ಮಲ್ಪೆ ಕಡಲತೀರದಲ್ಲಿ ಬ್ಲಾಗರ್ಗಳ ಸಮಾವೇಶ

ಉಡುಪಿ, ಫೆ.24: ಉಡುಪಿ ಸೇರಿದಂತೆ ಪಶ್ಚಿಮದ ಕರಾವಳಿ ಜಿಲ್ಲೆಗಳು ಪ್ರಾಕೃತಿಕವಾಗಿ ಅತ್ಯಂತ ಸುಂದರ ಪ್ರದೇಶಗಳು. ಉಡುಪಿ ಜಿಲ್ಲೆ ಪ್ರಾಕೃತಿಕ ಸೌಂದರ್ಯದ ತಾಣಗಳೊಂದಿಗೆ, ಹಲವು ಧಾರ್ಮಿಕ ಕೇಂದ್ರಗಳು, ರಮಣೀಯ ಕಡಲ ತೀರಗಳು, ಹಳ್ಳ ಕೊಳ್ಳಗಳುಗಳು ಸೇರಿದಂತೆ ಅನೇಕ ಪ್ರವಾಸಿತಾಣಗಳನ್ನು ಹೊಂದಿದ್ದು, ದೇಶ-ವಿದೇಶಗಳ ಸಾವಿರಾರು ಪ್ರವಾಸಿಗ ರನ್ನು ಆಕರ್ಷಿಸುತ್ತಿದೆ. ಆದುದರಿಂದ ಜಿಲ್ಲೆಯ ಪ್ರವಾಸೋದ್ಯಮದ ಬೆಳವಣಿಗೆಗೆ ಬ್ಲಾಗರ್ಸ್ಗಳು ಇನ್ನಷ್ಟು ಪ್ರೋತ್ಸಾಹವನ್ನು ನೀಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಗಳ ವತಿಯಿಂದ ಮಲ್ಪೆ ಬೀಚ್ನಲ್ಲಿ ಶನಿವಾರ ನಡೆದ ಬ್ಲಾಗರ್ಸ್ ಮೀಟ್ 2.0 ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಪ್ರವಾಸೋದ್ಯಮದ ಏಳಿಗೆಯ ಉದ್ದೇಶದಿಂದ ಈಗಾಗಲೇ ಜಿಲ್ಲೆಯ ಹಲವು ಬೀಚ್ಗಳ ಅಭಿವೃದ್ಧಿ ಕಾರ್ಯ ಗಳನ್ನು ಕೈಗೊಳ್ಳಲಾಗಿದೆ ಎಂದೂ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಜಿಲ್ಲೆಯ ಸಂಪ್ರದಾಯಗಳು, ಪಾದಪದ್ಧತಿಗಳು, ಚಟುವಟಿಕೆ ಗಳು, ನೈಸರ್ಗಿಕ ಸೌಂದರ್ಯಗಳನ್ನು ಪ್ರಚುರ ಪಡಿಸಿ ಪರಿಚಯಿಸಲು ಸಾಮಾಜಿಕ ಜಾಲತಾಣಗಳ ಪ್ರಭಾವಿ ಬ್ಲಾಗರ್ಗಳ ಸಹಯೋಗದೊಂದಿಗೆ ‘ಬ್ಲಾಗರ್ಸ್ ಮೀಟ್ 2.0’ನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ, ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪ್ರವಾಸೋದ್ಯಮದ ಬೆಳವಣಿಗೆಗಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಆಯೋಜಿಸಿದ್ದು, ಪ್ರವಾಸಿ ತಾಣಗಳ ಅಭಿವೃದ್ಧಿಯಲ್ಲಿ ಇದು ಇನ್ನಷ್ಟು ಸಹಕಾರಿಯಾಗಲಿದೆ ಎಂದರು.
ಬ್ಲಾಗರ್ಸ್ಗಳು ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರಿಗೆ ಮಾಹಿತಿ ನೀಡುವುದರಿಂದ ಜಿಲ್ಲೆಯ ಕುರಿತಂತೆ ಎಲ್ಲರಿಗೂ ಮಾಹಿತಿ ತಲುಪಿ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುವುದರ ಜೊತೆಗೆ ಈ ಭಾಗದ ಜನರಿಗೆ ಉದ್ಯೋಗಾವಕಾಶಗಳು ಲಭಿಸಿ ಆರ್ಥಿಕ ಲಾಭವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂ ಅಧ್ಯಕ್ಷ ಮನೋಹರ್ ಶೆಟ್ಟಿ, ದೇಶ-ವಿದೇಶಗಳ ಜನರಿಗೆ ಜಿಲ್ಲೆಯ ಸಂಸ್ಕೃತಿ, ಆಚರಣೆ ಹಾಗೂ ಪ್ರವಾಸಿ ತಾಣಗಳ ಕುರಿತು ಮಾಹಿತಿ ನೀಡುವುದರೊಂದಿಗೆ ಪ್ರವಾಸಿಗರನ್ನು ಜಿಲ್ಲೆಯತ್ತ ಸೆಳೆಯುವ ಕಾರ್ಯವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಸಿ. ಯು. ಕುಮಾರ್, ಟ್ರಾವೆಲ್ ಅಸೋಸಿಯೇಷನ್ ಅಧ್ಯಕ್ಷ ನಾಗರಾಜ ಹೆಬ್ಬಾರ್, ಉಡುಪಿ ಜಿಲ್ಲಾ ಪ್ರವಾಸೋದ್ಯಮದ ಭಾಗೀದಾರರು, ರಾಷ್ಟ್ರ- ಅಂತಾರಾಷ್ಟ್ರ ಮಟ್ಟದ ಬ್ಲಾಗರ್ಗಳು, ಪ್ರವಾಸೋದ್ಯಮ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದಿನ ಕಾರ್ಯಕ್ರಮ ಮಲ್ಪೆ ಬೀಚ್ನಲ್ಲಿರುವ ತೇಲುವ ಸೇತುವೆ (ಫ್ಲೋಟಿಂಗ್ ಬ್ರಿಡ್ಜ್)ಯಲ್ಲಿ ನಡೆದರೆ, ನಾಳೆ ಫೆ.25ರಂದು ಕೋಟೇಶ್ವರದ ಯುವ ಮೆರಿಡಿಯನ್ ರೆಸಾರ್ಟ್ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಫೆ.26ರ ಸೋಮವಾರ ಸಂಜೆ 4:30ಕ್ಕೆ ಮಣಿಪಾಲದ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ನಲ್ಲಿ ‘ಬ್ಲಾಗರ್ಸ್ ಮೀಟ್ 2.0’ ಕಾರ್ಯಕ್ರಮದ ಸಮಾಲೋಚನಾ ಸಭೆ ನಡೆಯಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಸಿ.ಯು.ತಿಳಿಸಿದ್ದಾರೆ.







