ಮಕ್ಕಳ ರಕ್ಷಣೆಯಲ್ಲಿ ನಾಗರಿಕರ ಪಾತ್ರ ಮಹತ್ವ: ನ್ಯಾ. ಶಾಂತವೀರ ಶಿವಪ್ಪ

ಉಡುಪಿ, ಫೆ.17: ಮಕ್ಕಳ ರಕ್ಷಣೆಯಲ್ಲಿ ನಾಗರಿಕರ ಪಾತ್ರ ಮಹತ್ವ ವಾದುದು. ಸಾರ್ವಜನಿಕರು ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಂಡು ಮಕ್ಕಳಿಂದ ಜರಗುವ ಅಪರಾಧವನ್ನು ತಡೆಗಟ್ಟುವ ಮೂಲಕ ಮುಂಬರುವ ದಿನಗಳಲ್ಲಿ ಮಕ್ಕಳಿಗೆ ಸುಸ್ಥಿರ ಸಮಾಜವನ್ನು ನಿರ್ಮಾಣಗೊಳಿಸಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದ್ದಾರೆ.
ಶನಿವಾರ ಬನ್ನಂಜೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ವಸತಿ ನಿಲಯದ ಮೇಲ್ವಿ ಚಾರಕರು ಮತ್ತು ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಬಾಲನ್ಯಾಯ ಕಾಯ್ದೆ 2015 ತಿದ್ದುಪಡಿ 2021, ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ಕಾಯ್ದೆ 2012, ಬಾಲ್ಯ ವಿವಾಹ ಕಾಯ್ದೆ ಹಾಗೂ ಬಾಲ ಕಾರ್ಮಿಕತೆ ಹಾಗೂ ಭಿಕ್ಷಾಟನೆ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳು ಅಪರಾಧ ಮಾಡುವ ಉದ್ದೇಶವನ್ನು ತಿಳಿಯುವುದರೊಂದಿಗೆ, ಅಪರಾಧ ಮಾಡುವಾಗ ಮಕ್ಕಳ ಮನಸ್ಥಿತಿಯನ್ನು ಅರಿತು ಮಕ್ಕಳೊಂದಿಗೆ ಯಾವ ರೀತಿಯಲ್ಲಿ ವರ್ತಿಸಬೇಕು ಎಂಬುದರ ಅರಿವು ಪೊಲೀಸರಿಗಿರಬೇಕು. ಪೊಲೀಸರು ಮಕ್ಕಳ ಕುರಿತಾದ ಕಾನೂನುಗಳು ಬದಲಾದಂತೆ ಕಾನೂನಿನ ತಿಳುವಳಿಕೆ ಪಡೆದುಕೊಳ್ಳಲು ಕಾರ್ಯಾಗಾರ ತರಬೇತಿ ಅತ್ಯವಶ್ಯಕವಾಗಿದೆ. ಪ್ರತಿಯೊಬ್ಬರು ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಕಾನೂನಿನ ತಿದ್ದುಪಡಿ ಗಳು ಗಮನಕ್ಕೆ ಬಾರದೇ ಹೋದಾಗ ಕಾನೂನಿನ ಪುನರ್ಮನನಗೊಳಿಸಲು ಕಾರ್ಯಾಗಾರವು ಸಹಕಾರಿಯಾಗಲಿದ್ದು, ಅವುಗಳನ್ನು ತಿಳಿದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳು ಸೂಕ್ಷ್ಮ ಮನೋಭಾವದವರಾಗಿದ್ದು ಸಮಾಜದಲ್ಲಿ ನಡೆಯುವ ಅಪಾಯಗಳ ಗಂಭೀರತೆಯ ಅರಿವು ಅವರಿಗೆ ಇರುವುದಿಲ್ಲ. ಹೀಗಾಗಿ ಶೀಘ್ರವಾಗಿ ಅನೇಕ ಸಮಸ್ಯೆಗಳಿಗೆ ಒಳಗಾಗುತ್ತಾರೆ, ಮಕ್ಕಳಿಗೆ ಸಂಬಂಧಪಟ್ಟ ಇಲಾಖೆಗಳು ಈ ಎಲ್ಲಾ ಅಂಶಗಳನ್ನು ಗಮನ ದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ, ಕರಾವಳಿ ಜಿಲ್ಲೆಗಳಲ್ಲಿ ಮಕ್ಕಳ ರಕ್ಷಣೆ ಕಾಯ್ದೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರು ವುದು ಸಂತಸದ ವಿಚಾರವಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಡುಪಿ ಜಿಲ್ಲೆ ಮಾದರಿಯಾಗಲಿ ಎಂದು ಆಶಿಸಿದರು.
ಬಾಲ್ಯದಲ್ಲಿ ನಕರಾತ್ಮಕ ಅನುಭವಗಳನ್ನು ಅನುಭವಿಸಿ ಮಕ್ಕಳು ಯೌವನ ದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯವಿಲ್ಲ. ಮಕ್ಕಳಲ್ಲಿ ಉಂಟಾಗುವ ಅನೇಕ ಬದಲಾವಣೆಗಳಿಗೆ ನಾವು ಸ್ಪಂದಿಸಿದಾಗ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಾಗುತ್ತದೆ ಎಂದ ಡಾ.ತಿಪ್ಪೇಸ್ವಾಮಿ, ದೇಶದಲ್ಲಿ ಅನೇಕ ಮಕ್ಕಳು ತಮ್ಮ ಬಾಲ್ಯವನ್ನು ಅನುಭವಿಸದೆ ಸಮಸ್ಯೆಗಳನ್ನು ಎದುರಿಸಿಕೊಂಡು ಬಂದಿದ್ದು ಅಂತಹ ಗುಂಪುಗಳನ್ನು ಗುರುತಿಸಿ ಸಮಾಜದಲ್ಲಿ ಅವರಿಗೆ ಉತ್ತಮ ಜೀವನ ವನ್ನು ಕಲ್ಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ, ಎಸ್ಪಿ ಡಾ. ಸಿದ್ಧಲಿಂಗಪ್ಪ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ವಿಘ್ನೇಶ್ ಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ದರ್ಶಿ ಶರ್ಮಿಳಾ ಎಸ್ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು ಪೊಲೀಸ್ ಮಹಾನಿರ್ದೇಶಕ ತರಬೇತಿ ಕಛೇರಿಯ ಪೊಲೀಸ್ ತರಬೇತುದಾರ ರೋಹಿತ್ ಮತ್ತು ಮೈಸೂರು ಪೊಲೀಸ್ ಆಯುಕ್ತರ ಕಚೇರಿಯ ಪೊಲೀಸ್ ತರಬೇತುದಾರ ಪ್ರಸನ್ನ ಕುಮಾರ್ ಜಿ.ಎಸ್ ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ಎಂ. ಸ್ವಾಗತಿಸಿ, ಪ್ರಕಾಶ್ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಕಪಿಲಾ ವಂದಿಸಿದರು.







