ಕಾಪು: ಸಂವಿಧಾನ ಜಾಗೃತಿ ಜಾಥಾದಲ್ಲಿ ಮೇಳೈಸಿದ ಸಾಂಸ್ಕೃತಿಕ ವೈವಿಧ್ಯ

ಕಾಪು, ಫೆ.18: ಇಂದು ಕಾಪು ದೀಪಸ್ತಂಭದ ಬಳಿ ನಡೆದ ಸಂವಿಧಾನ ಜಾಗ್ರತಿ ಜಾಥಾ ಕಾರ್ಯಕ್ರಮಕ್ಕೆ ಮುನ್ನ ಕಾಪು ಪ್ರಾಥಮಿಕ ಶಾಲಾ ಆವರಣ ದಿಂದ ನಡೆದ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಜಾಥಾದಲ್ಲಿ ಶಾಲಾ ಮಕ್ಕಳಿಂದ ಬ್ಯಾಂಡ್ಸೆಟ್, ಎನ್ಸಿಸಿ, ಪೆರೆಡ್, ವಿವಿಧ ದಲಿತ ಸಂಘಟನೆಗಳು ಹಾಗೂ ವಿದ್ಯಾರ್ಥಿ ಗಳಿಂದ ಮೆರವಣಿಗೆ ನಡೆಯಿತು. ಕಾಪು ಬೀಚ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೀನುಗಾರಿಕಾ ಬೋಟ್ನಲ್ಲಿ ಸಂವಿದಾನ ಪೀಠಿಕೆಯ ಗಾಳಿಪಟ ಹಾರಿಸುವುದು, ಸಂವಿಧಾನ ಜಾಥ ಸಹಿ ಸಂಗ್ರಹ, ರೂಬಿಕ್ಸ್ ಕ್ಯೂಬ್ ಮೂಲಕ ಸಂವಿಧಾನ ಚಿತ್ರ ರಚನೆ ನಡೆದವು.
ಅಲ್ಲದೇ ಸ್ಥಳೀಯ ಕಲಾವಿದರಿಂದ ಪೂಜಾ ಕುಣಿತ, ಸಮಾಜ ಕಲ್ಯಾಣ ಇಲಾಖೆ ನಿಲಯಾರ್ಥಿಗಳಿಂದ ಸಂವಿಧಾನ ಪೀಠಿಕೆ ಕುಣಿತ, ಯಕ್ಷಗಾನ ನೃತ್ಯ ರೂಪಕ, ಪೌರ ಕಾರ್ಮಿಕರಿಗೆ ಸಂವಿಧಾನ ಪೀಠಿಕೆ ನೀಡಿ ಸನ್ಮಾನ, ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧನೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.
ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್, ಉಪಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅನಿತಾ ಮಡ್ಲೂರ್, ಕಾಪು ತಹಶೀಲ್ದಾರ್ ಪ್ರತಿಭಾ, ಮುಖ್ಯಾಧಿಕಾರಿ ಸಂತೋಷ್, ವಿವಿಧ ದಲಿತ ಸಂಘಟನೆಗಳ ಮುಖಂಡರು, ಕಾಪು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜೇಮ್ಸ್ ಡಿ ಸಿಲ್ವಾ ಹಾಗೂ ಇತರರು ಉಪಸ್ಥಿತರಿದ್ದರು.







