ಮನುವಾದಿಗಳ ಕುತಂತ್ರಕ್ಕೆ ದಲಿತರು ಬಲಿಯಾಗಬಾರದು: ಸುಂದರ್ ಮಾಸ್ತರ್
![ಮನುವಾದಿಗಳ ಕುತಂತ್ರಕ್ಕೆ ದಲಿತರು ಬಲಿಯಾಗಬಾರದು: ಸುಂದರ್ ಮಾಸ್ತರ್ ಮನುವಾದಿಗಳ ಕುತಂತ್ರಕ್ಕೆ ದಲಿತರು ಬಲಿಯಾಗಬಾರದು: ಸುಂದರ್ ಮಾಸ್ತರ್](https://www.varthabharati.in/h-upload/2024/02/13/1243442-ud-f13-kodankoor.webp)
ಉಡುಪಿ, ಫೆ.13: ಮನುವಾದಿ, ಜಾತಿವಾದಿಗಳ ಈ ಅಕ್ಷತೆ ಹಂಚುವ ಕುತಂತ್ರಕ್ಕೆ ದಲಿತರು ಬಲಿಯಾಗಬಾರದು. ಈ ಅಕ್ಷತೆ ತೆಗೆದುಕೊಂಡರೆ ನಮ್ಮ ಅಭಿವೃದ್ಧಿ ಆಗುವುದಿಲ್ಲ. ನಾವು ಪ್ರಗತಿ ಸಾಧಿಸಬೇಕಾದರೆ ಸ್ವಂತ ಉದ್ಯೋಗ ಮಾಡ ಬೇಕು. ನಮ್ಮ ಮಕ್ಕಳ ಕೈಯಲ್ಲಿರುವ ಕೇಸರೀ ಧ್ವಜವನ್ನು ಕಿತ್ತು ಬಿಸಾಕಿ, ಶಿಕ್ಷಣದ ಪುಸ್ತಕ ಕೊಡಬೇಕು ಎಂದು ದಸಂಸ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ಕೊಡಂಕೂರಿನಲ್ಲಿ ರವಿವಾರ ನಡೆದ ಶೋಷಿತರ ಜಾಗೃತಿ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಸಮಾವೇಶವನ್ನು ಉದ್ಘಾಟಿಸಿದ ಉಡುಪಿ ನಗರಸಭೆಯ ಪೌರಾಯುಕ್ತ ರಾಯಪ್ಪ ಮಾತನಾಡಿ, ಶೋಷಿತರು ಅಭಿವೃದ್ಧಿ ಹೊಂದಬೇಕಾದರೆ ನಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಕೊಡಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಇದನ್ನೇ ಪ್ರತಿಪಾದಿ ಸಿದರು. ಅಂಬೇಡ್ಕರ್ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ಮೇಲ್ವರ್ಗದವರು ಅಂದಿನ ಕಾಲಘಟ್ಟದಲ್ಲಿ ಸಾಕಷ್ಟು ತೊಂದರೆ, ಕಷ್ಟ, ಹುನ್ನಾರ ಗಳನ್ನು ಮಾಡಿದರು. ಆದರೆ ಬಾಬಾ ಸಾಹೇಬರು ಛಲ ಬಿಡದೇ ಎಲ್ಲಾ ನೋವನ್ನು ನುಂಗಿ ಕೊಂಡೇ ಅತ್ಯುತ್ತಮ ಶಿಕ್ಷಣ ಪಡೆದು ನಮ್ಮ ದೇಶಕ್ಕೆ ಪ್ರಪಂಚದಲ್ಲೇ ಸರ್ವಶ್ರೇಷ್ಠ ಸಂವಿಧಾನವನ್ನು ಕೊಟ್ಟರು ಎಂದರು.
