ಅಕ್ರಮವಾಗಿ ಸಾರಾಯಿ ವಶದಲ್ಲಿಟ್ಟುಕೊಂಡ ಆರೋಪಿಗೆ ಜೈಲುಶಿಕ್ಷೆ, ದಂಡ

ಉಡುಪಿ: ತಾಲೂಕಿನ ಬೈರಂಪಳ್ಳಿ ಗ್ರಾಮದ ಕುಂತಾಲುಕಟ್ಟೆ ಎಂಬಲ್ಲಿ ತನ್ನ ಮನೆಯ ಶೆಡ್ನಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಇರಿಸಿದ್ದ ಆರೋಪಿ ಮಂಜುನಾಥ್ ಕುಂದರ್ (43)ಗೆ ಉಡುಪಿ ನ್ಯಾಯಾಲಯ ಶಿಕ್ಷೆ ಹಾಗೂ ದಂಡ ವಿಧಿಸಿದೆ.
2020ರ ಡಿ.8ರಂದು ಸಂಜೆ ಈತನ ಮನೆಯ ಮೇಲೆ ದಾಳಿ ನಡೆಸಿದ ಅಬಕಾರಿ ಉಪನೀರೀಕ್ಷಕ ಶಿವಶಂಕರ್ ಯು. ಅಕ್ರಮ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು. ಅಬಕಾರಿ ನಿರೀಕ್ಷಕರಾದ ಜ್ಯೋತಿ ಎನ್. ತನಿಖೆ ನಡೆಸಿ ನ್ಯಾಯಾಲ ಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ಉಡುಪಿಯ ಪ್ರಧಾನ ಸಿ.ಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶರಾದ ದೀಪಾ ಅವರು ಆರೋಪಿ ಮೇಲಿನ ಪ್ರಕರಣವು ಸಾಬೀತಾಗಿರುವಾದಾಗಿ ತೀರ್ಮಾನಿಸಿ ಅಕ್ರಮ ಸಾರಾಯಿ ದಾಸ್ತಾನು ಮಾಡಿದ್ದ ಮಂಜು ನಾಥ್ ಕುಂದರ್ಗೆ ಅಬಕಾರಿ ಕಾಯ್ದೆ ಕಲಂ 32(1)ರಡಿ ಒಂದು ವರ್ಷ ಕಠಿಣ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿ ಶುಕ್ರವಾರ ತೀಪು ನೀಡಿದರು.
ದಂಡ ಪಾವತಿಸಲು ತಪ್ಪಿದಲ್ಲಿ 2 ತಿಂಗಳ ಸಾಧಾರಣಾ ಶಿಕ್ಷೆಯನ್ನು ವಿಧಿಸಲಾಗಿದೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಹಿರಿಯ ಸಹಾಯಕ ಅಭಿಯೋಜಕ ಹೆಚ್.ಎಂ.ನದಾಫ್ ವಾದ ಮಂಡಿಸಿದ್ದರು.





