ಕೃತಕ ಬುದ್ಧಿಮತ್ತೆಯನ್ನು ಆರೋಗ್ಯ, ಶಿಕ್ಷಣದಲ್ಲಿ ಎಚ್ಚರಿಕೆಯಿಂದ ಬಳಸಿದರೆ ಹಲವು ಉತ್ತಮ ಸಾಧ್ಯತೆಗಳಿವೆ: ಪ್ರೊ.ಕೆ.ಪಿ.ರಾವ್
‘ಡಿಕೋಡಿಂಗ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ ಉಪನ್ಯಾಸ

ಉಡುಪಿ: ಕೃತಕ ಬುದ್ಧಿಮತ್ತೆ(ಎಐ)ಯನ್ನು ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಬಳಸಿದರೆ ಮಾನವನಿಗೆ ಪೂರಕವಾದ ಹಲವು ಸಾಧ್ಯತೆಗಳನ್ನು ಸಾಧಿಸಬಹುದಾಗಿದೆ ಎಂದು ಖ್ಯಾತ ಗಣಕ ಭಾಷಾ ಶಾಸ್ತ್ರಜ್ಞ ಮತ್ತು ವಿದ್ವಾಂಸ ಪ್ರೊ.ಕೆ.ಪಿ.ರಾವ್ ಹೇಳಿದ್ದಾರೆ.
ಮಣಿಪಾಲದ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸ್ನ ಆಶ್ರಯದಲ್ಲಿ ನಡೆದ ‘ಡಿಕೋಡಿಂಗ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ ವಿಷಯದ ಕುರಿತ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ಸಂಗೀತ, ಕಥನ ಕಲೆ, ವೀಡಿಯೊ ಎಡಿಟಿಂಗ್ ಮತ್ತು ಮಾಧ್ಯಮದಂತಹ ಸೃಜನಶೀಲ ಕ್ಷೇತ್ರಗಳಲ್ಲಿ ಎಐನಿಂದ ಬಹು ಉಪಯೋಗಗಳನ್ನು ಹೊಂದಬಹುದು ಎಂದು ಹೇಳಿದರು.
ಆದಾಗಿಯೂ, ಕೃತಕ ಬುದ್ಧಿಮತ್ತೆಯು ಅಂತಿಮವಾಗಿ ಮಾನವನ ಬುದ್ಧಿವಂತಿಕೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದ ಅವರು, ಎಐನ್ನು ಮಾನವ ಸ್ನೇಹಿಯಾಗಿ ರೂಪಿಸುವ ಸವಾಲು ಮಾನವನ ಮುಂದಿದೆ ಎಂದು ಅಭಿಪ್ರಾಯಪಟ್ಟರು.
ಮಾನವನ ಕೆಲಸಗಳಿಗೆ ಸಹಕಾರಿಯಾಗಲು ಆತನ ಸಹಾಯಕನಂತೆ ಅದನ್ನು ಬಳಸಬಹುದು. ತಾಂತ್ರಿಕ ಪ್ರಗತಿಯನ್ನು ನಿಲ್ಲಿಸಲು ಸಾಧ್ಯವಿಲ್ಲ, ಆದ್ದರಿಂದ ಅದನ್ನು ನಾವು ಎಚ್ಚರಿಕೆಯಿಂದ ಉಪಯೋಗಿಸಬೇಕು. ಇದನ್ನು ಮಾನವ ಕಲ್ಯಾಣ ಕ್ಕಾಗಿ, ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನಾವು ನೋಡಬೇಕಾ ಗಿದೆ ಎಂದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಅವರು ದತ್ತಾಂಶ, ಮಾಹಿತಿ ಮತ್ತು ಕೃತಕ ಬುದ್ಧಿಮತ್ತೆಯ ಜ್ಞಾನವನ್ನು ನಿಭಾಯಿಸಲು ಅಗತ್ಯವಾದ ಬುದ್ಧಿವಂತಿಕೆಯ ಕುರಿತು ಮಾತನಾಡಿದರು.
ತನಿಷ್ಕಾ ಕೋಟ್ಯಾನ್ ಸಂವಾದವನ್ನು ನಿರ್ವಹಿಸಿದರು. ಡಾ.ರೇಸ್ಮಿ ಭಾಸ್ಕರನ್, ಥಾಮಸ್, ಡಾ.ಜನಾರ್ದನ್ ಹಾವಂಜೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







