ಉಡುಪಿ, ಮಂಗಳೂರಿಗೆ ಸಿಜಿಎಚ್ಎಸ್ ವೆಲ್ನೆಸ್ ಸೆಂಟರ್ ಮಂಜೂರು
ಉಡುಪಿ: ಕೇಂದ್ರ ಸರಕಾರದ ನಿವೃತ್ತ ನೌಕರರ ಬಹುಕಾಲದ ಬೇಡಿಕೆಯಾದ ಸೆಂಟ್ರಲ್ ಗವರ್ನಮೆಂಟ್ ಹೆಲ್ತ್ಸ್ಕೀಮ್ (ಸಿಜಿಎಚ್ಎಸ್) ವೆಲ್ನೆಸ್ ಸೆಂಟರ್ನ್ನು ಉಡುಪಿ ಮತ್ತು ಮಂಗಳೂರಿನಲ್ಲಿ ತೆರೆಯಲು ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅನುಮೋದನೆ ನೀಡಿದೆ.
ಕೇಂದ್ರ ಸರಕಾರದ ಹಾಲಿ ಹಾಗೂ ನಿವೃತ್ತ ನೌಕರರಿಗೆ ಕೇಂದ್ರ ಸರಕಾರದ ವಿವಿಧ ಆರೋಗ್ಯ ಸಂಬಂಧಿ ಯೋಜನೆಗಳ ಲಾಭ ಪಡೆಯಲು ಉಡುಪಿಯಲ್ಲಿ ಸಿಜಿಎಚ್ಎಸ್ ವೆಲ್ನೆಸ್ ಸೆಂಟರ್ (ಓಪಿಡಿ ಚಿಕಿತ್ಸಾ ಕೇಂದ್ರ) ಇಲ್ಲದಿರುವ ಬಗ್ಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಆಹಾರ ಸಂಸ್ಕರಣಾ ಉದ್ಯಮಗಳ ರಾಜ್ಯ ಖಾತೆ ಸಚಿವೆ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಇತ್ತೀಚೆಗೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾದ ಡಾ.ಮನ್ಸುಖ್ ಎಲ್.ಮಾಂಡವೀಯ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದು, ಜಿಲ್ಲೆಗೆ ಕೂಡಲೇ ಒಂದು ವೆಲ್ನೆಸ್ ಕೇಂದ್ರಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿದ್ದರು.
ಶೋಭ ಅವರ ಪ್ರಯತ್ನದಿಂದ ಬಹುದಿನದ ಬೇಡಿಕೆ ಈಡೇರಿದ್ದು, ಡಾ.ಮನ್ಸುಖ್ ಮಾಂಡವಿಯಾ ಅವರು ಫೆ.5ರಂದು ಶೋಭಾ ಕರಂದ್ಲಾಜೆ ಅವರಿಗೆ ಬರೆದ ಪತ್ರದಲ್ಲಿ ಉಡುಪಿ ಸೇರಿದಂತೆ ದೇಶದ 20 ನಗರಗಳಲ್ಲಿ ಸಿಜಿಎಚ್ಎಸ್ ವೆಲ್ನೆಸ್ ಸೆಂಟರ್ಗಳನ್ನು ತೆರೆಯುತ್ತಿರುವುದಾಗಿ ತಿಳಿಸಿದ್ದರು. ದೇಶಾದ್ಯಂತ ಮಂಜೂರಾತಿ ನೀಡಿರುವ 20 ಕೇಂದ್ರಗಳಲ್ಲಿ ಉಡುಪಿ ಮಾತ್ರವಲ್ಲದೇ ಮಂಗಳೂರು ಹಾಗೂ ಶಿವಮೊಗ್ಗಗಳಲ್ಲೂ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲು ಅನುಮತಿ ದೊರಕಿದೆ.
ಉಡುಪಿ ಹಾಗೂ ನೆರೆಯ ಜಿಲ್ಲೆಗಳಲ್ಲಿ 46ಕ್ಕೂ ಅಧಿಕ ಕೇಂದ್ರ ಸರಕಾರದ ಇಲಾಖೆಗಳ ಸುಮಾರು 4500 ಉದ್ಯೋಗಿ ಗಳಿದ್ದು, ಅಷ್ಟೇ ಸಂಖ್ಯೆಯ ನಿವೃತ್ತ ನೌಕರರೂ ಸೇರಿ ಒಟ್ಟು 9,000ಕ್ಕೂ ಅಧಿಕ ಕೇಂದ್ರ ಸರಕಾರದ ಉದ್ಯೋಗಿಗಳಿ ದ್ದಾರೆ. ಉಡುಪಿಯಲ್ಲಿ ಈ ಕೇಂದ್ರ ಪ್ರಾರಂಭವಾಗುವುದರಿಂದ ಅವರು ನಿಯಮಾನುಸಾರ ವೈದ್ಯಕೀಯ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ. ಹೀಗಾಗಿ ಉಡುಪಿಗೆ ಸಿಜಿಎಚ್ಎಸ್ ಕೇಂದ್ರ ಮಂಜೂರು ಮಾಡುವಂತೆ ಮಾಡಿಕೊಂಡ ಮನವಿಗೆ ಸ್ಪಂದಿಸಿ ವೆಲ್ನೆಸ್ ಸೆಂಟರ್ ಮಂಜೂರು ಮಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವಿಯಾರಿಗೆ ಶೋಭಾ ಕರಂದ್ಲಾಜೆ ಪತ್ರಿಕಾ ಪ್ರಕಟಣೆಯ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.