಗ್ರಹಿಸಲಾಗುತ್ತದೆ. ಆ ಮಾದರಿಯನ್ನು ನಂತರ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಬಳಿಕ ಹೋಲಿಕೆಯಾಗುವ ರಕ್ತದ ಕಾಂಡಕೋಶ ದಾನಿ ಎಂಬುದಾಗಿ ಅಂತಾರಾಷ್ಟ್ರೀಯ ಸರ್ಚ್ ಪ್ಲಾಟ್ಫಾರಂ ನಲ್ಲಿ ನಿಮ್ಮ ಗುರುತು ಮರೆಮಾಚಿ ನೋಂದಣಿ ಮಾಡಲಾಗುತ್ತದೆ.
ಡಿಕೆಎಂಎಸ್-ಬಿಎಂಎಸ್ಟಿ ಇಂಡಿಯಾ ಈವರೆಗೆ ಭಾರತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ದಾನಿಗಳನ್ನು ದೇಶದಲ್ಲಿ ನೋಂದಣಿ ಮಾಡಿದೆ. 2010ರಿಂದ ಇದುವರೆಗೆ 110ಕ್ಕೂ ಹೆಚ್ಚು ಕಸಿಗಳನ್ನು ಮಾಡಲಾಗಿದೆ. ಸಾಧ್ಯವಾದಷ್ಟು ರೋಗಿಗಳಿಗೆ ಜೀವದಾನ ನೀಡುವುದಕ್ಕಾಗಿ ಭಾರತದಲ್ಲಿ ಹೆಚ್ಚು ಹೆಚ್ಚು ದಾನಿಗಳನ್ನು ನೋಂದಣಿ ಮಾಡಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.