ಬಾಬಾ ಸಾಹೇಬರು ಕೊಟ್ಟ ಸಂವಿಧಾನದಿಂದಾಗಿಯೇ ನಾನು ಇಲ್ಲಿ ಬಂದು ನಿಂತಿದ್ದೇನೆ. ಈ ದೇಶದ ಸಂವಿಧಾನವನ್ನು ಬಾಬಾಸಾಹೇಬರು ರಚಿಸದೇ ಇರುತ್ತಿದ್ದರೆ ನಮ್ಮ ಬದುಕನ್ನು ಊಹಿಸಿಕೊಳ್ಳುವುದು ಕಷ್ಟ. ಸಂವಿಧಾನದಲ್ಲಿ ಎಲ್ಲಾ ಅವಕಾ ಶವನ್ನು ನಮಗೆ ಕಲ್ಪಿಸಿದ್ದಾರೆ ನಾವು ಈ ಅವಕಾಶವನ್ನು ಉಪಯೋಗಿಸಿ ಕೊಂಡು ನಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ವನ್ನು ಕೊಡಬೇಕು ಎಂದು ಅವರು ಹೇಳಿದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜಪ್ಪ, ನಾವು ಅಂಬೇಡ್ಕರ್ ಹಾಕಿ ಕೊಟ್ಟ ಧ್ಯೇಯ ವಾಕ್ಯಗಳಾದ ಶಿಕ್ಷಣ ಸಂಘಟನೆ ಹೋರಾಟ ಇದರ ಮೂಲ ತತ್ವ ವನ್ನು ಅರಿತು ನಡೆದುಕೊಳ್ಳಬೇಕಾಗಿದೆ. ಹಳ್ಳಿ ಹಳ್ಳಿಗಳಲ್ಲೂ ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡ ಬೇಕು. ನಮ್ಮ ಮಕ್ಕಳು ಅರ್ಧ ದಲ್ಲೇ ಶಾಲೆ ಬಿಡದಂತೆ ನೋಡಿಕೊಳ್ಳಬೇಕು. ಮಕ್ಕಳು ಶಿಕ್ಷಣ ಮುಂದುವರಿಸಿ ಕೊಂಡು ಹೋಗುವ ಬಗ್ಗೆ ಪೋಷಕರು ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಮುಖ್ಯ ಭಾಷಣಗಾರರಾಗಿ ಮಾತನಾಡಿದ ವಕೀಲ, ದಲಿತ ಮುಖಂಡ ಮಂಜುನಾಥ ಗಿಳಿಯಾರು ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ನಾವು ಇನ್ನೂ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ದುರ್ಧೈವ ಬಂದೊದಗಿದೆ. ಈ ಹೋರಾಟ ಮಾಡಲು ನಮಗೆ ಸಂಘಟನೆಯ ಅಗತ್ಯವಿದೆ. ದಲಿತರಾದ ನಾವು ಮುಖ್ಯವಾಗಿ ಭೂ ಹೋರಾಟ ಮಾಡುವ ಅಗತ್ಯವಿದೆ. ಉಡುಪಿ ಜಿಲ್ಲೆಯಲ್ಲಿ ನಮಗಾಗಿಯೇ ಕಾದಿರಿಸಿದ ಡಿಸಿ ಮನ್ನಾ ಭೂಮಿಯು ಸುಮಾರು 1600 ಎಕರೆ ಇದ್ದು, ಇದನ್ನು ಪಡೆಯಲು ಜಿಲ್ಲೆಯಲ್ಲಿ ದೊಡ್ಡ ಚಳುವಳಿ ರೂಪಿಸುವ ಅಗತ್ಯ ಇದೆ ಎಂದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮುಖಂಡರಾದ ವಿಠಲ್ದಾಸ್ ಬನ್ನಂಜೆ, ವಾಸುದೇವ ಮುದೂರು, ಶ್ಯಾಮಸುಂದರ್ ತೆಕ್ಕಟ್ಟೆ, ಅಣ್ಣಪ್ಪ ನಕ್ರೆ, ವಸಂತಿ ಶಿವಾನಂದ, ಸಂಪಾವತಿ, ವಿಠಲ ಉಚ್ಚಿಲ, ಶ್ರೀನಿವಾಸ ಮಲ್ಯಾಡಿ, ಶಿವಾನಂದ ಮೂಡುಬೆಟ್ಟು, ವಾಸುದೇವ ಮಾಸ್ಟರ್, ರಾಘವೇಂದ್ರ ಬೆಳ್ಳೆ, ವಿಠಲ ಕೆ., ಶ್ರೀಧರ್ ಕುಂಜಿಬೆಟ್ಟು, ಶಿವಾನಂದ ಬಿರ್ತಿ, ಕೃಷ್ಣ ಎಲ್ಐಸಿ ಉಪಸ್ಥಿತರಿದ್ದರು.
ಶಂಕರ್ದಾಸ್ ಚೆಂಡ್ಕಳ ಮತ್ತು ಹರೀಶ್ಚಂದ್ರ ಹೋರಾಟ ಗೀತೆಗಳನ್ನು ಹಾಡಿದರು. ಭಾಸ್ಕರ ಮಾಸ್ಟರ್ ಸ್ವಾಗತಿಸಿದರು. ಪರಮೇಶ್ವರ ಉಪ್ಪೂರು ವಂದಿಸಿದರು.